ಬಳ್ಳಾರಿ, ಉಡುಪಿಯಲ್ಲಿ SSLC ವಿದ್ಯಾರ್ಥಿಗಳಿಗೆ ಕೊರೊನಾ ಸೋಂಕು
ಬಳ್ಳಾರಿ, ಜೂನ್ 28: ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಮರಳಿ ಮನೆಗೆ ತೆರಳುವಾಗ ಅಪಘಾತದಲ್ಲಿ ಗಾಯಗೊಂಡ ವಿದ್ಯಾರ್ಥಿಗೆ ಕೊರೊನಾ ವೈರಸ್ ಪರೀಕ್ಷೆ ಮಾಡಿದಾಗ ಪಾಸಿಟಿವ್ ಬಂದ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ಅದೇ ರೀತಿ ಉಡುಪಿ ಜಿಲ್ಲೆಯ ಕಾಪು ತಾಲ್ಲೂಕಿನ ಎಸ್ಎಸ್ಎಲ್ಸಿ ವಿದ್ಯಾರ್ಥಿನಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈಗಾಗಲೇ ಎರಡು ಪರೀಕ್ಷೆಗಳನ್ನು ಬರೆದಿರುವ ವಿದ್ಯಾರ್ಥಿನಿ ತಂದೆಗೆ ಶನಿವಾರ ಕೊರೊನಾ ಸೋಂಕು ದೃಢವಾಗಿತ್ತು.
ಪಿಎಸ್ ಐ ಮಾಡಿದ ಪಾರ್ಟಿಗೆ ಇಡೀ ಕಂಪ್ಲಿ ಪೊಲೀಸ್ ಠಾಣೆ ಸೀಲ್ ಡೌನ್
ಎಸ್ಎಸ್ಎಲ್ಸಿ ವಿದ್ಯಾರ್ಥಿನಿಯನ್ನು ವೈದ್ಯರು ಪರೀಕ್ಷೆಗೆ ಒಳಪಡಿಸಿದಾಗ ಪಾಸಿಟಿವ್ ಬಂದಿದ್ದು, ವಿದ್ಯಾರ್ಥಿನಿಗೆ ಮುಂದಿನ ಪರೀಕ್ಷೆಗಳನ್ನು ಬರೆಯುವ ಅವಕಾಶ ಇಲ್ಲವೆಂದು ಮಾಧ್ಯಮಗಳಿಗೆ ಜಿಲ್ಲಾ ವೈದ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಇನ್ನು ಜೂನ್ 25 ರಂದು ಬಳ್ಳಾರಿ ಜಿಲ್ಲೆಯ ಕಪಗಲ್ ಗ್ರಾಮದ ವಿದ್ಯಾರ್ಥಿಗಳಿಬ್ಬರು ಎಸ್ಎಸ್ಎಲ್ಸಿ ಪರೀಕ್ಷೆ ಬರೆದು ಮರಳಿ ಗ್ರಾಮಕ್ಕೆ ತೆರಳುವಾಗ, ಬಳ್ಳಾರಿಯ ಹೊರವಲಯದಲ್ಲಿ ಬೈಕ್ ಅಪಘಾತವಾಗಿದೆ. ಬೈಕ್ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಣ್ಣಪುಟ್ಟ ಗಾಯವಾಗಿದ್ದು, ಸ್ಥಳೀಯರು ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅದರಲ್ಲಿನ ಒಬ್ಬ ವಿದ್ಯಾರ್ಥಿಗೆ ಕೊರೊನಾ ವೈರಸ್ ರೋಗ ಗುಣಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ವಿಮ್ಸ್ ಆಸ್ಪತ್ರೆಯ ವೈದ್ಯರು, ಇಬ್ಬರು ವಿದ್ಯಾರ್ಥಿಗಳಿಗೆ ಕೋವಿಡ್ ಪರೀಕ್ಷೆ ನಡೆಸಿದ್ದಾರೆ. ಶನಿವಾರ ಕೋವಿಡ್ ಪರೀಕ್ಷಾ ವರದಿ ಬಂದಿದ್ದು, ಒಬ್ಬ ವಿದ್ಯಾರ್ಥಿಗೆ ಕೊರೊನಾ ವೈರಸ್ ಪಾಸಿಟಿವ್ ಬಂದಿದೆ.
ಬಳ್ಳಾರಿಯಲ್ಲಿ ಕೊರೊನಾ ಭಯಕ್ಕೆ ಶವದ ಹತ್ತಿರ ಸುಳಿಯದ ಕುಟುಂಬ; ಅಂತ್ಯಸಂಸ್ಕಾರ ಮಾಡಿದವರಲ್ಲೀಗ ಭಯ
ಹೀಗಾಗಿ ಆ ವಿದ್ಯಾರ್ಥಿಯನ್ನು ಜಿಲ್ಲಾ ಕೋವಿಡ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ. ಇನ್ನು ಈ ವಿದ್ಯಾರ್ಥಿಯ ಜೊತೆಯಲ್ಲಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು, ವರದಿಗಾಗಿ ಜಿಲ್ಲಾಡಳಿತ ಕಾಯುತ್ತಿದೆ. ಸೋಂಕಿತ ವಿದ್ಯಾರ್ಥಿಯ ಜೊತೆಯಲ್ಲಿ ಪರೀಕ್ಷೆ ಬರೆದ ಎಲ್ಲಾ ವಿದ್ಯಾರ್ಥಿಗಳನ್ನು ಹೋಮ್ ಕ್ವಾರಂಟೈನ್ ಮಾಡಲಾಗಿದ್ದು, ಈ ವಿದ್ಯಾರ್ಥಿಗಳ ಮೇಲೆ ಆರೋಗ್ಯ ಇಲಾಖೆ ನಿಗಾ ಇರಿಸಿದೆ.