ಅಂತರ್ ರಾಜ್ಯದಿಂದ ಬಳ್ಳಾರಿಗೆ ಬಂದರೆ ಕಡ್ಡಾಯ ಕ್ವಾರಂಟೈನ್
ಬಳ್ಳಾರಿ, ಮೇ 06: ನೆರೆಯ ಆಂಧ್ರಪ್ರದೇಶ, ತೆಲಂಗಾಣ ಸೇರಿ ಅನ್ಯ ರಾಜ್ಯಗಳಿಂದ ಜಿಲ್ಲೆಗೆ ಯಾರೇ ಬಂದರೂ ಅಂತಹವರನ್ನು 14 ದಿನಗಳ ಕಾಲ ಇನ್ ಸ್ಟಿಟ್ಯೂಟ್ ಕ್ವಾರೆಂಟೈನ್ ಇಡುವುದು ಕಡ್ಡಾಯ ಎಂದು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್. ನಕುಲ್ ಆದೇಶ ಮಾಡಿದ್ದಾರೆ.
ನಿನ್ನೆ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅನಾರೋಗ್ಯದ ಹಿನ್ನೆಲೆಯಲ್ಲಿ ಬಳ್ಳಾರಿಯ ವಿಮ್ಸ್ ಗೆ ಬರುವವರು ಅಲ್ಲಿನ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯಬೇಕು. ಆಂಬ್ಯುಲೆನ್ಸ್ ನಲ್ಲಿ ಮಾತ್ರ ಬರುವವರಿಗೆ ಅವಕಾಶ ನೀಡಲಾಗುವುದು. ಅದನ್ನು ಹೊರತುಪಡಿಸಿ ಬೇರೆ ಯಾವುದೇ ರೀತಿಯಲ್ಲಿ ಜಿಲ್ಲೆಗೆ ಬಂದರೆ ಅಂತಹವರನ್ನು 14 ದಿನಗಳ ಕಾಲ ಇನ್ ಸ್ಟಿಟ್ಯೂಟ್ ಕ್ವಾರೆಂಟೈನ್ ನಲ್ಲಿ ಇಡಲೇಬೇಕು ಎಂದು ಸ್ಪಷ್ಟಪಡಿಸಿದರು.
ಬಳ್ಳಾರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರು ಮಾತನಾಡಿ, ನೆರೆ ರಾಜ್ಯದಿಂದ ಜನರು ನುಸುಳದಂತೆ ತೀವ್ರ ನಿಗಾ ವಹಿಸಲಾಗಿದ್ದು, ಮುಖ್ಯ ರಸ್ತೆ ಬಿಟ್ಟು ಕಾಲು ದಾರಿ, ಹೊಲಗಳ ಮೂಲಕ ಬರುವವರ ಮೇಲೂ ಕಣ್ಣಿಡಲಾಗಿದೆ.
ಅಂತರ ಜಿಲ್ಲಾ ಪ್ರಯಾಣಕ್ಕೆ ಪಾಸು; ಪೊಲೀಸರ ಮಹತ್ವದ ಆದೇಶ
ಆಂಧ್ರದೊಂದಿಗೆ ಗಡಿ ಸಂಪರ್ಕ ಹೊಂದಿರುವ ಸಂಡೂರು, ಬಳ್ಳಾರಿ ಮತ್ತು ಸಿರಗುಪ್ಪದ 65 ಹಳ್ಳಿಗಳಲ್ಲಿ ಪ್ರತಿನಿತ್ಯ ಮೂರು ಗಸ್ತುವಾಹನಗಳು ನಿರಂತರವಾಗಿ ಸಂಚರಿಸುತ್ತಿವೆ. ಜನರು ನುಸುಳದಂತೆ ನಿಗಾವಹಿಸುವ ನಿಟ್ಟಿನಲ್ಲಿ ಈಗಾಗಲೇ ಪ್ರತಿ ತಾಲೂಕಿಗೆ ಒಬ್ಬರನ್ನು ನೋಡಲ್ ಅಧಿಕಾರಿಗಳನ್ನು ನೇಮಿಸಲಾಗಿದೆ ಎಂದರು.