ಬಳ್ಳಾರಿ: ಲಾರಿ ಹಿಂಬದಿಗೆ ಕಾರು ಡಿಕ್ಕಿ; 7 ಜನರಿಗೆ ಗಂಭೀರ ಗಾಯ
ಬಳ್ಳಾರಿ, ನವೆಂಬರ್ 23: ಕೂಲಿ ಕೆಲಸಕ್ಕೆಂದು ಕಾರಿನಲ್ಲಿ ಕಲಬುರಗಿಯಿಂದ ಬೆಂಗಳೂರು ಕಡೆ ಹೋಗುತ್ತಿರುವಾಗ, ಕೂಡ್ಲಿಗಿ ಹೊರವಲಯದ ಗೌಡ್ರು ಪೆಟ್ರೋಲ್ ಬಂಕ್ ಸಮೀಪದ ರಾಷ್ಟ್ರೀಯ ಹೆದ್ದಾರಿ 50ರ ಪ್ಲೈ ಓವರ್ ನಲ್ಲಿ, ಮುಂದೆ ಹೋಗುತ್ತಿದ್ದ ಲಾರಿಯ ಹಿಂಬದಿಗೆ ಕಾರು ಡಿಕ್ಕಿ ಹೊಡೆದ ಪರಿಣಾಮ, ಕಾರಿನಲ್ಲಿದ್ದ 7 ಜನರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ.
ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ನಾಲ್ವಾ ಗ್ರಾಮದ ಕಬ್ಬಲಿಗ ಸಮುದಾಯದ ಮಹದೇವಮ್ಮ (52), ಮಲ್ಲಪ್ಪ (40), ಶರಣಪ್ಪ (15) ತೀವ್ರ ಗಾಯಗೊಂಡಿದ್ದು, ಹೆಚ್ಚಿನ ಚಿಕಿತ್ಸೆಗೆ ಬಳ್ಳಾರಿ ವಿಮ್ಸ್ ಆಸ್ಪತ್ರೆಗೆ ಕಳುಹಿಸಲಾಗಿದೆ.
ಬಳ್ಳಾರಿಯಲ್ಲಿ ಗಣಿ ಮಾಲೀಕರ ಮಗ ನಿಗೂಢವಾಗಿ ನಾಪತ್ತೆ
ವೀರೇಶ (17), ಸಾಬಮ್ಮ (19), ಮರಿಯಮ್ಮ (35) ಹಾಗೂ ಕಾರಿನ ಚಾಲಕ ಸಿದ್ದು (22) ಗಾಯಗೊಂಡು ಕೂಡ್ಲಿಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆಂದು ತಿಳಿದಿದೆ.
ಲಾರಿಯ ಹಿಂಬದಿಗೆ ಕಾರಿನ ಚಾಲಕನ ನಿಯಂತ್ರಣ ತಪ್ಪಿ ಡಿಕ್ಕಿ ಹೊಡೆಸಿದ್ದರಿಂದ ಈ ಅಪಘಾತ ಸಂಭವಿಸಿದ್ದು, ಘಟನಾ ಸ್ಥಳಕ್ಕೆ ಹೈವೇ ಪ್ಯಾಟ್ರೋಲಿಂಗ್ ಹಾಗೂ ಕೂಡ್ಲಿಗಿ ಪೊಲೀಸರು ಸ್ಥಳಕ್ಕೆ ಧಾವಿಸಿ ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿದ್ದಾರೆ. ಈ ಬಗ್ಗೆ ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.