ಎರಡು ಕುಟುಂಬಗಳ ನಡುವಿನ ಗಲಭೆಗೆ ಇತಿಶ್ರೀ ಹಾಡಲು ಮುಂದಾದ ಜಿಲ್ಲಾಡಳಿತ
ಬಳ್ಳಾರಿ, ಜೂನ್. 12. ಎರಡು ಕುಟುಂಬಗಳ ಮಧ್ಯೆಯಿದ್ದ ಭಿನ್ನಾಭಿಪ್ರಾಯದಿಂದ ಇಡೀ ಗ್ರಾಮದಲ್ಲಿ ನಡೆಯುತ್ತಿದ್ದ ಜಾತಿ ವೈಷಮ್ಯದ ಗಲಭೆಗೆ ಇತಿಶ್ರೀ ಹಾಡಲು ಹಾಗೂ ಗ್ರಾಮದಲ್ಲಿ ಶಾಂತಿ, ಸೌಹಾರ್ದತೆ ಪುನಃ ಸ್ಥಾಪಿಸಲು ಜಿಲ್ಲಾ ಪೊಲೀಸ್ ಮತ್ತು ಜಿಲ್ಲಾಡಳಿತ ಪಾದಯಾತ್ರೆ ನಡೆಸಿದೆ.
ಗೋನಾಳು... ಕಂಪ್ಲಿ ತಾಲೂಕು ವ್ಯಾಪ್ತಿಯ ಕುಗ್ರಾಮ. 600ಕ್ಕೂ ಹೆಚ್ಚಿನ ಜನಸಂಖ್ಯೆ ಇರುವ ಈ ಗ್ರಾಮದಲ್ಲಿ ಎರಡು ಕುಟುಂಬಗಳ ಮಧ್ಯೆ ಸದಾಕಾಲ ವೈಯಕ್ತಿಕ ಜಗಳ ನಡೆಯುತ್ತಲೇ ಇರುತ್ತದೆ. ಈ ಜಗಳ ಕೆಲವೊಮ್ಮೆ ಇಡೀ ಗ್ರಾಮಕ್ಕೆ ವ್ಯಾಪಿಸಿ, ಗ್ರಾಮವು ಎರಡು ಭಾಗಗಳಾಗಿ ಒಡೆದು, ಸಮಸ್ಯೆ ದೊಡ್ಡದಾಗುತ್ತಿತ್ತು.
ಶಿರಸಿ ಗಲಭೆ ಪ್ರಕರಣ: 62 ಮಂದಿಗೆ ಮಧ್ಯಂತರ ಜಾಮೀನು
ಒಂದೆಡೆ ಜಾತಿ ವೈಷಮ್ಯ, ಮತ್ತೊಂದೆಡೆ ಕಾನೂನು ಸುವ್ಯವಸ್ಥೆಯ ಸಮಸ್ಯೆ. ಅಭಿವೃದ್ಧಿ ಕಾಣದೇ ಗ್ರಾಮಸ್ಥರು ನರಳುವ ಹಂತ ತಲುಪಿತ್ತು.
ಕಳೆದ ಹದಿನೈದು ದಿನಗಳ ಹಿಂದೆ ನಡೆದ ಗಲಭೆಯಿಂದ ಇಡೀ ಊರು ಖಾಲಿಯಾಗಿ ವೃದ್ಧರು, ಅನಾರೋಗ್ಯ ಪೀಡಿತರು ಮತ್ತು ಅವಲಂಬಿತರು ಮಾತ್ರವೇ ಊರಲ್ಲಿ ಉಳಿದು, ಉಳಿದ ಎಲ್ಲರೂ ಊರು ಬಿಟ್ಟಿದ್ದರು.
ಊರಲ್ಲಿ ಬಿಕೋ ಎನ್ನುವ ಸ್ಥಿತಿ ನಿರ್ಮಾಣವಾಗಿತ್ತು. ಉತ್ತಮ ಮಳೆ ಸುರಿದಿದ್ದರೂ, ಕೃಷಿ ಮಾಡುವವರೂ ಊರಲ್ಲಿ ಇಲ್ಲವಾಗಿ ಕೃಷಿ ಕೃಷವಾಗಿತ್ತು. ಜಿಲ್ಲಾಡಳಿತ ಮತ್ತು ಜಿಲ್ಲಾ ಪೊಲೀಸ್ ಒಟ್ಟಾಗಿ ಕೂತು, ಸಮಸ್ಯೆಗೆ ಶಾಶ್ವತ ಪರಿಹಾರ ಮೂಡಿಸಲು ನಿರ್ಧರಿಸಿದ್ದೇ ಈ ಸಾಮರಸ್ಯ ನಡಿಗೆ. ಕಾರ್ಯಕ್ರಮ ಭಾನುವಾರ ಯಶಸ್ವಿಯಾಗಿ ನಡೆಯಿತು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ ರಂಗರಾಜನ್, ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಡಾ. ಕೆ.ವಿ. ರಾಜೇಂದ್ರ, ಶಾಸಕ ಜೆ.ಎನ್. ಗಣೇಶ್ ನೇತೃತ್ವದಲ್ಲಿ ಶಾಂತಿ ಸಭೆ ನಡೆದು, ಇಡೀ ಗ್ರಾಮವನ್ನು ಒಗ್ಗೂಡಿಸಲಾಯಿತು.
ಅಕ್ಕಪಕ್ಕದ ಗ್ರಾಮಸ್ಥರು, ವಿವಿಧ ಸಂಘಟನೆಗಳ ಪದಾಧಿಕಾರಿಗಳನ್ನು ಈ ಸಭೆಗೆ ಆಹ್ವಾನಿಸಿ, ಅಭಿವೃದ್ಧಿಯ ಕುರಿತು ಬಹಿರಂಗ ಸಮಾಲೋಚನೆ ನಡೆಸಲಾಯಿತು.
ಬಳ್ಳಾರಿ ವಿಜಯನಗರ ಶ್ರೀಕೃಷ್ಣ ದೇವರಾಯ ವಿಶ್ವವಿದ್ಯಾಲಯದ ಎಂ.ಎಸ್.ಡಬ್ಯ್ಲು ವಿದ್ಯಾರ್ಥಿಗಳು ನಡೆಸಿದ ಆಪ್ತಸಮಾಲೋಚನೆ ಮತ್ತು ಚಿಗುರು ಕಲಾತಂಡದ ಕಲಾವಿದರ ಧ್ವನಿಯಲ್ಲಿ ಮೊಳಗಿದ ಸಾಮರಸ್ಯದ ಹಾಡುಗಳು ಗ್ರಾಮಸ್ಥರ ಮನಸೂರೆಗೊಂಡವು.
ಅಧಿಕಾರಿಗಳು, ಜನಪ್ರತಿನಿಧಿಗಳು ಮತ್ತು ವಿವಿಧ ಸಂಘಟನೆಗಳ ಪದಾಧಿಕಾರಿಗಳು, ವಿವಿಧ ಪಕ್ಷಗಳ ಮುಖಂಡರು ಕಾಲ್ನಡಿಗೆಯಲ್ಲಿ ಸಂಚರಿಸಿ, ಗ್ರಾಮದಲ್ಲಿದ್ದ ವಾತಾವರಣವನ್ನು ತಿಳಿಗೊಳಿಸಿ, ಕೃಷಿಯಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳಲು ಗ್ರಾಮಸ್ಥರನ್ನು ಮನವಿ ಮಾಡಿದರು.