ಬಳ್ಳಾರಿ; ಹೈದರಾಬಾದ್, ಚೆನ್ನೈಗೆ ಬಸ್ ಸಂಚಾರ ಆರಂಭ
ಬಳ್ಳಾರಿ, ಆಗಸ್ಟ್ 26; ಕೋವಿಡ್ ಎರಡನೇ ಅಲೆಯ ಲಾಕ್ಡೌನ್ ಕಾರಣದಿಂದಾಗಿ ಬಳ್ಳಾರಿಯಿಂದ ಹೊರ ರಾಜ್ಯಗಳಿಗೆ ಬಸ್ ಸಂಚಾರ ಸ್ಥಗಿತಗೊಳಿಸಲಾಗಿತ್ತು. ಈಗ ಪುನಃ ಬಸ್ಸುಗಳ ಸಂಚಾರವನ್ನು ಆರಂಭಿಸಲಾಗಿದೆ. ಜನರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಮನವಿ ಮಾಡಲಾಗಿದೆ.
ಬಳ್ಳಾರಿ-ಚೆನ್ನೈ, ಬಳ್ಳಾರಿ-ಹೈದರಾಬಾದ್ ನಡುವೆ ಐಷಾರಾಮಿ ಬಸ್ಗಳ ಸಂಚಾರವನ್ನು ಆರಂಭಿಸಲಾಗಿದೆ. ಬಳ್ಳಾರಿ-ಬೆಂಗಳೂರು ಮತ್ತು ಹರಪನಹಳ್ಳಿಯಿಂದ ಕೊಟ್ಟೂರು, ಕೂಡ್ಲಿಗಿ ಮತ್ತು ಹೊಸಪೇಟೆ ಮಾರ್ಗವಾಗಿ ಕಲಬುರಗಿಗೆ ಬಸ್ ಸಂಚಾರವನ್ನು ಪ್ರಾರಂಭಿಸಲಾಗಿದೆ.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಹೆಸರು ಬದಲಾವಣೆ
ಬಳ್ಳಾರಿ ವಿಭಾಗ ಬಳ್ಳಾರಿ-ಚೆನ್ನೈ ಮಾರ್ಗದಲ್ಲಿ ನಾನ್ ಎಸಿ ಸ್ಲೀಪರ್ ಬಸ್ ಸೇವೆಯನ್ನು ಆಗಸ್ಟ್ 27ರಿಂದ ಪುನಃ ಪ್ರಾರಂಭಿಸುತ್ತಿದೆ. ಈ ಕುರಿತು ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಬಳ್ಳಾರಿ ವಿಭಾಗದ ವಿಭಾಗೀಯ ನಿಯಂತ್ರಣಾಧಿಕಾರಿ ಇನಾಯತ್ ಬಾಗ್ಬಾನ್ ಮಾಹಿತಿ ನೀಡಿದ್ದಾರೆ.
ಈಶಾನ್ಯ ಸಾರಿಗೆಯಿಂದ ನಾನ್ ಎಸಿ ಸ್ಲೀಪರ್ ಬಸ್ ಟಿಕೆಟ್ ದರ ಆಫರ್
ಕೋವಿಡ್ ಎರಡನೇ ಅಲೆಯ ಲಾಕ್ಡೌನ್ ಕಾರಣದಿಂದಾಗಿ ಬಸ್ಸುಗಳ ಸಂಚಾರವನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಈಗ ಬಳ್ಳಾರಿ-ಚೆನ್ನೈ ವಯಾ ಅನಂತಪುರ ಮಾರ್ಗದಲ್ಲಿ ನಾನ್ ಎಸಿ ಸ್ಲೀಪರ್ ಬಸ್ ಸಂಚಾರ ಆರಂಭವಾಗುತ್ತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಸೋಮವಾರದಿಂದ ಕೇರಳ, ತಮಿಳುನಾಡಿಗೆ ಕೆಎಸ್ಆರ್ಟಿಸಿ ಬಸ್ ಸೇವೆ
ವೇಳಾಪಟ್ಟಿ; ಬಳ್ಳಾರಿಯಿಂದ ರಾತ್ರಿ 7.30ಕ್ಕೆ ಹೊರಡುವ ಬಸ್ ಬೆಳಗ್ಗೆ 8.15ಕ್ಕೆ ಚೆನ್ನೈ ತಲುಪಲಿದೆ. ಸಂಜೆ 6.30ಕ್ಕೆ ಚೆನ್ನೈನಿಂದ ಹೊರಟು ಬೆಳಗ್ಗೆ 7.15ಕ್ಕೆ ಬಳ್ಳಾರಿಗೆ ತಲುಪಲಿದೆ. ಈ ಬಸ್ನ ಪ್ರಯಾಣದರ 975 ರೂ. ನಿಗದಿ ಮಾಡಲಾಗಿದೆ.
ಪ್ರಯಾಣಿಕರು ನಾನ್ ಎಸಿ ಸ್ಲೀಪರ್ ಬಸ್ಗಳಲ್ಲಿ ಸಂಚಾರ ನಡೆಸಲು www.ksrtc.in ವೆಬ್ಸೈಟ್ ಮೂಲಕ ಮುಂಗಡ ಆಸನಗಳನ್ನು ಕಾಯ್ದಿರಿಸಬಹುದಾಗಿದೆ.
ಬಳ್ಳಾರಿ-ಹೈದರಾಬಾದ್; ಬಳ್ಳಾರಿ-ಹೈದರಾಬಾದ್ ಮತ್ತು ಬಳ್ಳಾರಿ-ಬೆಂಗಳೂರಿನ ನಡುವಿನ ಸ್ಲೀಪರ್ ಬಸ್ಗಳ ಸೇವೆಯನ್ನು ಕೋವಿಡ್ ಸಂದರ್ಭದಲ್ಲಿ ನಿಲ್ಲಿಸಲಾಗಿತ್ತು. ಆಗಸ್ಟ್ 19ರಿಂದಲೇ ಈ ಬಸ್ಗಳ ಸಂಚಾರವನ್ನು ಪುನಃ ಆರಂಭಿಸಲಾಗಿದೆ.
ಬಳ್ಳಾರಿ-ಹೈದರಾಬಾದ್ ವಯಾ ಕರ್ನೂಲ್ ಮಾರ್ಗವಾಗಿ ಸಾಗುವ ಬಸ್ ಬಳ್ಳಾರಿಯಿಂದ ರಾತ್ರಿ 9.48ಕ್ಕೆ ಹೊರಟು ಬೆಳಗ್ಗೆ 5.50ಕ್ಕೆ ಹೈದರಾಬಾದ್ ತಲುಪಲಿದೆ. ಹೈದರಾಬಾದ್ನಿಂದ ರಾತ್ರಿ 9.50ಕ್ಕೆ ಹೊರಟು ಬೆಳಗ್ಗೆ 5.50ಕ್ಕೆ ಬಳ್ಳಾರಿ ತಲುಪಲಿದೆ. ಪ್ರಯಾಣದ ದರ 890 ರೂ.ಗಳು ನಿಗದಿಪಡಿಸಲಾಗಿದೆ.
ಬಳ್ಳಾರಿ-ಬೆಂಗಳೂರು ಮಾರ್ಗದ ಬಸ್ ಬಳ್ಳಾರಿಯಿಂದ ರಾತ್ರಿ 11ಕ್ಕೆ ಹೊರಟು ಬೆಳಗ್ಗೆ 6ಕ್ಕೆ ಬೆಂಗಳೂರು ತಲುಪಲಿದೆ. ಬೆಂಗಳೂರಿನಿಂದ ರಾತ್ರಿ 11ಕ್ಕೆ ಹೊರಟು ಬೆಳಗ್ಗೆ 6ಕ್ಕೆ ಬಳ್ಳಾರಿ ತಲುಪಲಿದೆ. ಪ್ರಯಾಣದ ದರ 727 ರೂ.ಗಳಾಗಿದೆ.
ಹೊಸ ಬಸ್ ಸೇವೆ ಆರಂಭ; ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ ಪ್ರಯಾಣಿಕರ ಬೇಡಿಕೆಯಂತೆ ಹೊಸಪೇಟೆ ವಿಭಾಗದಿಂದ ಹರಪನಹಳ್ಳಿ-ಕಲಬುರಗಿ ಮಾರ್ಗವಾಗಿ ನೂತನ ನಾನ್ ಎಸಿ ಸ್ಲೀಪರ್ ಬಸ್ ಸಂಚಾರವನ್ನು ಆಗಸ್ಟ್ 22ರಿಂದ ಆರಂಭಿಸಿದೆ.
ಈ ಬಸ್ ಹರಪನಹಳ್ಳಿಯಿಂದ ಕೊಟ್ಟೂರು, ಕೂಡ್ಲಿಗಿ ಮತ್ತು ಹೊಸಪೇಟೆ ಮಾರ್ಗವಾಗಿ ಕಲಬುರಗಿಗೆ ಸಂಚಾರ ನಡೆಸಲಿದೆ. ಪ್ರಯಾಣ ದರ 674 ರೂ. ಆಗಿದೆ. ರಾತ್ರಿ 8.30ಕ್ಕೆ ಹರಪನಹಳ್ಳಿ, ರಾತ್ರಿ 9.05ಕ್ಕೆ ಕೊಟ್ಟೂರು, ರಾತ್ರಿ 9.45ಕ್ಕೆ ಕೂಡ್ಲಿಗಿ, ರಾತ್ರಿ 11ಕ್ಕೆ ಹೊಸಪೇಟೆ ಮಾರ್ಗವಾಗಿ ಕಲಬುರಗಿ ತಲುಪುತ್ತದೆ.
ಮರುದಿನ ರಾತ್ರಿ 10.05ಕ್ಕೆ ಕಲಬುರಗಿಯಿಂದ ಹೊರಟು ಹೊಸಪೇಟೆ, ಕೂಡ್ಲಿಗಿ, ಕೊಟ್ಟೂರು ಮಾರ್ಗವಾಗಿ ಹರಪನಹಳ್ಳಿ ತಲುಪುತ್ತದೆ. ನೂತನ ಬಸ್ ಸೇವೆಯ ಉಪಯೋಗವನ್ನು ಸಾರ್ವಜನಿಕರು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಕರೆ ನೀಡಲಾಗಿದೆ.
ಬಳ್ಳಾರಿ ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಅಡಿಯಲ್ಲಿ ಬರುತ್ತದೆ. ಕರ್ನಾಟಕ ಸರ್ಕಾರ ಕೆಲವು ದಿನಗಳ ಹಿಂದೆ ಸಾರಿಗೆ ಸಂಸ್ಥೆಯ ಹೆಸರನ್ನು 'ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ' ಎಂದು ತಕ್ಷಣದಿಂದ ಜಾರಿಗೆ ಬರುವಂತೆ ಮರು ನಾಮಕರಣ ಮಾಡಿ ಆದೇಶ ಹೊರಡಿಸಿದೆ.
ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮದ ವ್ಯಾಪ್ತಿಯಲ್ಲಿ ಬೀದರ್, ಕಲಬುರಗಿ, ವಿಜಯಪುರ, ಯಾದಗಿರಿ, ರಾಯಚೂರು, ಕೊಪ್ಪಳ, ಬಳ್ಳಾರಿ ಮತ್ತು ಹೊಸಪೇಟೆ ಒಳಪಡುತ್ತದೆ.