ಭೀಮಾನಾಯ್ಕರನ್ನು ತೀವ್ರ ತರಾಟೆಗೆ ತೆಗೆದುಕೊಂಡ ಕಡಲಬಾಳು ಗ್ರಾಮಸ್ಥರು
ಬಳ್ಳಾರಿ, ಮೇ. 05 : ಜಿಲ್ಲೆಯ ಹಗರಿಬೊಮ್ಮನಹಳ್ಳಿ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ, ಮಾಜಿ ಶಾಸಕ ಎಲ್.ಬಿ.ಪಿ. ಭೀಮಾನಾಯ್ಕ ಕ್ಷೇತ್ರಾದ್ಯಂತ ಎದುರಿಸುತ್ತಿರುವ ಬಹಿಷ್ಕಾರ ದಿನೇ ದಿನೇ ಹೆಚ್ಚುತ್ತಲೇ ಇದೆ.
ಅಂಕಸಮುದ್ರ ಮತ್ತು ಕಡಲಬಾಳು ಗ್ರಾಮದಲ್ಲಿ ಯುವಕರು ಶುಕ್ರವಾರ ಊರ ಪ್ರವೇಶಕ್ಕೆ ಅವಕಾಶ ನೀಡದೇ, ಊರ ಹೊರಗಡೆಯಿಂದಲೇ ವಾಪಸ್ಸು ಕಳುಹಿಸಿದ್ದಾರೆ. ಅಂಕಸಮುದ್ರದಲ್ಲಿ ಗ್ರಾಮಸ್ಥರು ಭೀಮಾನಾಯ್ಕ ಅವರನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಂಡಲ್ಲಿ, ಕಡಲಬಾಳು ಗ್ರಾಮಸ್ಥರು ಗ್ರಾಮ ಪ್ರವೇಶಕ್ಕೇ ಅವಕಾಶ ನೀಡಲಿಲ್ಲ.
ಭೀಮಾನಾಯ್ಕ ಶಾಸಕ ಸ್ಥಾನಕ್ಕೆ ರಾಜೀನಾಮೆ, ಸಂಭ್ರಮವೋ ಸಂಭ್ರಮ
2013ರ ಚುನಾವಣೆಯಲ್ಲಿ ಜೆಡಿಎಸ್ ನಿಂದ ಪ್ರಚಾರಕ್ಕೆ ಬಂದಾಗ ಊರಮ್ಮ ದೇವಸ್ಥಾನಕ್ಕೆ ಮೂರು ಲಕ್ಷ ರೂ.ಗಳನ್ನು ಕೊಡುವುದಾಗಿ ಹೇಳಿ ಇದುವರೆಗೂ ಕೊಟ್ಟಿರುವುದಿಲ್ಲ. ಗ್ರಾಮದಲ್ಲಿನ ಪಕ್ಷಿಧಾಮದ ಕೆರೆಗೆ 250 ಎಚ್ಪಿಯ ಎರಡು ಮೋಟಾರ್ ಗಳನ್ನು ಕೊಡಿಸುವುದಾಗಿ ಆಶ್ವಾಸನೆ ನೀಡಿ ಮೂರು ವರ್ಷಗಳೇ ಕಳೆದವು.
ನಮ್ಮ ಗ್ರಾಮದಲ್ಲಿ ಮತ ಕೇಳಲು ನಿಮಗೆ ನೈತಿಕತೆ ಇಲ್ಲ. ಸುಮ್ಮನೆ ಗ್ರಾಮದಿಂದ ಹೊರ ಹೋಗಿ ಎಂದು ದೈವಸ್ಥರು ಧನಿ ಎತ್ತಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಮತ್ತು ಶಾಸಕರ ಬೆಂಬಲಿಗರ ಮಧ್ಯೆ ಪರಸ್ಪರ ತಳ್ಳಾಟ ನಡೆಯಿತು. ಈ ಘಟನೆಯ ವೀಡಿಯೋಗಳು ವಾಟ್ಸಪ್, ಫೇಸ್ ಬುಕ್ ಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿವೆ.
ಅಷ್ಟೇ ಅಲ್ಲ, ರಾಜ್ಯಮಟ್ಟದ ಪತ್ರಿಕೆಯ ವರದಿಗಾರರು ಬಾಕಿ ಇರುವ ಜಾಹೀರಾತು ಮೊತ್ತ 45 ಸಾವಿರ ರೂ.ಗಳನ್ನು ಕೊಟ್ಟು ಮುಂದೆ ಹೋಗು. ಜಾಹೀರಾತು ಹಣ ಕೇಳಿದರೆ ಚುನಾವಣೆ ನಂತರ ನೋಡಿಕೊಳ್ಳುವೆ ಎಂದು ಜೀವ ಬೆದರಿಕೆಯ ಧಮಕಿ ಹಾಕುತ್ತೀಯಾ ಎಂದು ಏರಿದ ಧ್ವನಿಯಲ್ಲಿ ಭೀಮಾನಾಯ್ಕ್ ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ಗ್ರಾಮಸ್ಥರೆಲ್ಲರೂ ತಮ್ಮೂರ ಪತ್ರಕರ್ತನಿಗೆ ಸಂಪೂರ್ಣ ಬೆಂಬಲ ನೀಡಿದರು. ಪತ್ರಕರ್ತನನ್ನು ಭೀಮಾನಾಯ್ಕ ಬೆಂಬಲಿಗರು ಕೈಹಿಡಿದು ಎಳೆಯಲು ಹೋದಾಗ ಆಕ್ರೋಶಗೊಂಡ ಗ್ರಾಮಸ್ಥರು, ಭೀಮಾನಾಯ್ಕ್ ನಿಗೆ ಮುತ್ತಿಗೆ ಹಾಕಿದರಲ್ಲದೇ ತರಾಟೆಗೆ ತೆಗೆದುಕೊಂಡರು.
ಕೂಡಲೇ ಭೀಮಾನಾಯ್ಕ್ ನ ವಿರುದ್ಧ ಗ್ರಾಮದ ಜನತೆ ಘೋಷಣೆಗಳನ್ನು ಕೂಗಲು ಶುರುವಿಟ್ಟರು. ಕಡಲಬಾಳು ಗ್ರಾಮದ್ದು ಮತ್ತೊಂದು ಕಥೆ. ಕಡಲಬಾಳು ಗ್ರಾಮಕ್ಕೆ ತೆರಳುತ್ತಿದ್ದಂತೆ ಗ್ರಾಮಕ್ಕೆ ಗ್ರಾಮವೇ ಮೋದಿ, ಮೋದಿ, ಮೋದಿ ಎಂದು ಘೋಷಣೆ ಹಾಕುವ ಮೂಲಕ ಭೀಮಾನಾಯ್ಕ್ ಗೆ ಪ್ರಚಾರ ಮಾಡಲು ಬಿಟ್ಟಿಲ್ಲ.
ಭೀಮಾನಾಯ್ಕ್ ಗೆ ಧಿಕ್ಕಾರ, ಕಾಂಗ್ರೆಸ್ ಗೆ ಧಿಕ್ಕಾರ, ಸುಮ್ಮನೆ ಗ್ರಾಮ ಬಿಟ್ಟು ಹೊರ ಹೋಗು ಎಂದು ಗ್ರಾಮದ ಯುವಕರು ಘೋಷಣೆಗಳನ್ನು ಕೂಗಿದ್ದಾರೆ. ಒಂದೇ ಒಂದು ಕ್ಷಣ ಗ್ರಾಮದಲ್ಲಿ ಭೀಮಾನಾಯ್ಕ್ ಕಾರು ನಿಲ್ಲಲು ಬಿಡದೆ ಯುವಕರು ಕಡಲಬಾಳು ಗ್ರಾಮದಿಂದಲೂ ಹೊರಗಟ್ಟಿದ್ದಾರೆ.