ಬಳ್ಳಾರಿ ಸಿಇಒ ನಂದಿನಿ ಮಾದರಿ ಕೆಲಸ; ವಾಪಸ್ ಆಗಬೇಕಿದ್ದ ಅನುದಾನ ಬಳಕೆ
ಬೆಳಗಾವಿ, ಜನವರಿ 27; ಕೇಂದ್ರ ಸರ್ಕಾರಕ್ಕೆ ವಾಪಸ್ ಜಮೆ ಮಾಡಬೇಕಿದ್ದ ಅನುದಾನವನ್ನು ಕ್ರೋಢೀಕರಿಸಿ ಬಳ್ಳಾರಿ ಜಿಲ್ಲೆಯಲ್ಲಿ ಶೈಕ್ಷಣಿಕ ಕ್ಷೇತ್ರದ ಅಭಿವೃದ್ಧಿ ಮಾಡಲಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ಕೆ. ಆರ್. ನಂದಿನಿ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
14ನೇ ಹಣಕಾಸು ಯೋಜನೆಗೆ ಸಂಬಂಧಿಸಿದ ಅನುದಾನ ಇದೇ ಮಾರ್ಚ್ ಅಂತ್ಯಕ್ಕೆ ಮುಕ್ತಾಯವಾಗಬೇಕಿತ್ತು. ಬಾಕಿ ಇರುವ ಅನುದಾನ, ಬಡ್ಡಿ, ಉಳಿತಾಯ ಮತ್ತು ಕಾಮಗಾರಿ ಮಾಡದೇ ಬಾಕಿ ಉಳಿದಿರುವ ಅನುದಾನವನ್ನು ಕೇಂದ್ರ ಸರಕಾರಕ್ಕೆ ವಾಪಸ್ ಜಮಾ ಮಾಡಬೇಕಿತ್ತು.
ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ್ ಮಲಪಾಟಿ ಪರಿಚಯ
ಸಿಇಒ ಕೆ. ಆರ್. ನಂದಿನಿ ವಿಶೇಷ ಮುತುವರ್ಜಿ ಮತ್ತು ಒತ್ತಾಸೆಯಿಂದಾಗಿ ಹಣಕಾಸು ಯೋಜನೆಯ ಅಡಿ ಜಿಲ್ಲೆಗೆ ಹಂಚಿಕೆಯಾಗಿದ್ದ ಅನುದಾನದಲ್ಲಿ ಬಾಕಿ ಅನುದಾನ, ಬಡ್ಡಿ, ಕಾಮಗಾರಿ ಮಾಡದೇ ಬಾಕಿ ಉಳಿದಿರುವ ಅನುದಾನವನ್ನು ವಾಪಸ್ ಕೇಂದ್ರ ಸರಕಾರಕ್ಕೆ ಅನಗತ್ಯವಾಗಿ ಜಮಾ ಮಾಡುವುದನ್ನು ಉಳಿಸಿದ್ದಾರೆ.
ಬಳ್ಳಾರಿ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿದೆ; ಆನಂದ್ ಸಿಂಗ್
ಅದೇ ಅನುದಾನವನ್ನು ಉಪಯೋಗಿಸಿಕೊಂಡು ಮಾದರಿ ಶಾಲೆ, ಮಾದರಿ ಅಂಗನವಾಡಿ, ಮಾದರಿ ಗ್ರಂಥಾಲಯ, ಮಾದರಿ ಘನ ತ್ಯಾಜ್ಯ ವಿಲೇವಾರಿ ಘಟಕ, ತಾಲೂಕು ಪಂಚಾಯಿತಿಯಲ್ಲಿ ಮಹಿಳೆಯರಿಗೆ ಸಖಿ ಕೊಠಡಿ ನಿರ್ಮಿಸಲು ತೀರ್ಮಾನಿಸಲಾಗಿದೆ.
ಮನೆ ಬಾಗಿಲಿಗೆ ಶಾಲೆ: ಕರೋನಾ ಬಂದ್ರೆ ಹೇಗೆ ?
ಮಾದರಿಯಾದ ಸಿಇಒ ಕಾರ್ಯ
ಈಗಾಗಲೇ ಬಳ್ಳಾರಿ ಜಿಲ್ಲೆಯ ಬಹುತೇಕ ಕಡೆ ಈ ಅನುದಾನ ಬಳಸಿಕೊಂಡು ಕಳೆದ ಒಂದು ತಿಂಗಳಲ್ಲಿ ಮಾದರಿ ಶಾಲೆ, ಮಾದರಿ ಅಂಗನವಾಡಿ, ಮಾದರಿ ಗ್ರಂಥಾಲಯ, ಮಾದರಿ ಘನ ತ್ಯಾಜ್ಯ ವಿಲೇವಾರಿ ಘಟಕ, ತಾಲೂಕು ಪಂಚಾಯಿತಿಯಲ್ಲಿ ಮಹಿಳೆಯರಿಗೆ ಸಖಿ ಕೊಠಡಿ ನಿರ್ಮಿಸಲಾಗಿದೆ. ಗಣರಾಜ್ಯೋತ್ಸವ ದಿನ ವಿವಿಧ ಕಡೆ ಇವುಗಳನ್ನು ಲೋಕಾರ್ಪಣೆ ಮಾಡಲಾಗಿದೆ.
ಮಾದರಿ ಅಂಗನವಾಡಿ ಕೇಂದ್ರ
ಬಳ್ಳಾರಿ ತಾಲೂಕಿನ ಸಂಗನಕಲ್ಲು ಗ್ರಾಮದ ದಲಿತಕೇರಿಯಲ್ಲಿ ಮಾದರಿ ಅಂಗನವಾಡಿ ಕೇಂದ್ರವನ್ನು ಬಳ್ಳಾರಿ ಗ್ರಾಮೀಣ ಶಾಸಕ ಬಿ. ನಾಗೇಂದ್ರ ಉದ್ಘಾಟಿಸಿದರು. ಜಿಲ್ಲಾಧಿಕಾರಿ ಪವನ ಕುಮಾರ್ ಮಾಲಪಾಟಿ, ಸಿಇಒ ಕೆ. ಆರ್. ನಂದಿನಿ, ಎಸ್ಪಿ ಸೈದುಲು ಅಡಾವತ್, ಅಪರ ಪೊಲೀಸ್ ವರಿಷ್ಠಾಧಿಕಾರಿ ಬಿ. ಎನ್. ಲಾವಣ್ಯ ಮುಂತಾದವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಗ್ರಂಥಾಲಯ ನಿರ್ಮಾಣ
ಕೆ. ಆರ್. ನಂದಿನಿ ಕೋರ್ಲಗುಂದಿಯಲ್ಲಿ ನಿರ್ಮಿಸಲಾಗಿರುವ ಗ್ರಾಮೀಣ ಗ್ರಂಥಾಲಯವನ್ನು ಲೋಕಾರ್ಪಣೆ ಮಾಡಿದರು. ಬರುವ ಮಾರ್ಚ್ 30ರೊಳಗೆ ಜಿಲ್ಲೆಯ ಎಲ್ಲಾ 11 ತಾಲೂಕುಗಳಲ್ಲಿ ಈ ಕಾಮಗಾರಿಗಳನ್ನು ಅನುಷ್ಠಾನಗೊಳಿಸಿ, ಗ್ರಾಮೀಣ ಕ್ಷೇತ್ರದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಹೊಸ ಕ್ರಾಂತಿಕಾರಿ ಹೆಜ್ಜೆಗಳನ್ನು ಮೂಡಿಸಲು ಕೆ. ಆರ್. ನಂದಿನಿ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಕಾಮಗಾರಿಗಳ ಅನುಷ್ಠಾನ
ಏಪ್ರಿಲ್ 1ರಿಂದ 15 ನೇ ಹಣಕಾಸು ಯೋಜನೆಯಡಿಯಲ್ಲಿ ಗ್ರಾಮ ಪಂಚಾಯಿತಿಗಳಿಗೆ ಅನುದಾನ ಬಿಡುಗಡೆಯಾಗಲಿದೆ. ಸಿಇಒ ಕೆ. ಆರ್. ನಂದಿನಿ ಅವರು ಕಳೆದ ಡಿಸೆಂಬರ್ ತಿಂಗಳಿನಿಂದ ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿಗಳು ಮತ್ತು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಸಭೆಯನ್ನು ಅನೇಕ ಬಾರಿ ನಡೆಸಿ, ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದಿದ್ದಾರೆ.