ಬಳ್ಳಾರಿಯಲ್ಲಿ ಮನೆ ಚಾವಣಿ ಕುಸಿದು ದಂಪತಿ ಸಾವು
ಬಳ್ಳಾರಿ, ಡಿಸೆಂಬರ್ 01: ಬಳ್ಳಾರಿಯಲ್ಲಿ ಮಂಗಳವಾರ ಬೆಳ್ಳಂಬೆಳಿಗ್ಗೆ ದುರಂತವೊಂದು ಸಂಭವಿಸಿದೆ. ಮನೆಯ ಚಾವಣಿ ಕುಸಿದು ಬಿದ್ದು ದಂಪತಿ ಸಾವನ್ನಪ್ಪಿರುವ ಘಟನೆ ನಡೆದಿದೆ.
ಬಳ್ಳಾರಿ ನಗರದ ಕೌಲ್ ಬಜಾರ ವ್ಯಾಪ್ತಿಯ ಕಡಪ ಬೀದಿಯಲ್ಲಿ ಮನೆಯ ಗೋಡೆ, ಚಾವಣಿ ಕುಸಿದು, ಮನೆಯಲ್ಲಿ ಮಲಗಿದ್ದ ಕೊಲ್ಲಣ್ಣ (45) ಹಾಗೂ ಸಾವಿತ್ರಮ್ಮ (40) ದಂಪತಿ ಸಾವನ್ನಪ್ಪಿದ್ದಾರೆ. ಅವಘಡದಲ್ಲಿ ದಂಪತಿಯ 12 ವರ್ಷದ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ತೀರ್ಥಹಳ್ಳಿ ತಾಲೂಕು ಕಚೇರಿ ಸಭಾಂಗಣದ ಚಾವಣಿ ಕುಸಿತ
ಆಟೋ ಚಾಲಕನಾಗಿದ್ದ ಕೊಲ್ಲಣ್ಣ ತನ್ನ ಕುಟುಂಬದೊಂದಿಗೆ ಮಣ್ಣಿನ ಮನೆಯಲ್ಲಿ ವಾಸಿಸುತ್ತಿದ್ದರು. ಇತ್ತೀಚೆಗೆ ಸುರಿದ ಮಳೆಗೆ ಮನೆಯ ಗೋಡೆ ಶಿಥಿಲಗೊಂಡಿತ್ತು. ಹೀಗಾಗಿ ದುರಂತ ಸಂಭವಿಸಿದೆ. ಮನೆಯಲ್ಲಿ ಇದ್ದ ಮೂರು ಜನರು ರಾತ್ರಿ ಊಟ ಮಾಡಿ ಮಲಗಿದ್ದಾರೆ. ಬೆಳಗಿನ ಜಾವ ಏಕಾಏಕಿ ಮನೆಯ ಪಕ್ಕದ ಗೋಡೆ ಕುಸಿದಿದೆ. ಬಳಿಕ ಮನೆಯ ಚಾವಣಿ ಸಹ ಕುಸಿದು ಬಿದ್ದಿದೆ. ಹೀಗಾಗಿ ಮನೆಯಲ್ಲಿ ಮಲಗಿದ್ದ ದಂಪತಿ ಸಾವಿಗೀಡಾಗಿದ್ದಾರೆ.
ಮನೆಯ ಮತ್ತೊಂದು ಭಾಗದಲ್ಲಿ ಮಲಗಿದ್ದ ಮಗ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಈ ಸಂಬಂಧ ಕೌಲ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.