ಕೊರೊನಾವನ್ನು ಸೋಲಿಸಿದ ಬಳ್ಳಾರಿಯ ಶತಾಯುಷಿ ದಂಪತಿ
ಬಳ್ಳಾರಿ, ಮೇ 31: ಕೋವಿಡ್ ಸೋಂಕು ಬಂದರೆ ಯುವಜನರು ಜೀವನವೇ ಮುಗಿಯಿತು ಎಂಬಂತೆ ಆತಂಕಕ್ಕೆ ಒಳಗಾಗುವ ಈ ಸಂದರ್ಭದಲ್ಲಿ ಕೊರೊನಾ ವಿರುದ್ದ ಹೋರಾಡಿ ಗೆದ್ದು ಬಂದ ಬಳ್ಳಾರಿಯ ಶತಾಯುಷಿ ದಂಪತಿ ಯುವ ಜನರಿಗೆ ಪ್ರೇರಣೆಯಾಗಿದ್ದಾರೆ. ಏನೇ ಆದರೂ ದೈರ್ಯದಿಂದ ಎದುರಿಸಿದರೆ ಗೆಲುವು ನಮದು ಎಂಬ ಆತ್ಮವಿಶ್ವಾಸವನ್ನು ಹೊಂದಿರುವ ಈ ಶತಾಯುಷಿ ದಂಪತಿ ಮನೆಯಲ್ಲಿಯೇ ಇದ್ದು ವೈದ್ಯರು ಸೂಚಿಸಿದ ಔಷಧ ಸೇವಿಸಿ ಗುಣಮುಖರಾಗಿದ್ದಾರೆ.
ಸಂಡೂರು ತಾಲೂಕಿನ ತುಂಬರಗುದ್ದಿ ಗ್ರಾಮದ ಶತಾಯುಷಿ ವೀರಣ್ಣ (103) ಹಾಗೂ ಈರಮ್ಮ (101) ಈ ಕೊರೊನಾವನ್ನು ಸೋಲಿಸಿದ ದಂಪತಿಗಳು.
'ಇದು ನಾವು ಭಯಪಡುವ ರೋಗವೇ ಅಲ್ಲ' - 2ನೇ ಬಾರಿ ಕೋವಿಡ್ ಗೆದ್ದ ರಾಯಚೂರಿನ 90 ರ ವೃದ್ಧೆ
ದಂಪತಿಗೆ ಮೇ 17ರಂದು ಕೆಮ್ಮು, ಜ್ವರ ಮೊದಲಾದ ಕೋವಿಡ್ ಲಕ್ಷಣಗಳು ಕಾಣಿಸಿಕೊಂಡ ಹಿನ್ನೆಲೆ ಕೋವಿಡ್ ಪರೀಕ್ಷೆಗೆ ಒಳಗಾದಾಗ ಕೋವಿಡ್ ಸೋಂಕು ಇರುವುದು ದೃಢಪಟ್ಟಿದೆ. ಆ ಬಳಿಕ ಕುಟುಂಬ ಸದಸ್ಯರು ಈ ದಂಪತಿಗೆ ಮನೆಯಲ್ಲಿಯೇ ಚಿಕಿತ್ಸೆ ನೀಡಲು ನಿರ್ಧರಿಸಿದ್ದು, ಸಮಯಕ್ಕೆ ಸರಿಯಾಗಿ ಊಟ, ಔಷಧಿ ನೀಡಿ ಹಿರಿಯ ದಂಪತಿಯ ಆರೈಕೆ ಮಾಡಿದ್ದಾರೆ.
ಸುಮಾರು 12 ದಿನಗಳ ಕಾಲ ಹೋಂ ಐಸೋಲೇಷನ್ನಲ್ಲಿದ್ದ ಈ ವೃದ್ಧ ದಂಪತಿ ವೈದ್ಯರು ಸೂಚಿಸಿದ್ದಂತೆ ಕುಟುಂಬಸ್ಥರು ನೀಡಿದ ಔಷಧ, ಆಹಾರವನ್ನು ಸೇವಿಸಿ ಈಗ ಕೋವಿಡ್ ಗೆದ್ದು ಬಂದಿದ್ದಾರೆ.
ಈ ಶತಾಯುಷಿ ದಂಪತಿಯ ಪುತ್ರ ಎಂ. ತಿಪ್ಪೇಸ್ವಾಮಿ ಸರ್ಕಾರಿ ಪ್ರೌಢಶಾಲೆಯ ಮುಖ್ಯ ಪ್ರಾಧ್ಯಾಪಕರಾಗಿದ್ದು, ಸೊಸೆ ಎನ್. ಸಾವಿತ್ರಮ್ಮ ಕೂಡಾ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿದ್ದಾರೆ. ಇನ್ನು ಮೊಮ್ಮಗ ಡಾ. ಭರತ್ ಕುಮಾರ್ ವೈದ್ಯರಾಗಿದ್ದಾರೆ. ಮೊಮ್ಮಗ ಡಾ. ಭರತ್ ಕುಮಾರ್ ಇತರ ವೈದ್ಯರ ಸಲಹೆಗಳನ್ನೂ ಪಡೆದು ಮನೆಯಲ್ಲಿಯೇ ತನ್ನ ಅಜ್ಜ-ಅಜ್ಜಿಗೆ ಚಿಕಿತ್ಸೆ ನೀಡಿದ್ದಾರೆ.
ಇನ್ನು ಈ ಶತಾಯುಷಿ ದಂಪತಿ ಕೋವಿಡ್ನಿಂದ ಗುಣಮುಖರಾದ ವಿಷಯ ತಿಳಿದ ತಹಸೀಲ್ದಾರ್ ರಶ್ಮಿ, ತಾಲೂಕು ದೈಹಿಕ ಶಿಕ್ಷಣ ಪರಿವೀಕ್ಷಕ ಎಸ್.ಡಿ. ಸಂತಿ, ಕಂದಾಯ ನಿರೀಕ್ಷಕ ಎರ್ರಿಸ್ವಾಮಿ, ಸಮುದಾಯ ಆರೋಗ್ಯ ಕೇಂದ್ರ ಅಧಿಕಾರಿ ಮಲ್ಲಿಕಾರ್ಜುನ ವೃದ್ಧ ದಂಪತಿಯನ್ನು ಸನ್ಮಾನಿಸಿ, ಹೋಂ ಐಸೋಲೇಷನ್ ಡಿಸ್ಚಾರ್ಜ್ ಪ್ರಮಾಣಪತ್ರ ನೀಡಿದ್ದಾರೆ.
ಬೀದರ್: ಕೋವಿಡ್ ಸೋಂಕಿನಿಂದ ಗೆದ್ದು ನಗೆ ಬೀರಿದ ಶತಾಯುಷಿ
ಬೀದರ್ ಜಿಲ್ಲೆ ಭಾಲ್ಕಿ ತಾಲ್ಲೂಕಿನ ಶತಾಯುಷಿ ಶಿವಲಿಂಗಪ್ಪ ಮಲಶೆಟ್ಟೆಪ್ಪ (101) ಕೋವಿಡ್ ಗೆದ್ದು ಮಾದರಿಯಾಗಿದ್ದರು. ಹಾಗೆಯೇ ರಾಯಚೂರಿನ 90 ರ ವೃದ್ಧೆಯೊಬ್ಬರು ಈಶ್ಮರಮ್ಮ ಎರಡು ಬಾರಿ ಕೊರೊನಾ ವಿರುದ್ದ ಗೆದ್ದು ಸುದ್ದಿಯಾಗಿದ್ದರು.
(ಒನ್ಇಂಡಿಯಾ ಸುದ್ದಿ)