ಬಳ್ಳಾರಿಯಲ್ಲಿ ಕೋವಿಡ್ ಪರಿಸ್ಥಿತಿ; ತುರ್ತು ಸಭೆಯ ಮುಖ್ಯಾಂಶಗಳು
ಬಳ್ಳಾರಿ, ಏಪ್ರಿಲ್ 19; ಬಳ್ಳಾರಿ ಮತ್ತು ವಿಜಯನಗರ ಜಿಲ್ಲೆಯಲ್ಲಿ ಹೊಸ ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿದೆ. ಈ ಹಿನ್ನಲೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಅಧಿಕಾರಿಗಳ ಜೊತೆ ತುರ್ತು ಸಭೆಯನ್ನು ನಡೆಸಿದರು.
ಬಳ್ಳಾರಿಯ ವಿಮ್ಸ್ ಸಭಾಂಗಣದಲ್ಲಿ ಸೋಮವಾರ ನಡೆದ ಕೋವಿಡ್ ತುರ್ತು ಪರಿಸ್ಥಿತಿ ಸಭೆಯಲ್ಲಿ ಹಲವಾರು ವಿಚಾರಗಳ ಕುರಿತು ಚರ್ಚೆಯನ್ನು ನಡೆಸಲಾಯಿತು. ಜಿಲ್ಲೆಯು ಆಂಧ್ರಪ್ರದೇಶ ಗಡಿಗೆ ಹೊಂದಿಕೊಂಡಿದೆ. ಆ ಕಡೆಯಿಂದ ಬರುವ ಮಾರ್ಗಗಳಲ್ಲಿ ಚೆಕ್ಪೋಸ್ಟ್ ಸ್ಥಾಪಿಸಿ ಜನರ ತಪಾಸಣೆ ನಡೆಸಬೇಕು ಎಂದು ಸಚಿವರು ಸೂಚಿಸಿದರು.
ಮತ್ತಷ್ಟು ಜಿಲ್ಲೆಗಳಿಗೆ ನೈಟ್ ಕರ್ಫ್ಯೂ ವಿಸ್ತರಣೆ ಸಾಧ್ಯತೆ; ಯಡಿಯೂರಪ್ಪ
"ಸೋಂಕು ತಗುಲಿ ಹೋಂ ಐಸೋಲೇಶನ್ನಲ್ಲಿ ಚಿಕಿತ್ಸೆ ಪಡೆಯುತ್ತಿರುವವರ ಮೇಲೆ ತೀವ್ರ ನಿಗಾವಹಿಸಿ. ಅವರನ್ನು ಹೊರಗೆ ತಿರುಗಾಡದಂತೆ ನೋಡಿಕೊಳ್ಳಬೇಕು. ಯಾವುದೇ ಕಾರಣಕ್ಕೂ ನಿರ್ಲಕ್ಷ್ಯ ವಹಿಸದೇ ಬಿಗಿಯಾದ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಅಧಿಕಾರಿಗಳಿಗೆ ಸಚವರು ನಿರ್ದೇಶನ ನೀಡಿದರು.
ಏ.10ರಿಂದ ನೈಟ್ ಕರ್ಫ್ಯೂ: ಯಾವುದಕ್ಕೆಲ್ಲಾ ಅನುಮತಿ?
ಬಳ್ಳಾರಿ ಮತ್ತು ಹೊಸಪೇಟೆ ನಗರಗಳಲ್ಲಿ ಜಾರಿ ಮಾಡಲಾಗಿರುವ ಕೊರೊನಾ ಕರ್ಫ್ಯೂ ಕಟ್ಟುನಿಟ್ಟಾಗಿ ಅನುಷ್ಠಾನಗೊಳಿಸುವಂತೆ ಸೂಚನೆ ನೀಡಿದ ಸಚಿವ ಆನಂದ್ ಸಿಂಗ್ ಮಾಸ್ಕ್ ಧರಿಸದವರಿಗೆ ದಂಡ ವಿಧಿಸುವ ಕಾರ್ಯಾಚರಣೆ ಜಿಲ್ಲೆಯಾದ್ಯಂತ ಮುಂದುವರಿಸುವಂತೆ ಸೂಚಿಸಿದರು.
ಭಾರತದಲ್ಲಿ ಕೋವಿಡ್ ವೇಗವಾಗಿ ಹರಡಲು ಮೂರು ಕಾರಣ ನೀಡಿದ ಐಸಿಎಂಆರ್
ಗಡಿ ಭಾಗದಲ್ಲಿ ಕಟ್ಟೆಚ್ಚರ ವಹಿಸಿ
ಬಳ್ಳಾರಿ ಜಿಲ್ಲೆ ಆಂಧ್ರಪ್ರದೇಶ ಗಡಿಗೆ ಹೊಂದಿಕೊಂಡಿದೆ. ಚೆಕ್ಪೋಸ್ಟ್ ಸ್ಥಾಪಿಸಿ ಜನರಿಗೆ ತಪಾಸಣೆ ನಡೆಸಬೇಕು. 15 ದಿನಗಳ ಕಾಲ ಪರಿಣಾಮಕಾರಿಯಾಗಿ ತಪಾಸಣೆ ನಡೆಸಿ. ಪೊಲೀಸ್ ಮತ್ತು ಆರೋಗ್ಯ ಇಲಾಖೆಯಿಂದ ಅಗತ್ಯ ಸಿಬ್ಬಂದಿಯನ್ನು ನಿಯೋಜನೆ ಮಾಡಿ ಎಂದು ಸಚಿವರು ಹೇಳಿದರು.
"ಕಳೆದ ಬಾರಿ 9 ಚೆಕ್ ಪೋಸ್ಟ್ ಸ್ಥಾಪಿಸಿ ತಪಾಸಣೆ ನಡೆಸಲಾಗುತ್ತಿತ್ತು. ಈ ಬಾರಿ 6 ಚೆಕ್ ಪೋಸ್ಟ್ ಸ್ಥಾಪಿಸಲಾಗಿದೆ. ಪೊಲೀಸ್ ಮತ್ತು ಆರೋಗ್ಯ ಇಲಾಖೆಯ ಸಿಬ್ಬಂದಿಗಳ ಮೂಲಕ ಕಟ್ಟುನಿಟ್ಟಾಗಿ ತಪಾಸಣೆ ನಡೆಸಿ ಚಿಕಿತ್ಸೆ ಒದಗಿಸಲು ಪ್ರಯತ್ನಿಸಲಾಗುವುದು" ಎಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ತಿಳಿಸಿದರು.
ಜಿಂದಾಲ್ ಸಂಸ್ಥೆಯಲ್ಲಿ ನಿಯಮಾವಳಿ ಪಾಲನೆ
"ಜಿಂದಾಲ್ ಸಂಸ್ಥೆಯಲ್ಲಿ ಕಟ್ಟುನಿಟ್ಟಾಗಿ ಕೋವಿಡ್ ನಿಯಮಾವಳಿಗಳನ್ನು ಅನುಸರಿಸಬೇಕು ಮತ್ತು ತಮ್ಮ ಸಂಸ್ಥೆಯ ಕಾರ್ಮಿಕರು ಕಡ್ಡಾಯವಾಗಿ ಮಾಸ್ಕ್ ಧರಿಸುವ ಮತ್ತು ಸಾಮಾಜಿಕ ಅಂತರ ಪಾಲಿಸುವ ಹಾಗೂ ಆಗಾಗ್ಗೆ ಸ್ಯಾನಿಟೈಸರ್ ಬಳಸಬೇಕು" ಎಂದು ಜಿಂದಾಲ್ನ ಅಧಿಕಾರಿ ಪ್ರಭು ಅವರಿಗೆ ಸಚಿವರು ಸೂಚಿಸಿದರು. ಸೋಂಕು ಬಂದರೂ ಸಹ ಆಸ್ಪತ್ರೆಯ ಕಿರಿಕಿರಿ ಯಾಕೆ ಅಂತ ಹೋಂ ಐಸೋಲೇಶನ್ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ನಿಯಮಗಳನ್ನು ಸರಿಯಾಗಿ ಪಾಲಿಸುತ್ತಿಲ್ಲ ಎಂದು ಸಚಿವರು ಅಸಮಾಧಾನ ಹೊರಹಾಕಿದರು.
ಪ್ರತಿದಿನ 4 ಸಾವಿರ ಕೋವಿಡ್ ಪರೀಕ್ಷೆ
ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಮಾತನಾಡಿ, "ಜಿಲ್ಲೆಗೆ ರಾಜ್ಯ ಸರ್ಕಾರ ಪ್ರತಿನಿತ್ಯ 2,350 ಕೋವಿಡ್ ಟೆಸ್ಟ್ ಮಾಡಬೇಕೆನ್ನುವ ಗುರಿ ನಿಗದಿಪಡಿಸಿದೆ. ನಾವು ಪ್ರತಿನಿತ್ಯ 3500 ರಿಂದ 4 ಸಾವಿರ ಕೋವಿಡ್ ಟೆಸ್ಟ್ ಮಾಡುತ್ತಿದ್ದೇವೆ. ಆಸ್ಪತ್ರೆಗೆ ಬರುವವರನ್ನು ಹಾಗೂ ಅತಿಹೆಚ್ಚು ಜನಸಂದಣಿ ಇರುವ ಪ್ರದೇಶಗಳಿಗೆ ತೆರಳಿ ಅಲ್ಲಿಯೂ ಜನರಿಗೆ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ" ಎಂದರು.
ಬಳ್ಳಾರಿಯಲ್ಲಿ ಆಕ್ಸಿಜನ್ ಕೊರತೆ ಇಲ್ಲ
ಬಳ್ಳಾರಿ ಜಿಲ್ಲೆಯಲ್ಲಿ ಸದ್ಯ 1807 ಸಕ್ರಿಯ ಪ್ರಕರಣಗಳಿದ್ದು, ಅವರಲ್ಲಿ 328 ಜನರನ್ನು ಕೋವಿಡ್ ಆಸ್ಪತ್ರೆ ಸೇರಿದಂತೆ ಜಿಲ್ಲೆಯ ವಿವಿಧ ಕೋವಿಡ್ ಕೆರ್ ಸೆಂಟರ್ಗಳಿಗೆ ದಾಖಲಿಸಲಾಗಿದೆ. ಜಿಲ್ಲೆಯಲ್ಲಿ 1128 ಆಕ್ಸಿಜನ್ ಸೌಲಭ್ಯವಿರುವ ಬೆಡ್ಗಳಿದ್ದು,ಅವುಗಳಲ್ಲಿ 115 ಜನರು ದಾಖಲಾಗಿದ್ದಾರೆ. 210 ಐಸಿಯೂ ಬೆಡ್ಗಳಿದ್ದು, 28 ಭರ್ತಿಯಾಗಿವೆ.118 ವೆಂಟಿಲೇಟರ್ಗಳಿವೆ ಎಂದು ಜಿಲ್ಲಾಧಿಕಾರಿಗಳು ಹೇಳಿದರು. ಜಿಲ್ಲೆಯಲ್ಲಿ 1128 ಆಕ್ಸಿಜನ್ ಬೆಡ್ಗಳಿದ್ದು, ಅವುಗಳು ನಿರಂತರವಾಗಿ ನಡೆದರೂ 27 ಕೆಎಲ್ ಆಕ್ಸಿಜನ್ ಬೇಕಾಗಲಿದ್ದು, ಸಮರ್ಪಕ ಪ್ರಮಾಣದಲ್ಲಿ ನಮ್ಮಲ್ಲಿ ಆಕ್ಸಿಜನ್ ಲಭ್ಯವಿದೆ. ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು.