ದೇವರಗುಡ್ಡ ದಸರಾ ಉತ್ಸವದಲ್ಲಿ ನುಡಿಯಲಾದ ಮಲ್ಲಯ್ಯನ ಭವಿಷ್ಯದ ಅರ್ಥವಾದರೂ ಏನು?
ಬಳ್ಳಾರಿ, ಅ 29: ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಯಲ್ಲಿರುವ ಐತಿಹಾಸಿಕ ದೇವರಗುಡ್ಡದ ಮಾಳ ಮಲ್ಲೇಶ್ವರಸ್ವಾಮಿಯ ದಸರಾ ಬನ್ನಿ ಉತ್ಸವದ ವೇಳೆ ನುಡಿಯಲಾದ ಕಾರಣಿಕವನ್ನು ಜನರು ಎಲ್ಲವೂ ಒಳ್ಳೆಯದಾಗಲಿದೆ ಎಂದು ಅರ್ಥೈಸಿಕೊಂಡಿದ್ದಾರೆ.
ಕನ್ನಡದಲ್ಲೇ ಈ ಕಾರಣಿಕವನ್ನು ನುಡಿಯಲಾಗುತ್ತದಾದರೂ ಇದು ಒಗಟಿನ ರೂಪದಲ್ಲಿ ಇರುತ್ತದೆ. ಆಂಧ್ರದ ಆಲೂರಿನ ವ್ಯಾಪ್ತಿಯಲ್ಲಿರುವ ಈ ದೇವಾಲಯದ ದಸರಾ ಉತ್ಸವದ ವೇಳೆ, ಬಡಿದಾಡಿಕೊಳ್ಳುವ ಸಂಪ್ರದಾಯವೂ ನಡೆಯುತ್ತದೆ.
'ವ್ಯಾಧಿ ಬೂದಿ ಆದಿತಲೇ.. ಪರಾಕ್': ಐತಿಹಾಸಿಕ ದೇವರಗುಡ್ಡ ಗೊರವಯ್ಯ ನುಡಿದ ದಸರಾ ಮಹಾನವಮಿ ಭವಿಷ್ಯ
ಕಾರಣಿಕದಲ್ಲಿ ನುಡಿಯಲಾದ ಭವಿಷ್ಯ ಹೀಗಿದೆ, "ಬಳಿರೇ, ಗಂಗೆ ಹೊಳೆದಂಡಿಗೆ ನಿಂತಾಳ..ಮಾಳಮ್ಮವ್ವ ಸವಾರಿ ಮಾಡ್ಯಾಳ..ಮುಂದಿನ ಆರು ತಿಂಗಳವರೆಗೆ 4800 ನಗಹಳ್ಳಿ 1600 ಒಕ್ಕಳು ಜೋಳ, ಮೂರು ಆರು, ಆರು ಮೂರಾದೀತು'ಎಂದು ಮಲ್ಲಯ್ಯನ ಕಾರಣಿಕ ನುಡಿಯಲಾಗಿದೆ.
ಇದನ್ನು ದೇವಾಲಯದ ಅಸಂಖ್ಯಾತ ಭಕ್ತ ಸಮೂಹ, "ರೈತರ ಬದುಕು ಹಸನಾಗಲಿದೆ, ಉತ್ತಮ ಬೆಳೆಯಾಗಲಿದೆ, ಬೆಳೆದ ಬೆಳೆಗೆ ಉತ್ತಮ ಬೆಲೆ ಸಿಗಲಿದೆ. ಕಾಲಕಾಲಕ್ಕೆ ಸರಿಯಾಗಿ ಮಳೆಯಾಗಿ, ಎಲ್ಲರ ಕಷ್ಟವೂ ನಿವಾರಣೆಯಾಗಲಿದೆ"ಎಂದು ಅರ್ಥೈಸಿಕೊಂಡಿದ್ದಾರೆ.
'ವ್ಯಾಧಿ ಬೂದಿ ಆದಿತಲೇ.. ಸೃಷ್ಟಿ ಸಿರಿ ಆದಿತಲೇ.. ಪರಾಕ್' ಎಂದು ಹಾವೇರಿ ಜಿಲ್ಲೆ, ರಾಣೆಬೆನ್ನೂರು ತಾಲೂಕಿನ ದೇವರಗುಡ್ಡದ ಮೈಲಾರ ಲಿಂಗೇಶ್ವರನ ದೇವಾಲಯದಲ್ಲಿ ನುಡಿಯಲಾಗಿದ್ದ ಭವಿಷ್ಯದಲ್ಲಿ ಕಾರಣಿಕ ನುಡಿಯಲಾಗಿತ್ತು. ಈ ದೇವಾಲಯದ ಪ್ರಧಾನ ಅರ್ಚಕರ ಪ್ರಕಾರ, ನಾಡು ಸುಭಿಕ್ಷವಾಗಲಿದೆ, ಕಷ್ಟ ದೂರವಾಗಲಿದೆ ಎಂದು.
ಮೈಲಾರ ಲಿಂಗೇಶ್ವರನ ದೇವಾಲಯದ ಪ್ರಧಾನ ಅರ್ಚಕರ ಪ್ರಕಾರ, "ನಾಡು ಕೊರೊನಾ ಹಾವಳಿಯಿಂದ ಮುಕ್ತವಾಗಲಿದೆ. ಕೊರೊನಾ ಕಾಲಕ್ರಮೇಣ ಬೂದಿಯಾಗಲಿದೆ, ಆರ್ಥಿಕ ಪರಿಸ್ಥಿತಿ ಸುಧಾರಿಸಲಿದೆ. ಮುಂದೆ ರೈತರ ಬಾಳು ಹಸನಾಗಲಿದೆ. ರಾಜ್ಯ ಸರಕಾರ ನಿರಾಂತಕವಾಗಿ ಕಾರ್ಯಭಾರ ಮಾಡಲಿದೆ" ಎಂದು ಗೊರವಯ್ಯ ನಾಗಪ್ಪ ದುರ್ಗಪ್ಪ ಉರ್ಮಿ, ಶನಿವಾರ (ಅ 24) ನುಡಿದ ಭವಿಷ್ಯವನ್ನು ಅರ್ಚಕರು ಹೀಗೆ ವಿಶ್ಲೇಷಿಸಿದ್ದರು.