ಕೊರೊನಾ ಕಮ್ಮಿಯಾಗಲು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದ ಫಟಾಫಟ್ ಸೂತ್ರ
ಬಳ್ಳಾರಿ, ಏಪ್ರಿಲ್ 18: ಮಹಾಮಾರಿ ಕೊರೊನಾ ಕಮ್ಮಿಯಾಗಲು ಆರೋಗ್ಯ ಸಚಿವ ಬಿ.ಶ್ರೀರಾಮುಲು, ಫಟಾಫಟ್ ಸೂತ್ರವೊಂದನ್ನು ಜನರ ಮುಂದಿಟ್ಟಿದ್ದಾರೆ.
ನಗರದಲ್ಲಿ ಆಹಾರ ಕಿಟ್ ಅನ್ನು ವಿತರಿಸಿ ಮಾತನಾಡುತ್ತಿದ್ದ ಶ್ರೀರಾಮುಲು, 'ಕೊರೊನಾ ಸೋಂಕಿನಿಂದ ಗುಣಮುಖರಾಗಲು ಸುಲಭ ದಾರಿಯೊಂದಿದೆ. ಬಿಸಿನೀರಿಗೆ ಉಪ್ಪು, ಅರಸಿಣವನ್ನು ಹಾಕಿ, ಅದರಿಂದ ಬಾಯಿಯನ್ನು ಮುಕ್ಕಳಿಸಿಕೊಳ್ಳಿ" ಎಂದು ಹೇಳಿದ್ದಾರೆ.
ಏ.20ರಿಂದ ಕರ್ನಾಟಕದಲ್ಲಿ ಲಾಕ್ಡೌನ್ ಸಡಿಲಿಕೆ: ಬಿಎಸ್ವೈ ಹೇಳಿದ್ದೇನು?
"ನಾನೇನೂ ವೈದ್ಯನಲ್ಲ. ಚೀನಾದಲ್ಲಿ ಈ ರೀತಿ ಮಾಡಿರುವ ಬಗ್ಗೆ ಲೇಖನವೊಂದನ್ನು ಓದಿದ್ದೆ. ಕೊರೊನಾದ ಈ ಸಮಯದಲ್ಲಿ ಎಲ್ಲರೂ, ಬಿಸಿನೀರು ಬಳಸಿಕೊಳ್ಳುವುದು ಸೂಕ್ತ" ಎಂದು ಆರೋಗ್ಯ ಸಚಿವ ಶ್ರೀರಾಮುಲು ಅಭಿಪ್ರಾಯ ಪಟ್ಟಿದ್ದಾರೆ.
ಇದಕ್ಕೂ ಮೊದಲು ಹಾವೇರಿಯಲ್ಲಿ ಜಿಲ್ಲಾಧಿಕಾರಿಗಳ ಮಟ್ಟದ ಸಭೆಯಲ್ಲಿ ಭಾಗವಹಿಸಿದ್ದ ಶ್ರೀರಾಮುಲು, ಅಧಿಕಾರಿಗಳಿಂದ ಸಮಗ್ರ ಮಾಹಿತಿಯನ್ನು ಪಡೆದುಕೊಂಡರು. ಹಾವೇರಿ ಜಿಲ್ಲೆ ರಾಜ್ಯದ ಗ್ರೀನ್ ಝೋನ್ ನಲ್ಲಿರುವ ಜಿಲ್ಲೆಗಳಲ್ಲೊಂದು.
"ರಾಜ್ಯದಲ್ಲಿ ಯಾರು ಕೂಡಾ ಹಸಿವಿನಿಂದ ಬಳಲಬಾರದು. ಶ್ರೀಮಂತರು, ಬಡವರಿಗೆ, ನಿರ್ಗತಿಕರಿಗೆ ಮತ್ತು ಕೂಲಿಕಾರ್ಮಿಕರಿಗೆ ಸಹಾಯವಾಗುವಂತೆ ದಾನಮಾಡಿ" ಎಂದು ಶ್ರೀರಾಮುಲು ಕರೆನೀಡಿದರು.
"ಬಿಸಿಲಿನ ತಾಪ ಹೆಚ್ಚು ಇರುವ ಕಡೆ, ಕೊರೊನಾ ಸೋಂಕು ತಗುಲಿದರೂ, ಬಹುಬೇಗ ಇದರಿಂದ ಗುಣಮುಖರಾಗಬಹುದು" ಎಂದು ಶ್ರೀರಾಮುಲು ಹೇಳಿದ್ದಾರೆ.