ಬಳ್ಳಾರಿಯಲ್ಲಿ ಹೆಚ್ಚುತ್ತಿರುವ ಸಾವಿನ ಪ್ರಕರಣ; ವಿಮ್ಸ್ ಆಡಳಿತ ವ್ಯವಸ್ಥೆ ಬಗ್ಗೆ ಅನುಮಾನ
ಬಳ್ಳಾರಿ, ಜುಲೈ 1: ಬಳ್ಳಾರಿಯಲ್ಲಿ ಕೊರೊನಾ ವೈರಸ್ ನಿಂದ ಸಾವಿಗೀಡಾಗುತ್ತಿರುವವರ ಸಂಖ್ಯೆ ಹೆಚ್ಚಳವಾಗುತ್ತಿದೆ. ಆದರೆ ಇದಕ್ಕೆ ಕಾರಣ ಮಾತ್ರ ಸ್ಪಷ್ಟವಾಗುತ್ತಿಲ್ಲ. ಈ ಸಾವುಗಳಿಗೆ ಕಾರಣ ಕಂಡುಕೊಳ್ಳಲು ಇದೀಗ ಜಿಲ್ಲಾಡಳಿತ ಮುಂದಾಗಿದೆ.
ಜಿಲ್ಲೆಯಲ್ಲಿ ಕೊರೊನಾ ಸೋಂಕಿನಿಂದಾಗಿ ಸಾವನ್ನಪ್ಪಿರುವ ಸಂಗತಿ ಕುರಿತು ಪರಿಶೀಲಿಸಿರುವ ಜಿಲ್ಲಾಡಳಿತ ವಿಮ್ಸ್ ಆಡಳಿತ ವ್ಯವಸ್ಥೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ. ಜಿಲ್ಲೆಯಲ್ಲಿ ಈವರೆಗೂ ಸಾವಿನ ಸಂಖ್ಯೆಯಲ್ಲಿ ಹೆಚ್ಚಿನ ಪಾಲು ವಿಮ್ಸ್ ನದ್ದೇ ಆಗಿರುವುದು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ಬಳ್ಳಾರಿಯಲ್ಲಿ ಒಂದೇ ದಿನ 107 ಕೊರೊನಾ ವೈರಸ್ ಪಾಸಿಟಿವ್ ಕೇಸ್ ಪತ್ತೆ
ಜಿಲ್ಲೆಯಲ್ಲಿ ಈವರೆಗೂ ದಾಖಲಾದ ಕೊರೊನಾ ವೈರಸ್ ಪ್ರಕರಣದ ಸಾವಿನಲ್ಲಿ 29 ರಲ್ಲಿ 22ಕ್ಕೂ ಹೆಚ್ಚು ಪ್ರಕರಣಗಳು ವಿಮ್ಸ್ ನಲ್ಲೇ ಆಗಿವೆ. ಹೀಗಾಗಿ ವಿಮ್ಸ್ ಆಡಳಿತ ವ್ಯವಸ್ಥೆ ಬಗ್ಗೆ ಪರಿಶೀಲನೆ ಸಾಗಿದೆ. ನಿನ್ನೆ ಈ ಕುರಿತು ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ಸಭೆ ನಡೆದಿದ್ದು, ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಜಿಲ್ಲೆಯಲ್ಲಿನ ಸಾವಿನ ಸಂಖ್ಯೆ ಕುರಿತು ಕಳವಳ ವ್ಯಕ್ತಪಡಿಸಿದ್ದರು. ವಿಮ್ಸ್ ಆಡಳಿತ ಮಂಡಳಿಯನ್ನು ತರಾಟೆಗೆ ತೆಗೆದುಕೊಂಡಿದ್ದರು.
ಇದೀಗ ಸಾವಿಗೆ ನಿಖರ ಕಾರಣ ಕಂಡು ಹಿಡಿಯಲು ಮುಂದಾದ ಜಿಲ್ಲಾಧಿಕಾರಿ ಎಸ್ ಎಸ್ ನಕುಲ್ ಅವರಿಂದ ವಿಶೇಷ ತಂಡ ರಚನೆಯಾಗಿದ್ದು, ಅಪರ ಜಿಲ್ಲಾಧಿಕಾರಿ ಮಂಜುನಾಥ್ ಹಾಗೂ ತಹಶೀಲ್ದಾರ್ ವಿಸ್ವಜೀತ್ ಮೆಹೆತಾ ನೋಡೆಲ್ ಅಧಿಕಾರಿಯಾಗಿ ನೇಮಕವಾಗಿದ್ದಾರೆ. ಸದ್ಯಕ್ಕೆ ಬಳ್ಳಾರಿಯ ವಿಮ್ಸ್ ಆಸ್ಪತ್ರೆಯ ಮೇಲೆ ತೂಗುಗತ್ತಿ ತೂಗುತ್ತಿದೆ.