"ದಲ್ಲಾಳಿಗಳು ರಾಗಿ/ಜೋಳವನ್ನು ಖರೀದಿ ಕೇಂದ್ರಗಳಿಗೆ ತಂದಲ್ಲಿ ಕ್ರಿಮಿನಲ್ ಕೇಸ್''
ಬಳ್ಳಾರಿ, ಡಿಸೆಂಬರ್ 16: ಬಳ್ಳಾರಿ ಜಿಲ್ಲಾಡಳಿತ ಮತ್ತು ಆಹಾರ ನಾಗರಿಕ ಸರಬರಾಜು ಹಾಗೂ ಗ್ರಾಹಕ ವ್ಯವಹಾರಗಳ ಇಲಾಖೆಯ ವತಿಯಿಂದ 2020-21ನೇ ಸಾಲಿನ ಮುಂಗಾರು ಋತುವಿನಲ್ಲಿ ಬೆಳೆದ ರಾಗಿ/ಜೋಳವನ್ನು ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರೈತರಿಂದ ನೇರವಾಗಿ ಖರೀದಿಸಲು ಜಿಲ್ಲಾ ಟಾಸ್ಕ್ ಪೋರ್ಸ್ ಸಮಿತಿ ತೀರ್ಮಾನಿಸಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರು ತಿಳಿಸಿದ್ದಾರೆ.
ಬೆಂಬಲ ಬೆಲೆ ಯೋಜನೆಯಡಿ ರಾಗಿ/ಜೋಳವನ್ನು ಮಾರಾಟ ಮಾಡಲು ರೈತರು ಮೊದಲು ಕೃಷಿ ಇಲಾಖೆಯಲ್ಲಿ ಫ್ರೂಟ್ಸ್ ತಂತ್ರಾಶದಲ್ಲಿ ನೋಂದಣಿ ಮಾಡಿಕೊಳ್ಳಬೇಕು. ನಂತರ ಆಯಾ ತಾಲ್ಲೂಕುಗಳ ಕೃಷಿ ಉತ್ಪನ್ನ ಮಾರುಕಟ್ಟೆಯಲ್ಲಿ ತೆರೆದಿರುವ ಖರೀದಿ ಕೇಂದ್ರಗಳಲ್ಲಿ ರಾಗಿ/ಜೋಳವನ್ನು ಮಾರಾಟ ಮಾಡಲು ನೋಂದಾಯಿಸಿಕೊಳ್ಳಬೇಕು.
ಎಂದಾದರೂ ರೈತರ ಧ್ವನಿಗೂ ಬೆಲೆ ಬರುವುದೆಂಬ ಭರವಸೆಯಲ್ಲಿ...
ಈ ರೀತಿ ಕೃಷಿ ಇಲಾಖೆ ಮತ್ತು ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಿಕೊಂಡ ರೈತರು ನೇರವಾಗಿ ರಾಗಿ ಹಾಗೂ ಬಿಳಿಜೋಳವನ್ನು ಖರೀದಿ ಕೇಂದ್ರಗಳಿಗೆ ನೇರವಾಗಿ ಸರಬರಾಜು ಮಾಡಬೇಕು ಎಂದು ಅವರು ತಿಳಿಸಿದ್ದಾರೆ.
ಪ್ರತಿ ಕ್ವಿಂಟಾಲ್ ರಾಗಿಗೆ 3,295 ರೂ.ರಂತೆ ಖರೀದಿ ಮಾಡಲಾಗುವುದು. ಪ್ರತಿ ಕ್ವಿಂಟಾಲ್ ಹೈಬ್ರಿಡ್ ಜೋಳವನ್ನು 2620 ರೂ. ಹಾಗೂ ಮಾಲ್ದಂಡಿ ಜೋಳವನ್ನು ಪ್ರತಿ ಕ್ವಿಂಟಾಲ್ಗೆ 2,640 ರೂ.ಗಳಂತೆ ಖರೀದಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
ಪ್ರತಿಯೊಬ್ಬ ರೈತರು ಬೆಂಬಲ ಬೆಲೆ ಯೋಜನೆಯಡಿಯಲ್ಲಿ ರಾಗಿ/ಜೋಳವನ್ನು ಮಾರಾಟ ಮಾಡಲು ರೈತರು ಕೃಷಿ ಇಲಾಖೆಯಲ್ಲಿ ಮೊದಲು ನೊಂದಾಯಿಸಿಕೊಳ್ಳಬೇಕು. ನೋಂದಣಿಗೆ 2021ರ ಜ.31 ರಂದು ಕೊನೆಯ ದಿನವಾಗಿರುತ್ತದೆ. ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಜೋಳ/ರಾಗಿ ಖರೀದಿಸಲು ರೈತರು ಆಯಾ ತಾಲೂಕಿನ ಎಪಿಎಂಸಿ ಯಾರ್ಡ್ ನಲ್ಲಿ ನೊಂದಣಿ ಮಾಡಿಕೊಳ್ಳಬೇಕು.
ರಾಗಿ /ಜೋಳವನ್ನು ನೊಂದಾಯಿಸಿಕೊಂಡ ಸಣ್ಣ ಮತ್ತು ಅತೀ ಸಣ್ಣ ರೈತರಿಂದ ಮಾತ್ರ ರಾಗಿಯನ್ನು ಪ್ರತಿ ಎಕರೆಗೆ ಕನಿಷ್ಠ 10 ಕ್ವಿಂಟಲ್ನಿಂದ ಗರಿಷ್ಠ 50 ಕ್ವಿಂಟಾಲ್ವರೆಗೆ ಮತ್ತು ಜೋಳವನ್ನು ಪ್ರತಿ ಎಕರೆಗೆ ಕನಿಷ್ಠ 15 ಕ್ವಿಂಟಾಲ್ ನಿಂದ ಗರಿಷ್ಠ 75 ಕ್ವಿಂಟಾಲ್ವರೆಗೆ ಮಾತ್ರ ಖರೀದಿಸಲಾಗುವುದು.
ಖರೀದಿಗೆ ನೊಂದಾಯಿಸಿಕೊಂಡ ರೈತರು ತಹಶೀಲ್ದಾರ್ ಅಥವಾ ಅವರಿಂದ ಅಧಿಕೃತರಾದ ಅಧಿಕಾರಿಯಿಂದ ನಮೂನೆ-1 ರಲ್ಲಿ ಬೆಳೆ ದೃಢೀಕರಣ ಪತ್ರ ಮತ್ತು 2019-20ನೇ ಸಾಲಿನ ಕಂಪ್ಯೂಟರ್ ಪಹಣಿಯನ್ನು ನೊಂದಣಿ ಸಮಯದಲ್ಲಿ ಹಾಜರುಪಡಿಸಿ ನೊಂದಾಯಿಸಿಕೊಳ್ಳಬೇಕು.
ಈ ಬೆಂಬಲ ಬೆಲೆ ಯೋಜನೆ ಅಡಿ ಖರೀದಿಯಲ್ಲಿ ಮಧ್ಯವರ್ತಿಗಳು/ ಏಜೆಂಟ್ಗಳು ಭಾಗವಹಿಸುವುದು ಕಾನೂನು ಬಾಹಿರವಾಗಿದೆ ಎಂದು ತಿಳಿಸಿರುವ ಜಿಲ್ಲಾಧಿಕಾರಿ ನಕುಲ್ ಅವರು, ಮಧ್ಯವರ್ತಿಗಳು ಹಾಗೂ ಏಜೆಂಟರುಗಳು ಖರೀದಿ ಕೇಂದ್ರಗಳಿಗೆ ರಾಗಿ ಜೋಳ ತಂದಿದ್ದು ಕಂಡುಬಂದಲ್ಲಿ ಅಂತವರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಸಿದ್ದಾರೆ.
ಕೋಟ್ಯಾಧಿಪತಿಯಾಗಲು ನಿಮಗೆ ಇಲ್ಲಿದೆ ಅವಕಾಶ!