ಧರ್ಮಸ್ಥಳ ಮಂಜುನಾಥಸ್ವಾಮಿ ದೇವಾಲಯ ಟ್ರಸ್ಟಿನಿಂದ ಮಹತ್ವದ ಕೆಲಸ
ಬಳ್ಳಾರಿ, ಜುಲೈ 29: ಚಾಲುಕ್ಯ ಸಾಮ್ರಾಜ್ಯದ, ಹನ್ನೆರಡನೇ ಶತಮಾನದ ಎಂದು ಹೇಳಲಾಗುವ, ಶಿವನ ದೇವಾಲಯವೊಂದನ್ನು, ಧರ್ಮಸ್ಥಳ ದೇವಾಲಯದ ಟ್ರಸ್ಟ್, ಸರಕಾರ ಮತ್ತು ಸಾರ್ವಜನಿಕರ ಸಹಕಾರದೊಂದಿಗೆ ಅಭಿವೃದ್ದಿ ಪಡಿಸಿದೆ.
ಬಳ್ಳಾರಿ ಜಿಲ್ಲೆ, ಸಂಡೂರು ತಾಲೂಕಿನ, ತಳೂರಿನಲ್ಲಿ, ಪಾಳುಬಿದ್ದ ಸ್ಥಿತಿಯಲ್ಲಿದ್ದ ಶಿವನ ದೇವಾಲಯವನ್ನು, ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ತಾನ ಟ್ರಸ್ಟ್ ಜೀರ್ಣೋದ್ದಾರ ಮಾಡಿದೆ.
ಭಕ್ತರಿಗೆ ಧರ್ಮಸ್ಥಳ ದೇವಾಲಯ ಓಪನ್, ಕಂಡೀಷನ್ ಅಪ್ಲೈ: ಮಹತ್ವದ ಪ್ರಕಟಣೆ
ಈ ದೇವಾಲಯದ, ಗರ್ಭಗುಡಿ, ಅಂತರಾಳ, ತೆರೆದ ಮಂಟಪ ಮತ್ತು ವಿಮಾನ ಮಂಟಪವನ್ನು ಕದಂಬರ ಶೈಲಿಯಲ್ಲಿ ಟ್ರಸ್ಟ್, ಜೀರ್ಣೋದ್ಧಾರಗೊಳಿಸಿದೆ.
ಕಳೆದ ಹಲವು ವರ್ಷಗಳಿಂದ, ನಾಡಿನ ವಿವಿಧ ಧಾರ್ಮಿಕ ಕ್ಷೇತ್ರಗಳು ಐತಿಹಾಸಿಕ,ವಾಸ್ತುಶಿಲ್ಪ ಮತ್ತು ಧಾರ್ಮಿಕ ಹಿನ್ನಲೆಯುಳ್ಳ ಪಾರಂಪರಿಕ ತಾಣಗಳನ್ನು ಧರ್ಮಸ್ಥಳ ಧರ್ಮೋತ್ತಾನ ಟ್ರಸ್ಟ್ ಜೀರ್ಣೋದ್ದಾರ ಮಾಡುವ ಕೆಲಸವನ್ನು ಮಾಡುತ್ತಿದೆ.
ಧರ್ಮೋತ್ತಾನ ಟ್ರಸ್ಟ್ ಶೇ. 40%, ರಾಜ್ಯ ಸರಕಾರ ಶೇ. 40% ಮತ್ತು ಸ್ಥಳೀಯರ ಶೇ. 20% ಸಹಕಾರದಿಂದ ಈ ಕೆಲಸವನ್ನು ಮಾಡಲಾಗುತ್ತಿದೆ. ಕರಾವಳಿ ಜಿಲ್ಲೆಗಳ ಹಲವು ಐತಿಹಾಸಿಕ ದೇವಾಲಯ, ದೈವಗುಡಿಗಳ ಜೀರ್ಣೋದ್ದಾರಕ್ಕೆ, ಧರ್ಮಸ್ಥಳ ಟ್ರಸ್ಟ್ ಹಿಂದಿನಿಂದಲೂ, ದೇಣಿಗೆ ನೀಡುತ್ತಿದೆ.
ದೇವಾಲಯದ ಮೂಲ ಸ್ವರೂಪಕ್ಕೆ ಧಕ್ಕೆ ಬಾರದಂತೆ, ಮೂಲ ಶಿಲೆಗಳನ್ನೇ ಹೆಚ್ಚಾಗಿ ಬಳಸಿಕೊಂಡು, ಪುರಾತನ ದೇವಾಲಯಗಳನ್ನು, ಧರ್ಮಸ್ಥಳ ಮಂಜುನಾಥೇಶ್ವರ ಧರ್ಮೋತ್ತಾನ ಟ್ರಸ್ಟ್ ಜೀರ್ಣೋದ್ಧಾರ ಮಾಡುತ್ತಿದೆ.