ಬಳ್ಳಾರಿ : ಒಂದೇ ಕುಟುಂಬದ ಮೂವರಿಗೆ ಕೊರೊನಾ ಸೋಂಕು, ಜನರಿಗೆ ಸೂಚನೆ
ಬಳ್ಳಾರಿ, ಮಾರ್ಚ್ 30 : ಕರ್ನಾಟಕದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಸೋಮವಾರ 91ಕ್ಕೆ ಏರಿಕೆಯಾಗಿದೆ. ಬಳ್ಳಾರಿ ಜಿಲ್ಲೆಯಲ್ಲಿ ಹೊಸಪೇಟೆಯಲ್ಲಿ ಒಂದೇ ಕುಟುಂಬದ ಮೂವರಿಗೆ ಸೋಂಕು ತಗುಲಿದೆ.
ಸೋಮವಾರ ರಾತ್ರಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಈ ಕುರಿತು ಖಚಿತಪಡಿಸಿದ್ದಾರೆ. ಮೂವರಿಗೆ ಸೋಂಕು ತಗುಲಿರುವುದು ಖಚಿತ ಎಂದು ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.
ಕೊರೊನಾ ಪೀಡಿತರು ಮೃತಪಟ್ಟರೆ ಅಂತ್ಯ ಸಂಸ್ಕಾರಕ್ಕೂ ಮಾರ್ಗಸೂಚಿ!
ಒಂದೇ ಕುಟುಂಬದ ಮೂವರಿಗೆ ಸೋಂಕು ತಗುಲಿದ್ದು, ಎಲ್ಲರನ್ನೂ ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ದಾಖಲು ಮಾಡಲಾಗಿದೆ ಎಂದು ಆರೋಗ್ಯ ಸಚಿವರು ಟ್ವೀಟರ್ನಲ್ಲಿ ತಿಳಿಸಿದ್ದಾರೆ.
ಆರೋಗ್ಯ ಸಚಿವರ ಟ್ವೀಟ್
ಇಂದು ಹೊಸಪೇಟೆಯಲ್ಲಿ ಒಂದೇ ಕುಟುಂಬದ ಮೂವರಿಗೆ #COVID19 ಸೋಂಕು ಖಚಿತವಾಗಿದ್ದು, ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 91ಕ್ಕೆ ಏರಿದೆ. ಇವರನ್ನು ಈಗಾಗಲೇ ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ದಾಖಲಿಸಲಾಗಿದೆ. #IndiaFightsCorona
— B Sriramulu (@sriramulubjp) March 30, 2020
ಬಳ್ಳಾರಿ ಜಿಲ್ಲೆಯಲ್ಲಿ ಸೋಮವಾರದ ತನಕ 4 ಕೊರೊನಾ ಪ್ರಕರಣಗಳು ದಾಖಲಾಗಿದ್ದವು. ಒಟ್ಟು 10 ಜನರನ್ನು ಪ್ರತ್ಯೇಕಿಸಲ್ಪಟ್ಟ ಕೇಂದ್ರದಲ್ಲಿ ದಾಖಲು ಮಾಡಲಾಗಿದೆ.
ಕೊರೊನಾ : ರೈಲ್ವೆ ನಿರ್ಮಿಸುತ್ತಿರುವ ವಾರ್ಡ್ಗಳು ಎಷ್ಟು ಗೊತ್ತಾ?
ಇಂದು ಒಂದೇ ಕುಟುಂಬದ ಮೂವರಿಗೆ ಸೋಂಕು ತಗುಲಿದೆ. ಆದರೆ, ಇವರು ಯಾರು, ವಿದೇಶ ಪ್ರವಾಸದ ಹಿನ್ನಲೆ ಹೊಂದಿರುವವರೇ? ಎಂಬ ಮಾಹಿತಿ ಇನ್ನೂ ಸಿಕ್ಕಿಲ್ಲ.
ಕಂಟೈನ್ಮೆಂಟ್ ಝೋನ್ : ಯಾವುದೇ ಪ್ರದೇಶದಲ್ಲಿ ಕೊರೊನಾ ಪಾಸಿಟಿವ್ ಕೇಸ್ ಪತ್ತೆಯಾದಾಗ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದ ಮಾರ್ಗಸೂಚಿಗಳ ಪ್ರಕಾರ ಕ್ರಮ ಕೈಗೊಳ್ಳಲಾಗುತ್ತದೆ.
ಮೂರನೇ ಹಂತ ತಲುಪುತ್ತಿದೆ ಕೊರೊನಾ; ಆಸ್ಪತ್ರೆ ಆದವು ರೈಲ್ವೆ ಬೋಗಿ!
ಆದ್ದರಿಂದ, ಹೊಸಪೇಟೆ ನಗರಸಭೆ ವ್ಯಾಪ್ತಿಯನ್ನು ಕಂಟೈನ್ಮೆಂಟ್ ಝೋನ್ ಆಗಿ ಘೋಷಣೆ ಮಾಡಲಾಗಿದೆ. ಸೋಮವಾರ ಸಂಜೆಯಿಂದಲೇ ಯಾವುದೇ ರೀತಿಯ ವಾಹನ ಸಂಚಾರ ಆಗಲಿ ಅಥವಾ ಜನರ ಓಡಾಟವಾಗಲಿ ಅಥವಾ ಹೊರಗಡೆಯಿಂದ ಒಳಗಡೆ ಬರುವುದಕ್ಕೆ ಅವಕಾಶವಿರುವುದಿಲ್ಲ.
ಮಾ.31ರಿಂದ ಬೆಳಗ್ಗೆ 9ರಿಂದ 10ರವರೆಗೆ ಮಾತ್ರ ಜನರಿಗೆ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ ಮಾಡಿಕೊಡಲಾಗಿದೆ. ಎಲ್ಲ ರಸ್ತೆಗಳಲ್ಲಿ ನಾಕಾಬಂಧಿ ಹಾಕಲಾಗಿರುವುದರಿಂದ ಮನೆಗೊಬ್ಬರು ಮಾತ್ರ ಹೊರಬಂದು ತಮ್ಮ ಏರಿಯಾದಲ್ಲಿನ ಅಂಗಡಿಗಳಲ್ಲಿಯೇ ಖರೀದಿ ಮಾಡಬೇಕು.