ಕಾಂಗ್ರೆಸ್ ಪರ ಪ್ರಚಾರ: ಉಪನ್ಯಾಸಕ ಪಾರಿ ಬಸವರಾಜ್ ವಿರುದ್ಧ ಶಿಸ್ತುಕ್ರಮ
ಬಳ್ಳಾರಿ, ಏಪ್ರಿಲ್. 26 : ಹಗರಿಬೊಮ್ಮನಹಳ್ಳಿ ತಾಲೂಕಿನ ಮೋರಗೇರಿ ಸಿಆರ್ ಸಿ ವಾಟ್ಸ್ ಅಪ್ ಗ್ರೂಪ್ ಗೆ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಭೀಮಾನಾಯ್ಕ್ ಚುನಾವಣಾ ಪ್ರಚಾರದ ಆಡಿಯೋ ಕ್ಲಿಪ್ ಗಳನ್ನು ಅಪ್ ಲೋಡ್ ಮಾಡಿರುವ ಡಯಟ್ ನ ಹಿರಿಯ ಉಪನ್ಯಾಸಕ ಪಾರಿ ಬಸವರಾಜ್ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲು ಆಗ್ರಹಿಸಿ ಶಿಕ್ಷಕರು ಗುರುವಾರ ಜಿಪಂ ಸಿಇಓಗೆ ಮೂಕರ್ಜಿಯ ದೂರುಗಳನ್ನು ನೀಡಿದರು.
ಆರ್ಟಐ ಕಾರ್ಯಕರ್ತ ಪಂಪಯ್ಯ ವಿ.ಮುತ್ಕೂರು, ಚುನಾವಣಾಧಿಕಾರಿ ಅಲ್ಲಾಭಕ್ಷ, ಸ್ವೀಪ್ ಸಮಿತಿ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಸಿಇಓ ಡಾ. ರಾಜೇಂದ್ರ ಅವರಿಗೆ ದೂರು ರವಾನಿಸಿದ್ದು ಶಿಸ್ತು ಕ್ರಮಕ್ಕೆ ಆಗ್ರಹಿಸಲಾಗಿದೆ.
ಅಂದು ಬಳ್ಳಾರಿ, ಇಂದು ಬಾದಾಮಿ: ಸಿದ್ಧರಾಮಯ್ಯ v/s ಶ್ರೀರಾಮುಲು
ಶಿಕ್ಷಣ ಇಲಾಖೆಯ ಸಿಆರ್ ಸಿಗಳು ತಮ್ಮ ವ್ಯಾಪ್ತಿಗೆ ಬರುವ ಶಿಕ್ಷಕರು, ಶಾಲೆಗಳ ಸಿಬ್ಬಂದಿಗೆ ಮಾಹಿತಿ ತಿಳಿಸಲು ವಾಟ್ಸ್ ಅಪ್ ಗ್ರೂಪ್ ರಚಿಸಿಕೊಳ್ಳುವುದು ಸಾಮಾನ್ಯವಾಗಿದೆ. ಇದರಂತೆ ಹಗರಿಬೊಮ್ಮನಹಳ್ಳಿಯ ಸಿಆರ್ ಸಿ ಯೂ ವಾಟ್ಸಪ್ ಗ್ರೂಪ್ ರಚಿಸಿಕೊಂಡಿದ್ದು, ಡಯಟ್ ನ ಹಿರಿಯ ಉಪನ್ಯಾಸಕ ಪಾರಿ ಬಸವರಾಜ್ ಅವರು ಸದಸ್ಯರಾಗಿದ್ದಾರೆ. ಆದರೆ, ಈ ಗ್ರೂಪ್ ನಲ್ಲಿ ಪಾರಿ ಬಸವರಾಜ್ ಭೀಮಾನಾಯ್ಕ ಪರವಾಗಿ ಚುನಾವಣಾ ಪ್ರಚಾರ ಕೈಗೊಂಡಿದ್ದೂ ಅಲ್ಲದೇ, ಆಡಿಯೋ ಕ್ಲಿಪ್ ಗಳನ್ನು ಅಪ್ ಲೋಡ್ ಮಾಡಿದ್ದಾರೆ.
ತಪ್ಪದೇ ಭೀಮಾನಾಯ್ಕ ಅವರಿಗೆ ಮತ ಹಾಕಿ ಎಂದು ಆದೇಶ ನೀಡಿರುವುದು ಇದೀಗ ಅನೇಕರ ಶಿಕ್ಷಕರ ಆಕ್ರೋಶಕ್ಕೆ ಗುರಿ ಆಗಿದೆ. ಇದಕ್ಕೆ ಪ್ರತ್ಯುತ್ತರವಾಗಿ ಶಿಕ್ಷಕ ರಾಮಾನಾಯ್ಕ್ ಸಕ್ರಿಹಳ್ಳಿ ಎಂಬುವವರು ಕಾಂಗ್ರೆಸ್ಸಿನ ಪ್ರಚಾರಕ್ಕೆ ಇದು ವೇದಿಕೆ ಅಲ್ಲ ಎಂದು ತಮ್ಮ ಅಧಿಕಾರಿಗೆ ಖಾರವಾಗಿಯೇ ಪ್ರತಿಕ್ರಿಯಿಸಿದ್ದಾರೆ.
ಚುನಾವಣಾ ನೀತಿ ಸಂಹಿತೆ ಅಧ್ಯಕ್ಷ ಬಿ.ಮಲ್ಲಾನಾಯ್ಕ್ ಮೋರಗೇರಿ, ಸಿಆರ್ ಸಿ ಗ್ರೂಪ್ ಅಡ್ಮಿನ್ ಸುರೇಶ್ ಮೋರಗೇರಿ ಅವರನ್ನು ಕರೆಸಿ ಈ ಆಡಿಯೋ ಕ್ಲಿಪ್ ಗಳನ್ನು ಪಾರಿ ಬಸವರಾಜ್ ಅವರು ಪೋಸ್ಟ್ ಮಾಡಿದ್ದು ಎಂದು ಸ್ಪಷ್ಟೀಕರಣ ಬರೆಸಿಕೊಂಡಿದ್ದರೆ, ಪಾರಿ ಬಸವರಾಜ್, ಇದು ಅಚಾತುರ್ಯದಿಂದ ನನ್ನ ಮಕ್ಕಳು ಮಾಡಿರುವ ಕೃತ್ಯ. ತಪ್ಪಾಗಿದೆ ಎಂದು ಬರೆದುಕೊಟ್ಟಿದ್ದಾರೆ. ಆದರೆ, ಅಧಿಕಾರಿ ಬಿ.ಮಲ್ಲಾನಾಯ್ಕ್, ಈ ಎಲ್ಲಾ ಮಾಹಿತಿಯನ್ನು ಡಾ. ರಾಜೇಂದ್ರ ಅವರಿಗೆ ಅಧಿಕೃತವಾಗಿ ಕಳುಹಿಸಿದ್ದಾರೆ.
ಪಾರಿ ಬಸವರಾಜ ಅವರು ಕ್ಷೇತ್ರ ಶಿಕ್ಷಣಾಧಿಕಾರಿಯಾಗಿ ಸೇವೆ ಸಲ್ಲಿಸುವಾಗ, ಶಾಸಕ ಭೀಮಾನಾಯ್ಕ್ ಅವರ ಆತ್ಮೀಯತೆಯ ಕಾರಣ ಶಿಕ್ಷಕರ ಮೇಲೆ ದಬ್ಬಾಳಿಕೆ, ದೌರ್ಜನ್ಯ ನಡೆಸಿದ್ದೂ ಅಲ್ಲದೇ, ಇಲಾಖೆಯಲ್ಲಿ ಭ್ರಷ್ಟಾಚಾರ ತಾಂಡವಾಡುವಂತೆ ಮಾಡಿದ್ದರು. ಅಧಿಕಾರ ದುರುಪಯೋಗದ ಕೇಂದ್ರಬಿಂದುವಾಗಿತ್ತು ಎಂದು ಶಿಕ್ಷಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.