ಸ್ಟೀಲ್ ಉತ್ಪಾದನೆ ಕಡಿಮೆಯಾದರೂ ಪರವಾಗಿಲ್ಲ, ಆಕ್ಸಿಜನ್ಗೆ ಮೊದಲ ಆದ್ಯತೆ: JSW
ವಿಜಯನಗರ: ಏಪ್ರಿಲ್ 29: ಇಡೀ ದೇಶಾದ್ಯಂತ ಕೊರೊನಾ ಸೋಂಕಿತರು ಆಕ್ಸಿಜನ್ ಕೊರತೆಯಿಂದ ಸಾವನ್ನಪ್ಪುತ್ತಿದ್ದಾರೆ. ಇಂತಹ ತುರ್ತು ಸಂದರ್ಭದಲ್ಲಿ ಹೊಸಪೇಟೆಯ ತೋರಣಗಲ್ಲಿನಲ್ಲಿರುವ ಜೆಎಸ್ಡಬ್ಲ್ಯೂ ಸ್ಟೀಲ್ ಸಂಸ್ಥೆ ವೈದ್ಯಕೀಯ ಕ್ಷೇತ್ರದ ಆಮ್ಲಜನಕ ಉತ್ಪಾದನೆಯನ್ನು ಮೂರು ಪಟ್ಟು ಹೆಚ್ಚು ಮಾಡಲು ಮುಂದಾಗಿದೆ.
ತೋರಣಗಲ್ಲಿನಲ್ಲಿರುವ ತನ್ನ ಪ್ಲಾಂಟ್ನ ಆಕ್ಸಿಜನ್ ಘಟಕದಲ್ಲಿ ಇಡೀ ರಾಜ್ಯದ ಪರಿಸ್ಥಿತಿ ನೋಡಿ ವೈದ್ಯಕೀಯ ಕ್ಷೇತ್ರಕ್ಕೆ ಆಮ್ಲಜನಕ ಪೂರೈಕೆ ಮಾಡುತ್ತೇವೆ ಎಂದು ಜೆಎಸ್ಡಬ್ಲ್ಯೂ ಸ್ಟೀಲ್ ಅಧ್ಯಕ್ಷ ರಾಜಶೇಖರ್ ಪಟ್ಟಣಶೆಟ್ಟಿ ತಿಳಿಸಿದ್ದಾರೆ.
ಕೊರೊನಾ 2ನೇ ಅಲೆ ಆರಂಭವಾದಾಗಿನಿಂದ ಸೋಂಕಿತರ ಸಂಖ್ಯೆ ದಿನೇ ದಿನೇ ಹೆಚ್ಚುತ್ತಿದೆ. ಆಸ್ಪತ್ರೆಗಳಲ್ಲಿ ಬೆಡ್ಗಳ ಮತ್ತು ವೆಂಟಿಲೇಟರ್ಗಳ ಕೊರತೆ ಒಂದು ಕಡೆಯಾದರೆ, ಮತ್ತೊಂದು ಕಡೆ ಕೊರೊನಾ ಸೋಂಕಿತರಿಗೆ ಆಕ್ಸಿಜನ್ ಇಲ್ಲದೆ ಸಾವನ್ನಪ್ಪುತ್ತಿದ್ದಾರೆ. ಇಡೀ ದೇಶಾದ್ಯಂತ ವೈದ್ಯಕೀಯ ಕ್ಷೇತ್ರಕ್ಕೆ ಆಮ್ಲಜನಕದ ಕೊರತೆ ಕಾಡುತ್ತಿದೆ. ವಿಶೇಷವೆಂದರೆ ವಿಜಯನಗರದ ಜಿಂದಾಲ್ನಿಂದ ಉತ್ಪಾನೆಯಾಗುವ ಆಕ್ಸಿಜನ್ ಬಹುಪಾಲು ಕರ್ನಾಟಕಕ್ಕೆ ಹಂಚಿಕೆಯಾಗುತ್ತಿದೆ.
ಏಪ್ರಿಲ್ ತಿಂಗಳ ಆರಂಭದಲ್ಲಿ ಸರಾಸರಿ 200 ಟನ್ ಉತ್ಪಾದಿಸುತ್ತಿತ್ತು. ಆದರೆ, ಕೋವಿಡ್ ತುರ್ತು ಪರಿಸ್ಥಿತಿ ಸಂದರ್ಭವನ್ನು ನೋಡಿ ಈಗ ತಿಂಗಳಿಗೆ ಸರಾಸರಿ 680 ಟನ್ಗೆ ಏರಿಕೆ ಮಾಡಲಾಗಿದ್ದು, ಏಪ್ರಿಲ್ ತಿಂಗಳಲ್ಲಿ ಜೆಎಸ್ಡಬ್ಲ್ಯೂ 11,500 ಟನ್ ಗಿಂತಲೂ ಹೆಚ್ಚಿನ ವೈದ್ಯಕೀಯ ಆಮ್ಲಜನಕವನ್ನು ಈಗಾಗಲೇ ಪೂರೈಸಿದೆ.
ಈಗ ಸದ್ಯ ಒಂದು ದಿನಕ್ಕೆ 900 ಟನ್ವರೆಗೂ ಉತ್ಪಾದನೆ ಮಾಡುತ್ತಿದ್ದು, ಇನ್ನು ಅಗತ್ಯ ಬಿದ್ದರೆ ಸ್ಟೀಲ್ ಉತ್ಪಾದನೆ ಕಡಿಮೆಯಾದರೂ ಪರವಾಗಿಲ್ಲ, ಆಕ್ಸಿಜನ್ಗೆ ನಾವು ಮೊದಲ ಆದ್ಯತೆ ಕೊಡುತ್ತೇವೆ ಎಂದು ಜೆಎಸ್ಡಬ್ಲ್ಯೂ ಸಂಸ್ಥೆ ಹೇಳಿಕೊಂಡಿದೆ.
ಬಳ್ಳಾರಿ ಮತ್ತು ವಿಜಯನಗರ ಅವಳಿ ಜಿಲ್ಲೆಗಳಲ್ಲಿ ಕೊರೊನಾ ಸೋಂಕಿತ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನಲೆ ತೋರಣಗಲ್ನಲ್ಲಿ 1,000 ಬೆಡ್ಗಳನ್ನು ಮಾಡಲಾಗುತ್ತಿದೆ. ಜತೆಗೆ ಈ ಒಂದು ಸಾವಿರ ಬೆಡ್ಗಳಿಗೆ ಆಕ್ಸಿಜನ್ ಪೈಪ್ಲೈನ್ ಸಹ ಅಳವಡಿಸಲಾಗುತ್ತಿದೆ.
ಪ್ರತಿ ಹಳ್ಳಿಗಳಿಗೆ ಕೊರೊನಾ ಜಾಗೃತಿ, ಮಾಸ್ಕ್ ಮತ್ತು ಸ್ಯಾನಿಟೈಸರ್ ಉಚಿತವಾಗಿ ವಿತರಣೆ ಮಾಡಲಾಗುತ್ತಿದೆ. ಸಾಂಕ್ರಾಮಿಕ ಪರಿಣಾಮವನ್ನು ಕಡಿಮೆ ಮಾಡಲು ಸರಕಾರ ಮತ್ತು ಆರೋಗ್ಯ ಕ್ಷೇತ್ರಕ್ಕೆ ಎಲ್ಲಾ ಬೆಂಬಲವನ್ನು ನಾವು ನೀಡಲು ಯಾವಾಗಲೂ ಬದ್ಧರಿದ್ದೇವೆ. ಸಮಾಜಕ್ಕೆ ಆಗಿರುವ ಕಷ್ಟಗಳನ್ನು ಕಡಿಮೆ ಮಾಡುವಲ್ಲಿ ನಮ್ಮ ಪ್ರಾಮಾಣಿಕ ಪ್ರಯತ್ನಗಳನ್ನು ಮುಂದುವರೆಸುತ್ತೇವೆ ಎಂದಿದ್ದಾರೆ.
ಜೀವಗಳನ್ನು ಉಳಿಸಲು ಈ ನಿರ್ಣಾಯಕ ಕಾಲದಲ್ಲಿ ವೈದ್ಯಕೀಯ ಆಮ್ಲಜನಕದ ಪೂರೈಕೆಯನ್ನು ಮತ್ತಷ್ಟು ಹೆಚ್ಚಿಸಲು ಜೆಎಸ್ಡಬ್ಲ್ಯೂ ಬದ್ಧವಾಗಿದೆ. ನಮ್ಮ ರಾಷ್ಟ್ರದ ಹಿತದೃಷ್ಟಿಯಿಂದ ಆಮ್ಲಜನಕದ ಪೂರೈಕೆ ಮಾಡಲು ಸಂಸ್ಥೆಯು ಎಲ್ಲಾ ರೀತಿಯಲ್ಲಿ ಸನ್ನದ್ಧವಾಗಿದೆ ಎಂದು ಜಿಂದಾಲ್ ಸ್ಟೀಲ್ ವಿಜಯನಗರ ವರ್ಕ್ಸ್ ಅಧ್ಯಕ್ಷ ರಾಜಶೇಖರ್ ಪಟ್ಟಣಶೆಟ್ಟಿ ಹೇಳಿದ್ದಾರೆ.