ಬಳ್ಳಾರಿ; ಉಪ ಚುನಾವಣೆ ಹೊಸ್ತಿಲಲ್ಲಿ ಮಹತ್ವದ ಬದಲಾವಣೆ
ಬಳ್ಳಾರಿ, ನವೆಂಬರ್ 19 : ವಿಜಯನಗರ ಕ್ಷೇತ್ರದ ಚುನಾವಣೆಗೆ ಕಾವು ರಂಗೇರಿದೆ. ಹೊಸಪೇಟೆಯ ಪ್ರಭಾವಿ ನಾಯಕ ದೀಪಕ್ ಸಿಂಗ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಲು ಮುಂದಾಗಿದ್ದು, ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಲಿದ್ದಾರೆ.
ಮಂಗಳವಾರ ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ವಿ. ವೈ. ಘೋರ್ಪಡೆ ದೀಪಕ್ ಸಿಂಗ್ ಭೇಟಿ ಮಾಡಿದರು. ಕಾಂಗ್ರೆಸ್ ಪಕ್ಷಕ್ಕೆ ಬರಬೇಕು, ಉಪ ಚುನಾವಣೆಯಲ್ಲಿ ಪಕ್ಷದ ಪರವಾಗಿ ಪ್ರಚಾರ ಮಾಡಬೇಕು ಎಂದು ಮನವಿ ಮಾಡಿದರು.
2ನೇ ಉಪ ಚುನಾವಣೆ ಎದುರಿಸುತ್ತಿರುವ ವಿಜಯನಗರ ಪರಿಚಯ
ದೀಪಕ್ ಸಿಂಗ್ ವಿಜಯನಗರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ, ಅನರ್ಹ ಶಾಸಕ ಆನಂದ್ ಸಿಂಗ್ ಸಹೋದರ. ಉಪ ಚುನಾವಣೆಯಲ್ಲಿ ದೀಪಕ್ ಸಿಂಗ್ ಸಹೋದರನ ವಿರುದ್ಧವೇ ಪ್ರಚಾರ ನಡೆಸಲಿದ್ದು, ವಿಜಯನಗರ ಚುನಾವಣಾ ಕಣ ಕುತೂಹಲಕ್ಕೆ ಕಾರಣವಾಗಿದೆ.
ಉಪಚುನಾವಣೆಗೆ ಆನಂದ್ ಸಿಂಗ್ ಹೊಸ ಆಡಿಯೋ ಅಸ್ತ್ರ
ವಿಜಯನಗರ ಕ್ಷೇತ್ರದ ಉಪ ಚುನಾವಣೆ ಡಿಸೆಂಬರ್ 5ರಂದು ನಡೆಯಲಿದೆ. ಬಿಜೆಪಿಯಿಂದ ಆನಂದ್ ಸಿಂಗ್, ಕಾಂಗ್ರೆಸ್ನಿಂದ ವಿ. ವೈ. ಘೋರ್ಪಡೆ, ಜೆಡಿಎಸ್ನಿಂದ ಎನ್. ಎಂ. ನಬಿ ಚುನಾವಣಾ ಕಣದಲ್ಲಿದ್ದಾರೆ. ಡಿಸೆಂಬರ್ 9ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ವಿಜಯನಗರ ಜಿಲ್ಲೆ; ಯಡಿಯೂರಪ್ಪ ಕರೆದ ಸಭೆಯಲ್ಲಿ ಆಗಿದ್ದೇನು?
ಕಾಂಗ್ರೆಸ್ ಸೇರಲು ಒಪ್ಪಿಗೆ
ವಿ. ವೈ. ಘೋರ್ಪಡೆ ಭೇಟಿಯ ವೇಳೆ ದೀಪಕ್ ಸಿಂಗ್ ಕಾಂಗ್ರೆಸ್ ಪಕ್ಷಕ್ಕೆ ಸೇರಲು ಒಪ್ಪಿಗೆ ಸೂಚಿಸಿದ್ದಾರೆ. ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಪರವಾಗಿ ಪ್ರಚಾರ ನಡೆಸಲು ಒಪ್ಪಿಗೆಯನ್ನು ನೀಡಿದ್ದಾರೆ. ಉಪ ಚುನಾವಣೆಗೆ ಕೆಲವೇ ದಿನಗಳು ಬಾಕಿ ಇರುವಾಗ ನಡೆದಿರುವ ಈ ಬೆಳವಣಿಗೆ ಕುತೂಹಲಕ್ಕೆ ಕಾರಣವಾಗಿದೆ.
ಬಂಡಾಯದ ಕಹಳೆ ಊದಿದ್ದರು ದೀಪಕ್ ಸಿಂಗ್
ದೀಪಕ್ ಸಿಂಗ್ 2018ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಟಿಕೆಟ್ ಸಿಗಲಿಲ್ಲ ಎಂದು ಬಂಡಾಯವೆದ್ದು ಜೆಡಿಎಸ್ ಸೇರಿದ್ದರು. 2008ರಲ್ಲಿಯೂ ಕಾಂಗ್ರೆಸ್ ಟಿಕೆಟ್ ಸಿಗದ ಕಾರಣ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕಿಳಿದಿದ್ದರು. ಆಗ ಎಚ್. ಆರ್. ಗವಿಯಪ್ಪ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದರು. ಆನಂದ್ ಸಿಂಗ್ ಬಿಜೆಪಿಯಿಂದ ಕಣಕ್ಕಿಳಿದಿದ್ದರು. ಗವಿಯಪ್ಪ ಸೋಲಲು ದೀಪಕ್ ಸಿಂಗ್ ಬಂಡಾಯವೂ ಕಾರಣವಾಗಿತ್ತು.
2018ರಲ್ಲಿ ಸೋಲು
ದೀಪಕ್ ಸಿಂಗ್ 2018ರ ವಿಧಾನಸಭೆ ಚುನಾವಣೆಯಲ್ಲಿ ವಿಜಯನಗರ ಕ್ಷೇತ್ರದಲ್ಲಿ ಜೆಡಿಎಸ್ನಿಂದ ಕಣಕ್ಕಿಳಿದಿದ್ದರು. 3835 ಮತಗಳನ್ನು ಪಡೆದು ಸೋಲು ಕಂಡಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಆನಂದ್ ಸಿಂಗ್ ಗೆಲುವು ಸಾಧಿಸಿದ್ದರು.
ಚುನಾವಣಾ ಚಿತ್ರಣ ಬದಲು
ವಿಜಯನಗರ ಕ್ಷೇತ್ರದ ಉಪ ಚುನಾವಣೆ ಡಿಸೆಂಬರ್ 5ರಂದು ನಡೆಯಲಿದೆ. ದೀಪಕ್ ಸಿಂಗ್ ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದರೆ ಕ್ಷೇತ್ರದ ಚುನಾವಣಾ ಚಿತ್ರಣ ಬದಲಾಗಲಿದೆ. ಜೆಡಿಎಸ್ ಅಭ್ಯರ್ಥಿ ಎನ್. ಎಂ. ನಬಿಗೆ ಹಿನ್ನಡೆಯಾಗಲಿದೆ.