ವಿಜಯನಗರ ಜಿಲ್ಲೆಗೆ ಮೊದಲ ಜಿಲ್ಲಾಧಿಕಾರಿ, ಎಸ್ಪಿ ನೇಮಕ
ಬಳ್ಳಾರಿ, ಸೆಪ್ಟೆಂಬರ್ 30: ಕರ್ನಾಟಕದ 31ನೇ ಜಿಲ್ಲೆಯಾದ ವಿಜಯನಗರಕ್ಕೆ ಮೊದಲ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನೇಮಕಗೊಂಡಿದ್ದಾರೆ. ಅಕ್ಟೋಬರ್ 2ರಂದು ಅಧಿಕೃತವಾಗಿ ವಿಜಯನಗರ ಜಿಲ್ಲೆ ಉದ್ಘಾಟನೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾಡಲಿದ್ದಾರೆ.
ಗುರುವಾರ ಕರ್ನಾಟಕ ಸರ್ಕಾರ ನೂತನ ವಿಜಯನಗರ ಜಿಲ್ಲೆಗೆ ಜಿಲ್ಲಾಧಿಕಾರಿ ಮತ್ತು ಎಸ್ಪಿ ನೇಮಕ ಮಾಡಿ ಆದೇಶ ಹೊರಡಿಸಿದೆ. ಐಎಎಸ್ ಅಧಿಕಾರಿ ಅನಿರುದ್ಧ್ ಶ್ರವಣ್ ಜಿಲ್ಲಾಧಿಕಾರಿಯಾಗಿ ಮತ್ತು ಎಸ್ಪಿಯಾಗಿ ಡಾ. ಅರುಣ್ ಕೆ ನೇಮಕಗೊಂಡಿದ್ದಾರೆ.
ವಿಜಯನಗರ ಜಿಲ್ಲೆ ಉದ್ಘಾಟನೆ; ವಿಶೇಷತೆಗಳನ್ನು ತಿಳಿಯಿರಿ
ನೂತನ ವಿಜಯನಗರ ಜಿಲ್ಲೆಯ ಪ್ರಥಮ ಜಿಲ್ಲಾಧಿಕಾರಿಯಾಗಿ ಅನಿರುದ್ಧ್ ಶ್ರವಣ್ ನೇಮಕ ಮಾಡಲಾಗಿದೆ. ಮೊದಲು ಗ್ರಾಮೀಣಾಭಿವೃದ್ಧಿ ಪಂಚಾಯತ್ ರಾಜ್ ಇಲಾಖೆ ಆಯುಕ್ತರಾಗಿ ಅನಿರುದ್ಧ್ ಶ್ರವಣ್ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. ವಿಜಯನಗರ ಜಿಲ್ಲೆಯ ರಚನೆ ಬಳಿಕ ವಿಶೇಷ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದರು.
ವಿಜಯನಗರ ಜಿಲ್ಲೆಗೆ ಬಂಪರ್ ಕೊಡುಗೆ ಕೊಟ್ಟ ಸಿಎಂ
ಅನಿರುದ್ಧ್ ಶ್ರವಣ್ ಜಿಲ್ಲಾಧಿಕಾರಿಯನ್ನಾಗಿ 30/09/2021ರಿಂದ ನೇಮಕಗೊಂಡಿದ್ದಾರೆ. ಕರ್ನಾಟಕ ಸರ್ಕಾರದ ಅಧೀನ ಕಾರ್ಯದರ್ಶಿ ಜೇಮ್ಸ್ ತಾರಕನ್ ಈ ಕುರಿತು ಆದೇಶ ಹೊರಡಿಸಿದ್ದಾರೆ.
ವಿಜಯನಗರ ಜಿಲ್ಲೆಗೆ ಸಿಹಿಸುದ್ದಿ ಕೊಟ್ಟ ರೈಲ್ವೆ ಇಲಾಖೆ
ಎಸ್ಪಿಯಾಗಿ ಐಪಿಎಸ್ ಅಧಿಕಾರಿ ಡಾ. ಅರುಣ್ ಕೆ ನೇಮಕ ಮಾಡಲಾಗಿದೆ. ಇವರು ಈ ಮೊದಲು ಭದ್ರತಾ ಮತ್ತು ಜಾಗೃತ ದಳದ ಎಸ್ಪಿ ಹಾಗೂ ನಿರ್ದೇಶಕರಾಗಿ ಕಾರ್ಯ ನಿರ್ವಹಣೆ ಮಾಡುತ್ತಿದ್ದರು. 2014ನೇ ಐಪಿಎಸ್ ಅಧಿಕಾರಿಯಾಗಿದ್ದಾರೆ.
ದಿನಾಂಕ 30/09/2021 ರಿಂದ ಆಡಳಿತ ವಿಭಾಗದ ಕಾರ್ಯದರ್ಶಿ ನಾಗಪ್ಪ. ಎಸ್ ನೂತನ ವಿಜಯನಗರ ಜಿಲ್ಲೆಯ ಪ್ರಥಮ ಎಸ್ಪಿಯಾಗಿ ಡಾ. ಅರುಣ್ ನೇಮಕ ಮಾಡಿ ಆದೇಶ ಹೊರಡಿಸಿದ್ದಾರೆ.
ಬಿ. ಎಸ್. ಯಡಿಯೂರಪ್ಪ ಮುಖ್ಯಮಂತ್ರಿಯಾಗಿದ್ದಾಗ ಕರ್ನಾಟಕದ 31ನೇ ಜಿಲ್ಲೆಯಾಗಿ ವಿಜಯನಗರವನ್ನು ಘೋಷಣೆ ಮಾಡಿದ್ದರು. ಅಕ್ಟೋಬರ್ 2ರಂದು ಅಧಿಕೃತವಾಗಿ ವಿಜಯನಗರ ಜಿಲ್ಲೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟನೆ ಮಾಡಲಿದ್ದಾರೆ.
ಬಳ್ಳಾರಿಯನ್ನು ವಿಭಜನೆ ಮಾಡಿ ಹೊಸದಾಗಿ ವಿಜಯನಗರ ಜಿಲ್ಲೆ ರಚನೆ ಮಾಡಲಾಗಿದೆ. ಹೊಸಪೇಟೆ ವಿಜಯನಗರ ಜಿಲ್ಲೆಯ ಕೇಂದ್ರಸ್ಥಾನವಾಗಿದೆ. ಕೆಲವು ದಿನಗಳ ಹಿಂದೆ ನಡೆದ ಸಭೆಯಲ್ಲಿ ಬಸವರಾಹ ಬೊಮ್ಮಾಯಿ ವಿಜಯನಗರ ಜಿಲ್ಲೆಯಲ್ಲಿ ಮೊದಲ ಹಂತದಲ್ಲಿ 11 ಜಿಲ್ಲಾ ಕಚೇರಿಗಳನ್ನು ಸ್ಥಾಪಿಸಲು ಒಪ್ಪಿಗೆ ಕೊಟ್ಟಿದ್ದರು. ಹೊಸ ಜಿಲ್ಲೆಯಲ್ಲಿ ಎರಡು ಹಂತಗಳಲ್ಲಿ ಹುದ್ದೆಗಳನ್ನು ಸೃಜನೆ ಮಾಡಲಾಗುತ್ತದೆ ಎಂದು ಹೇಳಿದ್ದರು.
ವಿಜಯನಗರ ಜಿಲ್ಲೆ; ಕರ್ನಾಟಕದ 31ನೇ ಜಿಲ್ಲೆಯಾದ ವಿಜಯನಗರಕ್ಕೆ ಹೊಸಪೇಟೆ ಕೇಂದ್ರ ಸ್ಥಾನವಾಗಿದೆ. ಹೊಸಪೇಟೆ, ಕೂಡ್ಲಗಿ, ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹೂವಿನ ಹಡಗಲಿ, ಹರಪನಹಳ್ಳಿ ತಾಲೂಕುಗಳು ಜಿಲ್ಲೆಗೆ ಸೇರಿವೆ.
ಬಳ್ಳಾರಿ ವಿಭಜನೆ ಮಾಡಿ ವಿಜಯನಗರ ಜಿಲ್ಲೆ ರಚಿಸಲಾಗಿದೆ. ಈಗ ಬಳ್ಳಾರಿ ಜಿಲ್ಲೆಯಲ್ಲಿ ಬಳ್ಳಾರಿ ಕೇಂದ್ರ ಸ್ಥಾನವಾಗಿದೆ. ಬಳ್ಳಾರಿ, ಕುರುಗೋಡು, ಸಿರಗುಪ್ಪ, ಕಂಪ್ಲಿ, ಸಂಡೂರು ತಾಲೂಕುಗಳು ಜಿಲ್ಲೆಗೆ ಸೇರಿವೆ. ಈ ಕುರಿತು ಕರ್ನಾಟಕ ಸರ್ಕಾರ ಅಧಿಕೃತ ರಾಜ್ಯ ಪತ್ರ ಸಹ ಪ್ರಕಟಿಸಿದೆ.
ಹೊಸ ಜಿಲ್ಲೆ ಉದ್ಘಾಟನೆ; ವಿಜಯನಗರ ಉತ್ಸವ ಮತ್ತು ವಿಜಯನಗರ ಜಿಲ್ಲಾ ಉದ್ಘಾಟನಾ ಸಮಾರಂಭ ಎರಡು ದಿನಗಳ ಕಾಲ ಹೊಸಪೇಟೆ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಲಿದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಕ್ಟೋಬರ್ 2ರಂದು ಸಂಜೆ 6ಕ್ಕೆ ವಿಜಯನಗರ ಜಿಲ್ಲೆಯನ್ನು ಉದ್ಘಾಟಿಸಲಿದ್ದಾರೆ.
ಇದೇ ಸಂದರ್ಭದಲ್ಲಿ ಅವರು 464 ಕೋಟಿ ರೂ. ವೆಚ್ಚದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ಮತ್ತು ಶಂಕುಸ್ಥಾಪನೆ ಮಾಡಲಿದ್ದಾರೆ. ವಿಜಯನಗರ ಜಿಲ್ಲೆ ರಚನೆ ಮತ್ತು ಘೋಷಣೆ ಮಾಡಿದ ನಿಕಟ ಪೂರ್ವ ಮುಖ್ಯಮಂತ್ರಿಗಳಾದ ಬಿ. ಎಸ್. ಯಡಿಯೂರಪ್ಪರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಗಿದೆ.
ಅಕ್ಟೋಬರ್ 2ರಂದು ಮುಖ್ಯಮಂತ್ರಿಗಳು ವೇದಿಕೆ ಕಾರ್ಯಕ್ರಮದಲ್ಲಿ ನೂತನ ವಿಜಯನಗರ ಜಿಲ್ಲೆಯಲ್ಲಿ ಕಚೇರಿಗಳ ಸ್ಥಾಪನೆ ಕುರಿತು ಕೆಲ ಸರಕಾರಿ ಆದೇಶಗಳನ್ನು ಬಿಡುಗಡೆ ಮಾಡಲಿದ್ದಾರೆ. ಸರಕಾರಿ ಆದೇಶಗಳನ್ನು ಬಿಡುಗಡೆ ಮಾಡುವ ಮೂಲಕ ವಿಜಯನಗರ ಜಿಲ್ಲೆಯ ಆಡಳಿತಕ್ಕೆ ಚಾಲನೆ ನೀಡಲಿದ್ದಾರೆ.
ವಿವಿಧ ಕಾಮಗಾರಿ ಉದ್ಘಾಟನೆ; ಮುಖ್ಯಮಂತ್ರಿಗಳು ಹೊಸಪೇಟೆ ನಗರದ ಹಂಪಿ ರಸ್ತೆಯಿಂದ ಬಳ್ಳಾರಿ ರಸ್ತೆಯವರೆಗೆ (ಬೈಪಾಸ್) ಚತುಷ್ಪಥರಸ್ತೆ, ಹೊಸಪೇಟೆ ನಗರದಲ್ಲಿ 60 ಹಾಸಿಗೆಯ ಹೆರಿಗೆ ಮತ್ತು ಮಕ್ಕಳ ಆಸ್ಪತ್ರೆ, ಹೊಸಪೇಟೆಯ ಜೋಳದರಾಶಿ ಗುಡ್ಡದ ಅಭಿವೃದ್ಧಿ ಕಾಮಗಾರಿ, ಹೊಸಪೇಟೆ ತಾಲೂಕು ಹಂಪಿಯಿಂದ ವಯಾ ಕಮಲಾಪುರ ಪಾಪಿನಾಯಕನಹಳ್ಳಿ ವರೆಗೆ ರಸ್ತೆ ಅಭಿವೃದ್ಧಿ, ಹೊಸಪೇಟೆ ನಗರದಲ್ಲಿರುವ ಅಲ್ಪ ಸಂಖ್ಯಾತರ ಮೊರಾರ್ಜಿ ವಸತಿ ಶಾಲೆ, ಹೊಸಪೇಟೆ ತಾಲೂಕು ವೆಂಕಟಾಪುರದಿಂದ ಪಂಪಾ ವಿದ್ಯಾಪೀಠ ವಿಜಯನಗರ ಕ್ಷೇತ್ರದ ಕೊನೆಯ ಭಾಗದವರೆಗೆ ರಸ್ತೆ ಅಭಿವೃದ್ಧಿ ಸೇರಿದಂತೆ 24 ಕಾಮಗಾರಿಗಳು ರೂ. 99.66 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿದ್ದು ಇದನ್ನು ಉದ್ಘಾಟಿಸಲಿದ್ದಾರೆ.