ಬಗರ್ ಹುಕುಂ ಜಮೀನಿನಲ್ಲಿ ಜೆಸಿಬಿ ಘರ್ಜನೆ, ಕಣ್ಣೆದುರೇ ಬೆಳೆಗಳು ನೆಲಸಮ: ರೈತರ ಹಿಡಿಶಾಪ
ಬಳ್ಳಾರಿ, ಜುಲೈ 30: ಬಗರ್ ಹುಕುಂ ಜಮೀನಿನಲ್ಲಿ ಸಾಗುವಳಿ ಮಾಡುತ್ತಾ ಬೆಳೆ ಬೆಳೆದಿದ್ದ ರೈತರಿಗೆ ಇಂದು ಅಘಾತವುಂಟಾಗಿದ್ದು, ಕಣ್ಣೆದುರೇ ಬೆಳೆಯು ನೆಲಸಮಗೊಂಡಿತು.
ಕಷ್ಟಪಟ್ಟು ಸಾಲ-ಸೋಲ ಮಾಡಿ ಬೆಳೆದ ಪೈರು ನಾಶ ಮಾಡಲು ಮುಂದಾದ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಸಾಗುವಳಿ ರೈತರು ಆಕ್ರೋಶ ವ್ಯಕ್ತಪಡಿಸಿರುವ ಘಟನೆ ಬಳ್ಳಾರಿ ಜಿಲ್ಲೆ ಹರಪನಹಳ್ಳಿ ತಾಲ್ಲೂಕಿನ ನಾರಾಯಣಪುರದಲ್ಲಿ ನಡೆದಿದೆ.
ಬಳ್ಳಾರಿ; ವಾರದ ಹಿಂದೆ ಹೆಂಡತಿ ಕೊಂದು ಜೈಲು ಸೇರಿದ್ದವನಿಗೆ ಕೊರೊನಾ
70 ಕ್ಕೂ ರೈತರು ಕಳೆದ ಹಲವಾರು ವರ್ಷಗಳಿಂದ ಜಮೀನು ಸಾಗುವಳಿ ಮಾಡುತ್ತಾ ಬಂದಿದ್ದಾರೆ. ರೈತರನ್ನು ವಕ್ಕಲೆಬ್ಬಿಸಲು ಮುಂದಾದ ಕಂದಾಯ ಇಲಾಖೆ ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ.
ಜಮೀನಿನಲ್ಲಿ ಬೆಳೆ ನಾಶಕ್ಕೆ ಬಳಸಿದ ಜೆಸಿಬಿ ಸೇರಿದಂತೆ ಇತರ ವಾಹನಗಳನ್ನು ತಡೆದು ರೈತರು ಆಕ್ಷೇಪಿಸಿದರು. ಅಲ್ಲದೇ ಸ್ಥಳದಲ್ಲಿ ರೈತರು ಮತ್ತು ಅಧಿಕಾರಿಗಳ ನಡುವೆ ಮಾತಿನ ಚಕಮಕಿ ಸಹ ನಡೆದಿದ್ದು, ಸ್ಥಳದಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿತ್ತು.
ಜಮೀನಿನಿಂದ ತಮ್ಮನ್ನು ಹೊರಗೆ ಕಳುಹಿಸುವಾಗ ಪ್ರಾಣ ಹೋದರೂ, ಭೂಮಿ ಬಿಡುವುದಿಲ್ಲವೆಂದು ರೈತರು ಜಮೀನು ಬಿಟ್ಟು ಆಚೆ ಹೋಗಲು ನಿರಾಕರಿಸಿದರು. ಈ ವೇಳೆ ಪೊಲೀಸರು ರೈತರನ್ನು ಜಮೀನಿನಿಂದಾಚೆ ಕಳುಹಿಸಲು ಮುಂದಾದರು. ವಿಷ ಕುಡಿಯುವುದಕ್ಕೆ ಕೆಲ ರೈತರು ಮುಂದಾದರು. ಈ ಘಟನೆಯಿಂದ ಅಘಾತಕ್ಕೊಳಗಾದ ರೈತ ಮಹಿಳೆಯೋರ್ವರು ಎಚ್ಚರ ತಪ್ಪಿ ಬಿದ್ದರು.