ಆರೋಗ್ಯ ಇಲಾಖೆ ಸಿಬ್ಬಂದಿಗೆ ಆರು ತಿಂಗಳ ವೇತನ ನೀಡಿ: ಕಾಂಗ್ರೆಸ್
ಹಗರಿಬೊಮ್ಮನಹಳ್ಳಿ, ಏಪ್ರಿಲ್ 30: ರಾಜ್ಯದಲ್ಲಿ ಕೋರೋನಾ ನಿಯಂತ್ರಣಕ್ಕಾಗಿ ದಿನದ ಇಪ್ಪತ್ತಾಲ್ಕು ತಾಸು ಕಾರ್ಯನಿರ್ವಹಿಸುವ ಆರೋಗ್ಯ ಇಲಾಖೆ ಸಿಬ್ಬಂದಿ ಕಳೆದ ಆರು ತಿಂಗಳಿನಿಂದ ವೇತನವಿಲ್ಲದೇ ಸಂಕಷ್ಟದಲ್ಲಿದ್ದು, ತಕ್ಷಣವೇ ವೇತನ ಜೊತೆಗೆ ಪ್ರೋತ್ಸಾಹ ಭತ್ಯೆ ಬಿಡುಗಡೆಗೊಳಿಸಬೇಕೆಂದು ಕೆಪಿಸಿಸಿ ಮಾಧ್ಯಮ ವಕ್ತಾರ ಪತ್ರೇಶ್ ಹಿರೇಮಠ್ ಆಗ್ರಹಿಸಿದ್ದಾರೆ.
Recommended Video
ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು ಎರಡು ತಿಂಗಳಿನಿಂದ ರಜೆಯೂ ಇಲ್ಲದೇ ಸಂಬಳವೂ ಇಲ್ಲದೇ ಕೆಲಸ ನಿರ್ವಹಿಸುತ್ತಿರುವ ಖಾಯಂ ನೌಕರರ ಹಾಗೂ ರಾಜ್ಯ ವಲಯದಡಿ ಹೊರಗುತ್ತಿಗೆಯಡಿ ನೇಮಕಗೊಂಡ ಶುಶ್ರೂಶಕಿಯರು,ಕಿರಿಯ ಆರೋಗ್ಯ ಸಹಾಯಕರು ,ಗ್ರೂಪ್ ಡಿ ಸಿಬ್ಬಂದಿ,ವಾಹನ ಚಾಲಕ ಮತ್ತು ಪ್ರಯೋಗಶಾಲೆ ತಜ್ಞರಿಗೆ ಕಳೆದ ಆರು ತಿಂಗಳಿನಿಂದ ಸಂಬಳ ಬಿಡುಗಡೆಯಾಗಿಲ್ಲ. ಸಂಬಳವಿಲ್ಲದೆ ಮನೆಬಾಡಿಗೆ ತರಕಾರಿ ಹಾಲು ರೇಶನ್ಗೂ ಹಣವಿಲ್ಲದೇ ತುಂಬಾ ತೊಂದರೆಯಲ್ಲಿದ್ದಾರೆ.
ತಮ್ಮ ಕುಟುಂಬದ ಆರೋಗ್ಯದ ಹಿತಾಸಕ್ತಿಯನ್ನು ಪಣಕ್ಕಿಟ್ಟು ರಾಜ್ಯದ ಜನತೆಯ ಆರೋಗ್ಯ ಕಾಪಾಡಲು ಹಗಲಿರುಳು ಶ್ರಮಿಸುವ ಆರೋಗ್ಯ ಇಲಾಖೆ ಸಿಬ್ಬಂದಿಯ ಸಂಬಳ ಬಿಡುಗಡೆಗೆ ಸರ್ಕಾರ ನಿರ್ಲಕ್ಷ್ಯ ತೋರುತ್ತಿರುವುದು ಸಿಬ್ಬಂದಿಗಳ ಮೇಲಿನ ಬೇಜವಾಬ್ದಾರಿಯನ್ನು ಎತ್ತಿ ತೋರಿಸುತ್ತಿದ್ದು ಆರೋಗ್ಯ ಸಚಿವ ಶ್ರೀರಾಮುಲು ತಕ್ಷಣವೇ ಸಿಬ್ಬಂದಿಗಳ ಸಂಬಳ ವಿತರಿಸಲು ಕ್ರಮ ಕೈಗೊಳ್ಳಬೇಕೆಂದು ಕಾಂಗ್ರೆಸ್ ವಕ್ತಾರ ಪತ್ರೇಶ್ ಒತ್ತಾಯಿಸಿದರು.