ಜಿಂದಾಲ್ ನಲ್ಲಿ ಹೆಚ್ಚಿದ ಕೊರೊನಾ ವೈರಸ್ ಪ್ರಕರಣ; ಕುಡತಿನಿ ಗ್ರಾಮಸ್ಥರ ಖಡಕ್ ನಿರ್ಧಾರ
ಬಳ್ಳಾರಿ, ಜೂನ್ 14: ಬಳ್ಳಾರಿಯ ಜಿಂದಾಲ್ ಕಾರ್ಖಾನೆಯಲ್ಲಿ ಕೊರೊನಾ ವೈರಸ್ ಪ್ರಕರಣಗಳ ಸಂಖ್ಯೆ ಏರುತ್ತಿದೆ. ಜಿಲ್ಲೆಯಲ್ಲಿ ದಾಖಲಾಗಿರುವ ಕೊರೊನಾ ವೈರಸ್ ಪ್ರಕರಣಗಳಲ್ಲಿ ಜಿಂದಾಲ್ ನ ಪಾಲೇ ಮುಕ್ಕಾಲು ಭಾಗವಾಗಿದೆ.
Recommended Video
ಈ ಹಿನ್ನೆಲೆಯಲ್ಲಿ ಆತಂಕಗೊಂಡಿರುವ ಬಳ್ಳಾರಿಯ ಕುಡತಿನಿ ಗ್ರಾಮಸ್ಥರು ಸರ್ಕಾರ ಮಾಡಲಿ, ಬಿಡಲಿ ನಾವೇ ನಮ್ಮೂರನ್ನು ಲಾಕ್ ಡೌನ್ ಮಾಡ್ತೀವಿ ಎಂದು ಇಡೀ ಊರನ್ನು ಪುನಃ ಲಾಕ್ ಡೌನ್ ಮಾಡಲು ಮುಂದಾಗಿದ್ದಾರೆ. ಹೆಚ್ಚುತ್ತಿರುವ ಪ್ರಕರಣಗಳಿಂದಾಗಿ ಗ್ರಾಮವನ್ನು ಲಾಕ್ ಡೌನ್ ಮಾಡಲು ಸ್ವತಃ ಗ್ರಾಮಸ್ಥರೇ ನಿರ್ಧರಿಸಿದ್ದಾರೆ.
10,751 ಕಾರ್ಮಿಕರನ್ನು ಕ್ವಾರಂಟೈನ್ ಮಾಡಲು ಮುಂದಾದ ಬಳ್ಳಾರಿಯ ಜಿಂದಾಲ್
ಮೊನ್ನೆಯಷ್ಟೇ ಜಿಂದಾಲ್ ಕಾರ್ಮಿಕರು ಈ ಗ್ರಾಮ ಪ್ರವೇಶಿಸುವುದನ್ನು ನಿರ್ಬಂಧಿಸಲಾಗಿತ್ತು. ಇದೀಗ ತಮ್ಮೂರನ್ನು ತಾವೇ ಲಾಕ್ ಡೌನ್ ಮಾಡಲು ಮುಂದಾಗಿದ್ದಾರೆ. ನಮ್ಮೂರನ್ನು ನಾವೇ ಕಾಪಾಡಿಕೊಳ್ಳಬೇಕು, ಯಾರಿಗೆ ಯಾರೂ ಆಗಲ್ಲ. ಇನ್ನೊಂದು ವಾರ ಯಾರೂ ಎಲ್ಲಿಗೂ ಹೋಗಬೇಡಿ, ಯಾರನ್ನೂ ಊರೊಳಕ್ಕೆ ಬಿಟ್ಟುಕೊಳ್ಳಬೇಡಿ. ಬಸ್ಸು, ಕಾರು, ಲಾರಿ, ಬೈಕು ಏನೇ ಬಂದರೂ ನಮ್ಮೂರಲ್ಲಿ ನಿಲ್ಲಿಸುವುದಕ್ಕೆ ಅವಕಾಶವಿಲ್ಲ. ಅಗತ್ಯ ಬಿದ್ದರೆ ರಸ್ತೆ ಬಂದ್ ಸಹ ಮಾಡೋಣ ಎಂದು ಊರವರೇ ಸೇರಿಕೊಂಡು ಫರ್ಮಾನು ಹೊರಡಿಸಿದ್ದಾರೆ.
ವಾರದವರೆಗೆ ಕುಡತಿನಿ ಲಾಕ್ ಡೌನ್
ಜೊತೆಗೆ ಬೆಳಿಗ್ಗೆ ಹನ್ನೊಂದು ಗಂಟೆವರೆಗೆ ಮಾತ್ರ ದಿನಸಿ ತರಕಾರಿ ಕೊಳ್ಳಲು ಅವಕಾಶ ಮಾಡಿಕೊಂಡಿದ್ದಾರೆ. ಮಿಕ್ಕಂತೆ ಇಡೀ ದಿನ ಸಂಪೂರ್ಣ ಊರು ಲಾಕ್ ಡೌನ್ ಆಗಿರುತ್ತದೆ. ಸದ್ಯ ಒಂದು ವಾರದವರೆಗೆ ಲಾಕ್ ಡೌನ್ ಮುಂದುವರಿಸಲು ತೀರ್ಮಾನಿಸಿದ್ದಾರೆ. ನಾಳೆಯಿಂದಲೇ ಈ ಲಾಕ್ ಡೌನ್ ಜಾರಿಯಾಗಲಿರುವುದಾಗಿಯೂ ತಿಳಿಸಿದ್ದಾರೆ.
ಗ್ರಾಮಸ್ಥರ ಖಡಕ್ ನಿರ್ಧಾರ
ಜಿಂದಾಲ್ ಕಾರ್ಖಾನೆಯಲ್ಲಿ ದಿನದಿಂದ ದಿನಕ್ಕೆ ಹೆಚ್ಚೆಚ್ಚು ಕೊರೊನಾ ವೈರಸ್ ಪಾಸಿಟಿವ್ ಪ್ರಕರಣಗಳು ಕಾಣಿಸಿಕೊಳ್ಳುತ್ತಿರುವುದರಿಂದ, ನಮ್ಮೂರಿಂದ ಯಾರೂ ಜಿಂದಾಲ್ ಗೆ ಹೋಗೋ ಹಾಗಿಲ್ಲ. ಹೋದರೆ ಪುನಃ ಬರುವ ಹಾಗಿಲ್ಲ ಎಂದು ಜನರು ತೀರ್ಮಾನಿಸಿಕೊಂಡಿದ್ದಾರೆ. ಊರು ನಮ್ಮದು, ಕಾಪಾಡಿಕೊಳ್ಳುವ ಜವಾಬ್ದಾರಿ ನಮ್ಮದು. ಇದನ್ನು ಕಟ್ಟುನಿಟ್ಟಾಗಿ ಪಾಲಿಸದಿದ್ದರೆ ಅಂಥವರಿಗೆ ಶಾಶ್ವತವಾಗಿ ಊರಿಂದಲೇ ಬಹಿಷ್ಕಾರ ಹಾಕಲಾಗುತ್ತದೆ ಎಂದು ಗ್ರಾಮಸ್ಥರು ಖಡಕ್ ನಿರ್ಧಾರ ಕೈಗೊಂಡಿದ್ದಾರೆ.
86ಕ್ಕೇರಿದ ಬಳ್ಳಾರಿಯ ಜಿಂದಾಲ್ ಕಾರ್ಖಾನೆ ಸೋಂಕಿತರ ಸಂಖ್ಯೆ
ಕುಡತಿನಿ ಗ್ರಾಮದ ಹೊರಗಿನ ರಸ್ತೆ ಕಾಮಗಾರಿ ಕೈಗೊಂಡ ಜಿಂದಾಲ್
ಕುಡತಿನಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಜಿಂದಾಲ್ ಗೆ ಹೋಗುವ ಕಾರ್ಮಿಕರು ಪರದಾಟ ಅನುಭವಿಸಬೇಕಾಯಿತು. ಕುಡತಿನಿಯು ಬಳ್ಳಾರಿಯಿಂದ ಜಿಂದಾಲ್ ಗೆ ಹೋಗುವ ಮಾರ್ಗ ಮಧ್ಯೆಯಿದ್ದು ಕಾರ್ಮಿಕರು ಪರದಾಡಬೇಕಾಗಿದೆ. ಹೀಗಾಗಿ ಜಿಂದಾಲ್ ಆಡಳಿತ ಮಂಡಳಿ ಗ್ರಾಮದ ಹೊರಗಿರುವ ರಸ್ತೆಯನ್ನು ಅಭಿವೃದ್ಧಿಪಡಿಸಲು ಮುಂದಾಗಿದೆ. ಈ ರಸ್ತೆ ಕಾಮಗಾರಿ ಈ ಹಿಂದೆ ಸ್ಥಗಿತಗೊಂಡಿತ್ತು. ಕುಡಿತಿನಿ ಲಾಕ್ ಡೌನ್ ಕಾರಣದಿಂದಾಗಿ ಮತ್ತೆ ರಸ್ತೆ ಕಾಮಗಾರಿಯನ್ನು ಕೈಗೊಳ್ಳಲಾಗಿದೆ.
181 ಸೋಂಕಿತರಲ್ಲಿ 103 ಪ್ರಕರಣಗಳು ಜಿಂದಾಲ್ ನದ್ದು
ದಿನದಿಂದ ದಿನಕ್ಕೆ ಜಿಂದಾಲ್ ನಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು, ಜಿಂದಾಲ್ ಈಗ ಕೊರೊನಾ ಕಾರ್ಖಾನೆಯಾಗಿ ಮಾರ್ಪಾಡಾಗಿದೆ. ಶನಿವಾರ ಬಳ್ಳಾರಿಯಲ್ಲಿ ದಾಖಲಾದ 11 ಪ್ರಕರಣಗಳಲ್ಲಿ 8 ಪ್ರಕರಣ ಜಿಂದಾಲ್ ನೌಕರರದ್ದೇ ಆಗಿದೆ. ಜಿಲ್ಲೆಯಲ್ಲಿ ದಾಖಲಾದ ಒಟ್ಟು 181 ಸೋಂಕಿತರಲ್ಲಿ ಅತಿ ಹೆಚ್ಚಿನ ಪಾಲು, ಅಂದರೆ 103 ಪ್ರಕರಣಗಳು ಜಿಂದಾಲ್ ಗೇ ಸೇರಿವೆ.