ಹಂಪಿ ಉತ್ಸವದಲ್ಲಿ 4ಸಾವಿರ ಕೋಟಿ ರೂ. ಪರಿಹಾರಕ್ಕೆ ಮನವಿ
ಹಂಪಿ, ನವೆಂಬರ್,4: ವಿಜಯನಗರ ವೈಭವ ಬಿಂಬಿಸುವ ಪ್ರಖ್ಯಾತ ಹಂಪಿ ಉತ್ಸವಕ್ಕೆ ಇಲ್ಲಿಯ ಬಸವಣ್ಣ ವಿಗ್ರಹ ಸಮೀಪ ನಿರ್ಮಿಸಲಾಗಿದ್ದ, ಎಂ.ಪಿ. ಪ್ರಕಾಶ್ ವೇದಿಕೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಗುರುವಾರ ವಿಧ್ಯುಕ್ತ ಚಾಲನೆ ನೀಡಿದರು. ಕಾರ್ಯಕ್ರಮದಲ್ಲಿ 4 ಸಾವಿರ ಕೋಟಿ ರೂ. ಪರಿಹಾರ ಧನ ಒದಗಿಸುವಂತೆ ಅವರು ಕೇಂದ್ರಕ್ಕೆ ಮನವಿ ಮಾಡಿದರು.
ರಾಜ್ಯದಲ್ಲಿ ಸತತ ಎರಡನೇ ವರ್ಷವೂ ಬರಗಾಲ ಮುಂದುವರಿದಿದ್ದು,ಈ ವರ್ಷ 16 ಸಾವಿರ ಕೋಟಿ ರೂ. ಹೆಚ್ಚು ಹಾನಿಯಾಗಿದೆ. ಬರ ಪರಿಹಾರ 3,400 ಮತ್ತು ಎರಡು ಜಿಲ್ಲೆಗಳಲ್ಲಿ ತಲೆದೋರಿದ ಪ್ರವಾಹದ ಪರಿಹಾರ 600 ಕೋಟಿ ರೂ. ಪರಿಹಾರ ನೀಡುವಂತೆ ಕೋರಿ ಕೇಂದ್ರ ಸರಕಾರಕ್ಕೆ ಮನವಿ ಸಲ್ಲಿಸಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. [ಹಂಪಿ: ಜಾನಪದ ಸಿರಿಯನ್ನು ಅನಾವರಣಗೊಳಿಸಿದ ಶೋಭಾಯಾತ್ರೆ]
ಬೀದರ್ ಮತ್ತು ಕಲಬುರಗಿ ಜಿಲ್ಲೆ ಹಾಗೂ ರಾಯಚೂರಿನ ಕೆಲ ಪ್ರದೇಶಗಳಲ್ಲಿ ಮಾತ್ರ ವಿಪರೀತ ಮಳೆಯಿಂದ ಪ್ರವಾಹ ಪರಿಸ್ಥಿತಿ ತಲೆದೋರಿದ್ದನ್ನು ಬಿಟ್ಟರೇ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಬರಪರಿಸ್ಥಿತಿ ನಿರ್ಮಾಣವಾಗಿದೆ.
ಮುಂಗಾರು ಮತ್ತು ಹಿಂಗಾರು ಬೆಳೆ ಸಂಪೂರ್ಣ ವೈಫಲ್ಯ ಕಂಡಿದ್ದು, ಜಾನುವಾರುಗಳಿಗೊಸ್ಕರ ಈಗಲಾದ್ರೂ ಮಳೆಯಾಗಲಿ ಎಂದು ಹಂಪಿಯ ವಿರೂಪಾಕ್ಷನಲ್ಲಿ ಪ್ರಾರ್ಥಿಸುವುದಾಗಿ ಹೇಳಿದರು.
ಬಳ್ಳಾರಿಯ ಎಲ್ಲ ತಾಲ್ಲೂಕುಗಳು ಬರಪೀಡಿತ ಪಟ್ಟಿಗೆ
ಬಳ್ಳಾರಿಯ ಎಲ್ಲ ತಾಲೂಕುಗಳು ಸೇರಿದಂತೆ ರಾಜ್ಯದಲ್ಲಿ 110 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗಿದೆ. ಇನ್ನೂ 29 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಲಾಗುತ್ತದೆ.
ಬರಪೀಡಿತ ಪ್ರದೇಶಗಳೆಂದು ಘೋಷಿಸಲಾದ ಎಲ್ಲ ತಾಲೂಕುಗಳಲ್ಲಿ ಬರಪರಿಹಾರ ಕಾರ್ಯ ಚಟುವಟಿಕೆಗಳನ್ನು ಕ್ಷೀಪ್ರಗತಿಯಲ್ಲಿ ಕೈಗೆತ್ತಿಕೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ನಿರ್ದೇಶನ ನೀಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.
ಕಳೆದ ವರ್ಷದಂತೆ ಈ ವರ್ಷವೂ ಬರಪೀಡಿತ ಪ್ರದೇಶಗಳನ್ನು ವೀಕ್ಷಿಸಿ ಪರಿಹಾರ ಚಟುವಟಿಕೆಗಳನ್ನು ಚುರುಕುಗಳಿಸುವ ಉದ್ದೇಶದಿಂದ ಬಳ್ಳಾರಿಗೆ ಶೀಘ್ರ ಭೇಟಿ ನೀಡಲಾಗುವುದು ಎಂದರು.
ಅನಾವರಣಗೊಂಡ ಕಲಾವಿದರ ಪ್ರತಿಭೆ
ಕಲೆ,ಸಾಹಿತ್ಯ, ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಹಾಗೂ ಕಲಾವಿದರ ಪ್ರತಿಭೆ ಅನಾವರಣ ಮಾಡುವ ನಿಟ್ಟಿನಲ್ಲಿ ಈ ರೀತಿಯ ಉತ್ಸವಗಳು ಪೂರಕ ಎಂದು ಹೇಳಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಕಲೆ,ಸಾಹಿತ್ಯ ಮತ್ತು ಸಂಸ್ಕೃತಿ ಬಗೆಗಿನ ಎಂ.ಪಿ.ಪ್ರಕಾಶ ಅವರಿಗಿದ್ದ ಆಸಕ್ತಿ ಮತ್ತು ಒಲವನ್ನು ಹಾಗೂ ಹಂಪಿ ಉತ್ಸವದ ಆರಂಭವನ್ನು ಅವರು ಸ್ಮರಿಸಿದರು.
ಕಾರ್ಮಿಕ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಸಂತೋಷ ಎಸ್.ಲಾಡ್ ಅವರು ಮಾತನಾಡಿ ವಿಜಯನಗರದ ವೈಭವ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಆಶಿಸಿದರು.
ಸಾಲುಕಂಬಗಳಲ್ಲಿ ಬಾಣಬಿರುಸುಗಳ ಚಿತ್ತಾರ.....
ಹಂಪಿ ಉತ್ಸವ-2016ಕ್ಕೆ ವಿದ್ಯುಕ್ತ ಚಾಲನೆ ನೀಡುತ್ತಿದ್ದಂತೆ ಎದುರು ಬಸವಣ್ಣ ಹತ್ತಿರ ಇರುವ ಶಿಲಾಮಂಟಪಗಳ ಮೇಲೆ ಮೂಡಿದ ಆಕರ್ಷಕ ಬಾಣಬಿರುಸುಗಳ ಚಿತ್ತಾರ ನಯನಮನೋಹರವಾಗಿತ್ತು.
ಆಕರ್ಷಕ ಬಾಣಬಿರುಸುಗಳ ಚಿತ್ತಾರಕ್ಕೆ ನೆರೆದಿದ್ದ ಜನರು ಕೇಕೆಗಳನ್ನು ಹಾಕುವುದರ ಮೂಲಕ ಖುಷಿಪಟ್ಟರು. ವಿದ್ಯುತ್ ದೀಪಗಳಿಂದ ಅಲಂಕರಿಸಲಾಗಿದ್ದ ಪ್ರಧಾನ ವೇದಿಕೆ ಆಕರ್ಷಕವಾಗಿತ್ತು.
ಕಾರ್ಯಕ್ರಮದಲ್ಲಿ ಗಣ್ಯರ ದಂಡು
ಕಾರ್ಯಕ್ರಮದಲ್ಲಿ ಲೋಕೋಪಯೋಗಿ ಸಚಿವ ಮಹಾದೇವಪ್ಪ, ಸಹಕಾರ ಮತ್ತು ಸಕ್ಕರೆ ಸಚಿವ ಮಹಾದೇವ ಪ್ರಸಾದ್, ಪ್ರವಾಸೋದ್ಯಮ ಸಚಿವ ಪ್ರಿಯಾಂಕ್ ಖರ್ಗೆ, ಶಾಸಕರಾದ ಇ.ತುಕರಾಂ,ಎನ್.ವೈ.ಗೋಪಾಲಕೃಷ್ಣ, ಬಿ.ಎಂ.ನಾಗರಾಜ, ಅಲ್ಲಂ ವೀರಭದ್ರಪ್ಪ, ಭೀಮಾನಾಯ್ಕ, ಕೆ.ಸಿ.ಕೊಂಡಯ್ಯ, ಜಿಪಂ ಅಧ್ಯಕ್ಷೆ ಸಿ.ಭಾರತಿ ತಿಮ್ಮಾರೆಡ್ಡಿ, ಉಪಾಧ್ಯಕ್ಷೆ ದೀನಾ ಮಂಜುನಾಥ, ಬಳ್ಳಾರಿ ಮಹಾನಗರ ಪಾಲಿಕೆ ಮೇಯರ್ ಜಿ.ಜಯಲಲಿತಾ ಸೇರಿದಂತೆ ಮತ್ತಿತರರು ಇದ್ದರು. ಜಿಲ್ಲಾಧಿಕಾರಿ ಡಾ.ರಾಮ್ ಪ್ರಸಾತ್ ಮನೋಹರ್ ಸರ್ವರನ್ನು ಸ್ವಾಗತಿಸಿದರು.