ಶಾಸಕ ಕರುಣಾಕರ್ ರೆಡ್ಡಿಗೆ ಕೊರೊನಾ ಪಾಸಿಟಿವ್
ವಿಜಯನಗರ, ಮೇ 22: ಹರಪನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಕರುಣಾಕರ್ ರೆಡ್ಡಿಗೆ ಕೊರೊನಾ ವೈರಸ್ ಪಾಸಿಟಿವ್ ಕಾಣಿಸಿಕೊಂಡಿದೆ. ಈ ಕುರಿತು ಅವರೇ ಖುದ್ದಾಗಿ ಮಾಹಿತಿ ಹಂಚಿಕೊಂಡಿದ್ದಾರೆ.
ಅವಿಭಜಿತ ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ಕ್ಷೇತ್ರದ ಬಿಜೆಪಿ ಶಾಸಕ ಕರುಣಾಕರ್ ರೆಡ್ಡಿ ಖುದ್ದು ವಿಡಿಯೋ ಮಾಡಿ, ನನಗೆ ಕೊರೊನಾ ಪಾಸಿಟಿವ್ ಕಾಣಿಸಿಕೊಂಡಿದ್ದು, ನಾನು ಆರೋಗ್ಯವಾಗಿದ್ದೇನೆ. ಯಾರೂ ಸಹ ನನ್ನ ಕ್ಷೇತ್ರದ ಜನತೆ ಭಯ ಪಡುವ ಅಗತ್ಯವಿಲ್ಲ, ವೈದ್ಯರ ಸಲಹೆಯಂತೆ ನಾನು ಹೋಂ ಐಸೋಲೇಷನ್ನಲ್ಲಿ ಇದ್ದೇನೆ ಎಂದಿದ್ದಾರೆ.
ಮನೆಯಿಂದಲೇ ನನ್ನ ಕ್ಷೇತ್ರದ ಜನತೆ ಮತ್ತು ಅಪ್ಡೇಟ್ಗಳ ಬಗ್ಗೆ ಮಾಹಿತಿ ಪಡೆಯುತ್ತಿದ್ದೇನೆ, ಕೊರೊನಾದ ಬಗ್ಗೆ ಏನೆಲ್ಲ ಕ್ರಮಗಳನ್ನು ಕೈಗೊಳ್ಳಬೇಕೆಂಬುದರ ಬಗ್ಗೆ ನಿತ್ಯ ತಾಲ್ಲೂಕು ಆಡಳಿತ ಮತ್ತು ಹರಪನಹಳ್ಳಿಯ ವೈದ್ಯಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳ ಜೊತೆ ನಾನು ದೂರವಾಣಿ ಮೂಲಕ ನಿರಂತರ ಸಂಪರ್ಕದಲ್ಲಿದ್ದುಕೊಂಡು ನನ್ನ ಕ್ಷೇತ್ರದ ಜನತೆಗೆ ತೊಂದರೆಯಾಗದ ರೀತಿಯಲ್ಲಿ ನೋಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ಹರಪನಹಳ್ಳಿಯ ಕೋವಿಡ್ ಪ್ರಕರಣಗಳಲ್ಲಿ ತೀವ್ರತೆ ಕಾಣಿಸಿಕೊಂಡವರಿಗೆ ತೋರಣಗಲ್ನ ಸಂಜೀವಿನಿ ಆಸ್ಪತ್ರೆಗೆ ಕಳಿಸಲಾಗುತ್ತಿದೆ ಮತ್ತು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಸಹ ದಾಖಲಿಸಲಾಗುತ್ತಿದೆ ಎಂದರು.
ನಿಮ್ಮ ಆರೋಗ್ಯದಲ್ಲಿ ಶೀತ, ಕೆಮ್ಮ, ಜ್ವರ ಯಾವುದೇ ರೀತಿಯ ಸಮಸ್ಯೆ ಕಾಣಿಸಿಕೊಂಡರೆ ತಕ್ಷಣವೇ ಸರ್ಕಾರಿ ಆಸ್ಪತ್ರೆಗೆ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಹರಪನಹಳ್ಳಿ ಕ್ಷೇತ್ರದ ತನ್ನ ಜನತೆಗೆ ಮನವಿ ಮಾಡಿದ್ದಾರೆ.