ಗೆಲುವನ್ನು ಹಂಚಿಕೊಳ್ಳುವ ಸಮಯದಲ್ಲೇ ಆರೋಪವೂ ಮಾಡಿದ ಭೀಮಾನಾಯ್ಕ
ಬಳ್ಳಾರಿ, ಮೇ. 15 : ನನ್ನ ಶತೃಗಳು ನನ್ನನ್ನು ಸೋಲಿಸಲು ಮಾಡಿದ ಯಾವುದೇ ಪ್ರಯತ್ನ ಕೈಗೂಡಲಿಲ್ಲ. ಗುರು ಕೊಟ್ಟೂರೇಶ್ವರನ ಆಶೀರ್ವಾದ ನನ್ನ ಕೈ ಹಿಡಿದಿದೆ ಎಂದು ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಲ್ಬಿಪಿ ಭೀಮಾನಾಯ್ಕ ತಿಳಿಸಿದರು.
ಮತ ಎಣಿಕೆಯ ಕೇಂದ್ರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನನ್ನ ವಿರೋಧಿಗಳು ಯುವಶಕ್ತಿಯನ್ನು ದುರ್ಬಳಕೆ ಮಾಡಿ, ಕುಡಿಸಿ, ನನ್ನ ವಿರುದ್ಧ ಎತ್ತಿಕಟ್ಟಿ, ನನ್ನನ್ನೇ ಕೇಂದ್ರೀಕರಿಸಿ ಪ್ರಚಾರ ಮಾಡಿದರು.
ಕರ್ನಾಟಕ ವಿಧಾನಸಭೆ ಚುನಾವಣಾ ಫಲಿತಾಂಶ 2018: ಗೆದ್ದವರ ಸಂಪೂರ್ಣ ಪಟ್ಟಿ
ಎಂ.ಸಿರಾಜ್ ಶೇಖ್ ಬಳ್ಳಾರಿ ಜಿಲ್ಲಾ ಗ್ರಾಮೀಣ ಪ್ರಚಾರ ಸಮಿತಿ ಅಧ್ಯಕ್ಷರಾಗಿಯೂ ಅವರ ಮಗನನ್ನು ನನ್ನ ವಿರೋಧಿ ಅಭ್ಯರ್ಥಿ ಜೊತೆಯಲ್ಲಿ ಪ್ರಚಾರಕ್ಕೆ ಕಳುಹಿಸಿದರು. ಅವರು ಪಕ್ಷದ ಅಭ್ಯರ್ಥಿಗಳ ಪರವಾಗಿ ಎಲ್ಲಿಯೂ, ಯಾರೊಂದಿಗೂ ಪ್ರಚಾರ ನಿರ್ವಹಿಸಲಿಲ್ಲ. ಉದ್ದೇಶಪೂರ್ವಕವಾಗಿಯೇ ನನ್ನ ವಿರುದ್ಧ ಪಿತೂರಿ ಮಾಡಿದರು ಎಂದು ಆರೋಪಿಸಿದರು.
ಮಾಜಿ ಶಾಸಕ ಸಿರಾಜ್ ಶೇಖ್ ಅವರನ್ನು ಕಾಂಗ್ರೆಸ್ ಹೈಕಮಾಂಡ್ ಪಕ್ಷದಿಂದ ಆರು ವರ್ಷವಲ್ಲ, ಹನ್ನೆರೆಡು ವರ್ಷಗಳ ಕಾಲ ಉಚ್ಛಾಟನೆ ಮಾಡಬೇಕು. ಕೆಪಿಸಿಸಿ ಅಧ್ಯಕ್ಷರು, ಏಐಸಿಸಿ ಅಧ್ಯಕ್ಷರು ಮತ್ತು ಪಕ್ಷ ವರಿಷ್ಠರಿಗೆ ಈ ಬಗ್ಗೆ ಶೀಘ್ರದಲ್ಲೇ ದೂರು ನೀಡುವೆ ಎಂದರು.