ಬಿಜೆಪಿ ಕಾರ್ಯಕಾರಿಣಿ ಸಭೆಗೆ ಬೈಕ್ನಲ್ಲಿ ಬಂದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
ಹೊಸಪೇಟೆ, ಏ.16: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಗೆ ಬೈಕ್ನಲ್ಲಿ ತೆರಳಿದ್ದಾರೆ.
ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆಯುತ್ತಿರುವ ಬಿಜೆಪಿ ರಾಜ್ಯ ಕಾರ್ಯ ಕಾರಿಣಿಯಲ್ಲಿ ಭಾಗವಹಿಸಲು ತಮ್ಮ ಕಾರಿನಲ್ಲಿ ತೆರಳುತ್ತಿದ್ದರು. ಆದರೆ, ಹೊಸಪೇಟೆ ಗ್ರಾಮೀಣ ಭಾಗದ ಹೊರವಲಯದಲ್ಲಿ ಎರಡು ಕಾರುಗಳ ಮಧ್ಯೆ ಅಪಘಾತ ಸಂಭವಿಸಿತ್ತು. ಗಾಯಗೊಂಡಿದ್ದ ಸವಾರರ ಆರೋಗ್ಯ ವಿಚಾರಿಸಿದ ಕೇಂದ್ರ ಸಚಿವೆ, ತಮ್ಮ ವಾಹನದ ಮೂಲಕ ಅವರನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆಯನ್ನು ಮಾಡಿದರು.
ರಾಜ್ಯ ಕಾರ್ಯಕಾರಣಿ ಸಭೆಯಲ್ಲಿ ಪಾಲ್ಗೊಳ್ಳುವ ನಿಟ್ಟಿನಲ್ಲಿ ಬೆಂಗಳೂರಿನಿಂದ ರಸ್ತೆಯ ಮುಖಾಂತರ ತೆರಳುತ್ತಿದ್ದ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆಯವರು, ಅಪಘಾತಕ್ಕೀಡಾಗಿ ಗಾಯಗೊಂಡ ಸವಾರರನ್ನು ಆಸ್ಪತ್ರೆಗೆ ಸೇರಿಸಲು ತಮ್ಮ ವಾಹನವನ್ನು ನೀಡಿ ಮಾನವೀಯತೆ ಮರೆದಿದ್ದಾರೆ.
ಅಪಘಾತ ಸ್ಥಳದಿಂದ ಹೊಸಪೇಟೆ ಸುಮಾರು 5 ಕಿ.ಮೀ. ದೂರದಲ್ಲಿತ್ತು. ಕೂಡಲೇ ಸ್ಥಳದಲ್ಲಿದ್ದ ಬೈಕ್ ಸವಾರನೊಬ್ಬನ ಜೊತೆಗೆ ಹಿಂಬದಿಯಲ್ಲಿ ಕುಳಿತು ಬಿಜೆಪಿ ಕಾರ್ಯಕಾರಿಣಿ ಸಭೆ ತಲುಪಿಸಿದ್ದಾರೆ.
ಅಪಘಾತಕ್ಕೀಡಾದವರಿಗೆ ಸಹಾಯಹಸ್ತವನ್ನು ಚಾಚಿ, ಜನಸಾಮಾನ್ಯರಂತೆ ಬೈಕಿನಲ್ಲಿ ಸಮಾರಂಭದ ಸ್ಥಳಕ್ಕೆ ತೆರಳಿದ ಕೇಂದ್ರ ಸಚಿವರ ಈ ನಡೆಗೆ ಸ್ಥಳೀಯರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.