ಬಳ್ಳಾರಿ: ಗ್ರಾ.ಪಂ ಸದಸ್ಯನಿಂದ ಕೊರೊನಾ ವಾರಿಯರ್ ಮೇಲೆ ಅತ್ಯಾಚಾರಕ್ಕೆ ಯತ್ನ
ಬಳ್ಳಾರಿ, ಅಕ್ಟೋಬರ್ 12: ಕೊರೊನಾ ವೈರಸ್ ಬಂದಾಗಿನಿಂದ ಕೊರೊನಾ ವಾರಿಯರ್ಸ್ ಎಂದು ಕರೆಯಿಸಿಕೊಳ್ಳುವ ಆರೋಗ್ಯ ಇಲಾಖೆ ಸಿಬ್ಬಂದಿ ತಮ್ಮ ಪ್ರಾಣವನ್ನು ಪಣಕಿಟ್ಟು ಹಗಲಿರುಳು ದುಡಿಯುತ್ತಿದ್ದಾರೆ. ಕಳೆದ 8 ತಿಂಗಳಿಂದ ಒಂದೇ ಒಂದು ರಜೆಯನ್ನು ಪಡೆಯದೇ ನಮ್ಮೆಲ್ಲರ ಪ್ರಾಣ ರಕ್ಷಣೆಗೆ ದುಡಿಯುತ್ತಿದ್ದಾರೆ. ಆದರೆ, ಇಲ್ಲೊಬ್ಬ ವ್ಯಕ್ತಿ ಕೊರೊನಾ ವಾರಿಯರ್ ಮೇಲೆ ಹಲ್ಲೆ ಮಾಡಿ, ಲೈಂಗಿಕ ದೌರ್ಜನ್ಯಕ್ಕೆ ಯತ್ನಿಸಿದ್ದಾನೆ.
ಕಳೆದ 5 ವರ್ಷದಿಂದ ಬಳ್ಳಾರಿ ಜಿಲ್ಲೆಯ ಕೂಡ್ಲಿಗಿ ತಾಲೂಕಿನ ಕೆಂಚಮನಹಳ್ಳಿಯ ಉಪ ಆರೋಗ್ಯ ಕೇಂದ್ರದಲ್ಲಿ ನರ್ಸ್ ಆಗಿ ಎಮ್.ಲಕ್ಷ್ಮೀದೇವಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ, ಇದೇ ಗ್ರಾಮದ ಗ್ರಾ.ಪಂ ಸದಸ್ಯ ಕೆ.ಬಸವರಾಜ ಎಂಬುವವನು ನರ್ಸ್ ಮೇಲೆ ಹಲ್ಲೆ ಮಾಡಿದ್ದಾನೆ. ಅಕ್ಟೋಬರ್ 2 ರಂದು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ರಾತ್ರಿ 10 ಗಂಟೆಯ ಸುಮಾರಿಗೆ ರೋಗಿಯ ನೆಪದಲ್ಲಿ ಭೇಟಿ ನೀಡಿ, ಯಾರೂ ಇಲ್ಲದ ಸಮಯದಲ್ಲಿ ಹಲ್ಲೆ ಮಾಡಿ, ಕೈ ಹಿಡಿದು ಎಳೆದಾಡಿದ್ದಾನೆ. ಹೇಗೋ ಆತನಿಂದ ತಪ್ಪಿಸಿಕೊಂಡು ಪ್ರಾಣ ಉಳಿಸಿಕೊಂಡ ನರ್ಸ್ ತಮ್ಮ ಪತಿಗೆ ಕರೆ ಮಾಡಿ ವಿಷಯ ತಿಳಿಸಿದ್ದಾರೆ.
ಕೊರೊನಾ ವಾರಿಯರ್ ಮೈ ಮೇಲೆ ಎರಗಿ ಹಲ್ಲೆ
ಕೊರೊನಾ ವೈರಸ್ ಬಂದಾಗಿನಿಂದ ಆರೋಗ್ಯ ಇಲಾಖೆ ತಮ್ಮೆಲ್ಲಾ ಸಿಬ್ಬಂದಿಗಳಿಗೆ ಸೇವೆ ನಿರತ ಗ್ರಾಮಗಳಲ್ಲಿ ವಾಸ ಮಾಡಬೇಕೆಂದು ಆದೇಶ ಮಾಡಿದೆ. ಹೀಗಾಗಿ ಗ್ರಾಮದ ಹೊರವಲಯದಲ್ಲಿರುವ ಉಪ ಆರೋಗ್ಯ ಕೇಂದ್ರದಲ್ಲಿ ಒಬ್ಬಂಟಿಯಾಗಿ ಲಕ್ಷ್ಮೀ ವಾಸವಾಗಿದ್ದಾರೆ. ಇದನ್ನೇ ನೆಪ ಮಾಡಿಕೊಂಡ ಗ್ರಾ.ಪಂ ಬಿಜೆಪಿ ಬೆಂಬಲಿತ ಸದಸ್ಯ ಕೆ.ಬಸವರಾಜ ಕೊರೊನಾ ವಾರಿಯರ್ ಮೈ ಮೇಲೆ ಎರಗಿ ಹಲ್ಲೆ ಮಾಡಿದ್ದಾನೆ.
ಕೊರೊನಾದಿಂದ ಶಿಕ್ಷಕರ ಸಾವು; ಶಾಲೆ ಬೇಡವೇ ಬೇಡ ಎಂದ ಶಾಸಕ
ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು
ಇನ್ನು ಈ ವಿಷಯ ತಿಳಿದ ಲಕ್ಷ್ಮೀಯವರ ಪತಿ ಗ್ರಾ.ಪಂ ಸದಸ್ಯನನ್ನು ಪ್ರಶ್ನೆ ಮಾಡಿದಾಗ, ಕೆ.ಬಸವರಾಜ ಹಾಗೂ ಆತನ ತಂದೆ ಇಬ್ಬರೂ ಸೇರಿ ನರ್ಸ್ ಲಕ್ಷ್ಮೀ ಹಾಗೂ ಪತಿಯ ಮೇಲೆ ಹಲ್ಲೆ ಮಾಡಿದ್ದಾರೆ. ಈ ಕುರಿತು ಲಕ್ಷ್ಮೀ ಮತ್ತು ಅವರ ಪತಿ ಹೊಸಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಆದರೆ, ಗ್ರಾ.ಪಂ ಸದಸ್ಯ ಕೆ.ಬಸವರಾಜ ತನ್ನ ರಾಜಕೀಯ ಬೆಂಬಲದಿಂದ ಅಮಾಯಕ ಮಹಿಳೆ ಮೇಲೆ ಪ್ರತಿ ದೂರು ನೀಡಿದ್ದಾನೆ.
ಆರೋಪಿ ಬಸವರಾಜ ಮಹಿಳೆಯ ಮೇಲೆ ದಬ್ಬಾಳಿಕೆ
ಪ್ರಕರಣದಲ್ಲಿ ಜಾಮೀನು ಪಡೆದ ಆರೋಪಿ ಬಸವರಾಜ ಮಹಿಳೆಯ ಮೇಲೆ ಮತ್ತೆ ದಬ್ಬಾಳಿಕೆ ಮುಂದುವರೆಸಿದ್ದಾನೆ. ಅದು ಹೇಗೆ ಇಲ್ಲಿ ಕೆಲಸ ಮಾಡುತ್ತಿಯಾ? ಎಂದು ಸವಾಲು ಹಾಕಿದ್ದಾನೆ. ಹೀಗಾಗಿ ಮಹಿಳೆ ಜೀವ ಭಯದಲ್ಲಿ ಕೆಲಸ ಮಾಡುತ್ತಿದ್ದಾಳೆ.
ರಾಜ್ಯ ಸರ್ಕಾರವು ಕೊರೊನಾ ವಾರಿಯರ್ ಮೇಲೆ ಹಲ್ಲೆ ಮಾಡಿದರೆ, ಕಠಿಣ ಕಾನೂನು ಕ್ರಮ ಕೈಗೊಳ್ಳುವುದಾಗಿ ಹೇಳುತ್ತದೆ. ಆದರೆ ಈ ಪ್ರಕರಣದಲ್ಲಿ ಪೊಲೀಸರ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ. ಈ ರಾಜಕೀಯ ಪುಂಡ ಅಮಾಯಕ ಮಹಿಳೆಯ ಮೇಲೆ ರಾಜಾರೋಷವಾಗಿ ಹಲ್ಲೆ ಮಾಡುತ್ತಿದ್ದಾನೆ.
ಬಂಧಿಸಿ, ಶಿಕ್ಷೆ ನೀಡಬೇಕೆಂದು ಸಾರ್ವಜನಿಕರ ಆಗ್ರಹ
ಇವತ್ತಿನವರೆಗೂ ಆರೋಗ್ಯ ಸಚಿವರಾಗಿದ್ದ ಬಿ.ಶ್ರಿರಾಮುಲು ಅವರ ತವರು ಜಿಲ್ಲೆಯಲ್ಲಿ ಕೊರೊನಾ ವಾರಿಯರ್ಸ್ ಗೆ ರಕ್ಷಣೆ ಇಲ್ಲವಾದರೆ, ಇನ್ನುಳಿದ ಜಿಲ್ಲೆಯ ಸಿಬ್ಬಂದಿಗಳಿಗೆ ರಕ್ಷಣೆಯನ್ನು ಸರ್ಕಾರ ಅದು ಹೇಗೆ ಸರ್ಕಾರ ನೀಡುತ್ತದೆ ಎಂಬುದು ತಿಳಿಯದಾಗಿದೆ. ಆದಷ್ಟು ಬೇಗ ಕೊರೊನಾ ವಾರಿಯರ್ ಮೇಲೆ ಹಲ್ಲೆ ಮಾಡಿದವನನ್ನು ಬಂಧಿಸಿ, ಶಿಕ್ಷೆ ನೀಡಬೇಕೆಂದು ಸಾರ್ವಜನಿಕರ ಆಗ್ರಹವಾಗಿದೆ.