ಮುಖ್ಯಮಂತ್ರಿಯಾದವರಿಗೆ ತಾಳ್ಮೆ ಇಲ್ಲದಿದ್ದರೆ ಹೇಗೆ? ಪೇಜಾವರ ಶ್ರೀಗಳ ಪ್ರಶ್ನೆ
ಬಳ್ಳಾರಿ,, ಜೂನ್ 5: ಮುಖ್ಯಮಂತ್ರಿಯಾದವರಿಗೆ ಸಂಯಮ, ತಾಳ್ಮೆ ಇರಬೇಕು, ಅವರಿಗೇ ಸಿಟ್ಟು ಬಂದರೆ ರಾಜ್ಯದ ಆಡಳಿತ ವ್ಯವಸ್ಥೆ ನಡೆಯುವುದು ಹೇಗೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶ್ವರತೀರ್ಥ ಶ್ರೀಗಳು ಪ್ರಶ್ನಿಸಿದ್ದಾರೆ.
ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಯವರನ್ನು ಉಲ್ಲೇಖಿಸಿ ಮಾತನಾಡುತ್ತಿದ್ದ ಶ್ರೀಗಳು, ನನಗೆ ಅವರ ಮೇಲಿದ್ದ ಉತ್ತಮ ಅಭಿಪ್ರಾಯ ಇತ್ತೀಚಿನ ದಿನಗಳಲ್ಲಿ ಕಮ್ಮಿಯಾಗುತ್ತಿದೆ ಎಂದು ಹೇಳಿದರು.
ರಾಷ್ಟ್ರಪಿತ ಯಾರು, ವೇದವ್ಯಾಸರೋ, ಗಾಂಧೀಜಿಯೋ? ಪೇಜಾವರ Vs ಬಂಜಗೆರೆ
ಮಮತಾ ಬ್ಯಾನರ್ಜಿಯ ಇತ್ತೀಚಿನ ನಡೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತ ಪಡಿಸಿದ ಪೇಜಾವರ ಶ್ರೀಗಳು, ಮುಖ್ಯಮಂತ್ರಿಯಾದವರಿಗೆ ತಾಳ್ಮೆ ಬಹುಮುಖ್ಯ, ಆದರೆ, ಅವರು ಸಂಯಮದಿಂದ ನಡೆಯದೇ ಇರುವುದು ಒಳ್ಲೆಯ ಲಕ್ಷಣವಲ್ಲ ಎಂದು ಶ್ರೀಗಳು ಬೇಸರ ವ್ಯಕ್ತ ಪಡಿಸಿದರು.
ಶ್ರೀರಾಮನ ಹೆಸರನ್ನು ಅನಗತ್ಯವಾಗಿ ಮಮತಾ ಬ್ಯಾನರ್ಜಿ ಎಳೆದು ತರುತ್ತಿದ್ದಾರೆ, ಇದು ಹಿಂದೂಗಳ ಭಾವನೆಯನ್ನು ಕೆಣಕುವ ವಿಚಾರ ಎಂದು ಪೇಜಾವರ ಶ್ರೀಗಳು ಪಶ್ಚಿಮ ಬಂಗಾಳದ ಮುಖ್ಯಮಂತ್ರಿಗಳ ಧೋರಣೆಯನ್ನು ಆಕ್ಷೇಪಿಸಿದ್ದಾರೆ.
ಬಾಂಗ್ಲಾ ದೇಶದ ಕಡೆಯಿಂದ ಬರುವವರನ್ನು ಸೂಕ್ತ ವಿಚಾರಣೆ ನಡೆಸಿ ನಾಗರೀಕ ಹಕ್ಕನ್ನು ನೀಡಬೇಕು, ಇಲ್ಲದಿದ್ದರೆ ಇದು ನಮ್ಮ ದೇಶದ ಕಾನೂನು, ಸುವ್ಯವಸ್ಥೆಗೆ ಮಾರಕವಾಗಬಹುದು ಎಂದು ಪೇಜಾವರ ಶ್ರೀಗಳು ಹೇಳಿದರು.
ಬಿಜೆಪಿ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿರುವುದರಿಂದ ರಾಮ ಮಂದಿರ ನಿರ್ಮಾಣವಾಗಲಿದೆ ಎನ್ನುವ ಖಚಿತ ವಿಶ್ವಾಸ ನನ್ನನ್ನೂ ಸೇರಿ ಎಲ್ಲಾ ಸಂತರಿಗಿದೆ ಎಂದು ಶ್ರೀಗಳು ಹೇಳಿದರು.