'ಪ್ರಧಾನಿ ಪಟ್ಟಕ್ಕೆ ಮೋದಿ' ಶ್ರೀರಾಮುಲು ಪಕ್ಷ ಜಪ
ಬಳ್ಳಾರಿ,ಡಿ.15: ಮಾಜಿ ಮುಖ್ಯಮಂತ್ರಿ, ಕರ್ನಾಟಕ ಜನತಾ ಪಕ್ಷ ಅಧ್ಯಕ್ಷ ಬಿಎಸ್ ಯಡಿಯೂರಪ್ಪ ಅವರನ್ನು ಬಿಜೆಪಿಗೆ ಸೇರ್ಪಡೆಗೊಳಿಸುವ ಪ್ರಕ್ರಿಯೆ ಜಾರಿಯಲ್ಲಿರುವ ಬೆನ್ನಲ್ಲೇ ಬಡವರ ಶ್ರಮಿಕರ ರೈತರ ಪಕ್ಷದ ಅಧ್ಯಕ್ಷ ಶ್ರೀರಾಮುಲು ಅವರನ್ನು ಬಿಜೆಪಿಗೆ ಮತ್ತೆ ಸೇರಿಸಿಕೊಳ್ಳುವ ಸಾಧ್ಯತೆ ಜೋರಾಗುತ್ತಿದೆ. ಇದಕ್ಕೆ ಪೂರಕವಾಗಿ ಭಾನುವಾರ ಕೆಎಂಎಫ್ ಅಧ್ಯಕ್ಷ ಸೋಮಶೇಖರ್ ರೆಡ್ಡಿ ಅವರು ಸುದ್ದಿಗೋಷ್ಠಿ ನಡೆಸಿದ್ದಾರೆ.
ಮುಂಬರುವ ಲೋಕಸಭಾ ಚುನಾವಣಾ ದೃಷ್ಟಿಯಿಂದ ಬಳ್ಳಾರಿ ರೆಡ್ಡಿ ಸಹೋದರರು ಮತ್ತೊಮ್ಮೆ ಬಿಜೆಪಿಯನ್ನು ಅಪ್ಪಿಕೊಂಡು ರಾಜಕೀಯ ಭವಿಷ್ಯ ಕಂಡುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ. ಇದಕ್ಕೆ ಬಿಜೆಪಿಯಲ್ಲೂ ಮುಕ್ತ ಸ್ವಾಗತ ಸಿಗುತ್ತಿದೆ ಎನ್ನಲಾಗಿದೆ.
ಬಳ್ಳಾರಿಯಲ್ಲಿ ಇಂದು ಸುದ್ದಿಗಾರರೊಂದಿಗೆ ಮಾತನಾಡಿದ ಮಾಜಿ ಶಾಸಕ ಹಾಗೂ ಕೆಎಂಎಫ್ ಅಧ್ಯಕ್ಷ ಸೋಮಶೇಖರ್ ರೆಡ್ಡಿ ಅವರು ತಮ್ಮ ಮಾತಿನುದ್ದಕ್ಕೂ ಬಿಜೆಪಿ ಪ್ರಧಾನಿ ಅಭ್ಯರ್ಥಿ ಮೋದಿ ಅವರ ಗುಣಗಾನ ಮಾಡಿದರು. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿಯಾಗಲೇಬೇಕು. ದೇಶದ ಹಿತದೃಷ್ಟಿಯಿಂದ ಇದು ಒಳ್ಳೆಯದು ಎಂದು ಹೇಳಿದರು. ಬಿಎಸ್ಆರ್ ಕಾಂಗ್ರೆಸ್ ಮುಖಂಡ ಶ್ರೀರಾಮಲು ಜೊತೆ ಬಹಿರಂಗವಾಗಿ ಸಾಕಷ್ಟು ಸಲ ಗುರುತಿಸಿಕೊಂಡಿರುವ ಕೆಎಂಎಫ್ ರೆಡ್ಡಿ ಅವರು ಬಿಜೆಪಿ, ಮೋದಿ ಜಪ ಮಾಡುತ್ತಿದ್ದಾರೆ.
ಮುಂದಿನ ಲೋಕಸಭಾ ಚುನಾವಣೆಯಲ್ಲಿ ನಮ್ಮ ಬೆಂಬಲ ಬಿಜೆಪಿಗೆ. ಮೋದಿ ಪ್ರಧಾನಿ ಆಗಲೇಬೇಕು ಎಂದು ಕಡ್ಡಿ ಮುರಿದಂತೆ ಹೇಳಿದ್ದಾರೆ. ಈ ನಡುವೆ ಶ್ರೀರಾಮಲು ಅವರನ್ನು ಕೂಡ ಬಿಜೆಪಿಗೆ ಮರಳಿ ಕರೆತರುವ ಪ್ರಯತ್ನ ನಡೆಯುತ್ತಿದ್ದು, ಮುಂದಿನ ಫೆಬ್ರವರಿ, ಮಾರ್ಚ್ ವೇಳೆಗೆ ಅವರು ಕೂಡ ಬಿಜೆಪಿಗೆ ಬರಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದ್ದಾರೆ. ದೇಶಾದ್ಯಂತ ಬಿಜೆಪಿ ಅಲೆ ಎದ್ದಿದೆ. ಇದಕ್ಕೆ ಉದಾಹರಣೆ ಎಂದರೆ ಮೊನ್ನೆ ನಡೆದ ನಾಲ್ಕು ರಾಜ್ಯಗಳಲ್ಲಿ ಬಿಜೆಪಿ ಜಯಭೇರಿ ಬಾರಿಸಿರುವುದೇ ಸಾಕ್ಷಿ ಎಂದು ರೆಡ್ಡಿ ಹೇಳಿದರು. ಆದರೆ, ರಾಮುಲು ಸೇರ್ಪಡೆಗೆ ವಿಳಂಬ ಏಕೆ? ಮುಂದೆ ಓದಿ
ಷರತ್ತುಗಳೇ ಕಾರಣ
ಲೋಕಸಭೆ ಚುನಾವಣೆ ವೇಳೆಗೆ ಬಿಎಸ್ಆರ್ ಕಾಂಗ್ರೆಸ್ ಪಕ್ಷ ಬಿಜೆಪಿಯಲ್ಲಿ ವಿಲೀನವಾಗುವುದು ಬಹುತೇಕ ಖಚಿತವಾಗಿದೆ. ಆದರೆ, ಶ್ರೀರಾಮುಲು ಅವರು ಷರತ್ತುಗಳನ್ನು ವಿಧಿಸಿದ್ದಾರೆ.
ಬಿಎಸ್ಸಾರ್ ಕಾಂಗ್ರೆಸ್ ಪಕ್ಷ ಬಿಜೆಪಿಯಲ್ಲಿ ವಿಲೀನಗೊಳ್ಳುವುದರಿಂದ ಬಿಜೆಪಿಗೆ ವಿಧಾನಸಭೆಯ ಅಧಿಕೃತ ವಿರೋಧ ಪಕ್ಷದ ನಾಯಕನ ಸ್ಥಾನ ಲಭ್ಯವಾಗಲಿದೆ. ಹೀಗಾಗಿ ವಿರೋಧ ಪಕ್ಷದ ಉಪನಾಯಕನ ಸ್ಥಾನ ತಮಗೆ ನೀಡಬೇಕು ಎಂಬುದು ಶ್ರೀರಾಮುಲು ಅವರ ಮೊದಲ ಷರತ್ತು.ಕೋರ್ ಕಮಿಟಿಗೆ ಸೇರ್ಪಡೆ
ಬಿಜೆಪಿ ರಾಜ್ಯ ಘಟಕ ತೆಗೆದುಕೊಳ್ಳುವ ಪ್ರಮುಖ ನಿರ್ಧಾರಗಳಲ್ಲಿ ತಮ್ಮನ್ನೂ ಮುಖ್ಯವಾಗಿ ಪರಿಗಣಿಸಬೇಕು. ಇದಕ್ಕೆ ಪೂರಕವಾಗಿ ಬಿಜೆಪಿ ಕೋರ್ ಕಮಿಟಿಯಲ್ಲಿ ಸ್ಥಾನ ಕಲ್ಪಿಸಬೇಕು. ಜತೆಗೆ ಉತ್ತರ ಕರ್ನಾಟಕ ಭಾಗದ ಚುನಾವಣಾ ಪ್ರಚಾರ ಉಸ್ತುವಾರಿ ವಹಿಸಿಕೊಡಬೇಕು ಎಂದು ಶ್ರೀರಾಮುಲು ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಷರತ್ತುಗಳ ಗೊಂದಲ
ಬಿಎಸ್ಆರ್ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಲು ಷರತ್ತುಗಳೇ ಪ್ರಮುಖ ಸಮಸ್ಯೆಯಾಗಿದೆ. ಬಿಜೆಪಿ ನಾಯಕರು ಬಿಎಸ್ಆರ್ ಸೇರಿಸಿಕೊಳ್ಳಲು ಒಪ್ಪಿಗೆ ನೀಡಿದ್ದು, ರಾಷ್ಟ್ರೀಯ ನಾಯಕರ ಅನುಮತಿ ದೊರೆಯಬೇಕಾಗಿದೆ.
ಉಪನಾಯಕನ ಸ್ಥಾನ ಸಿಕ್ಕರೂ, ಚುನಾವಣಾ ಪ್ರಚಾರ ಸಮಿತಿ ಹಾಗೂ ಕೋರ್ ಕಮಿಟಿ ಬಗ್ಗೆ ಕೇಂದ್ರದ ನಾಯಕರೇ ನಿರ್ಣಯ ತೆಗೆದುಕೊಳ್ಳಬೇಕಾಗುತ್ತದೆ.
ಆರ್ ಅಶೋಕ್ ವಿರೋಧ
ಬಿ. ಶ್ರೀರಾಮುಲು ಮೊದಲ ಬೇಡಿಕೆಗೆ ಮಾಜಿ ಉಪ ಮುಖ್ಯಮಂತ್ರಿ ಆರ್. ಅಶೋಕ್ ಹಾಗೂ ಅವರ ಬಣ ವಿರೋಧ ವ್ಯಕ್ತಪಡಿಸುವ ಸಾಧ್ಯತೆ ಇದೆ. ಸದ್ಯಕ್ಕೆ ಬಿಜೆಪಿ ಶಾಸಕಾಂಗ ಪಕ್ಷದ ಉಪನಾಯಕನ ಸ್ಥಾನ ಅಲಂಕರಿಸಿರುವ ಅಶೋಕ್ ಅವರು ಬೆಂಗಳೂರಿನ ಲೋಕಸಭಾ ಕ್ಷೇತ್ರಗಳಲ್ಲಿ ಸಾಕಷ್ಟು ಜನಪ್ರಿಯತೆ ಹೊಂದಿದ್ದಾರೆ. ಮತ್ತೆ ಆಂತರಿಕ ಯುದ್ಧ ಆರಂಭವಾದರೆ ಉತ್ತರ ಕರ್ನಾಟಕವಿರಲಿ, ನಗರ ಕೇಂದ್ರಿತ ಬಿಜೆಪಿ ಕ್ಷೇತ್ರಗಳು ಕೈ ತಪ್ಪುವ ಸಾಧ್ಯತೆಯಿದೆ
ಸುಷ್ಮಾ ಸ್ವರಾಜ್ ಅಡ್ಡಗಾಲು
ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಬಿಜೆಪಿಗೆ ಮರಳಲು ಹಿರಿಯ ನಾಯಕ ಎಲ್ ಕೆ ಅಡ್ವಾಣಿ ಅವರು ಹೇಗೆ ಅಡ್ಡ ಗಾಲು ಹಾಕಿದ್ದಾರೋ ಹಾಗೆ ನಾಯಕಿ ಸುಷ್ಮಾ ಸ್ವರಾಜ್ ಅವರು ರೆಡ್ಡಿ ಸೋದರರು ಹಾಗೂ ಶ್ರೀರಾಮುಲು ಅವರ ಸೇರ್ಪಡೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಭ್ರಷ್ಟಾಚಾರ ವಿರೋಧಿ ಅಂದೋಲನ ನಿರತ ಬಿಜೆಪಿ ಈ ನಾಯಕರನ್ನು ಸದ್ಯಕ್ಕೆ ಸೇರಿಸಿಕೊಳ್ಳುವುದು ಕಷ್ಟಕರ
ಬಿಜೆಪಿಗೆ ಏನು ಲಾಭ?
ಬಿಎಸ್ ಆರ್ ಕಾಂಗ್ರೆಸ್ ಪಕ್ಷ ಹಾಗೂ ಬಿಜೆಪಿ ಒಂದಾದರೆ, ಶ್ರೀರಾಮುಲು ಅವರ ಜನಪ್ರಿಯತೆ ಹೆಚ್ಚಾಗಿರುವ ಬಳ್ಳಾರಿ, ಕೊಪ್ಪಳ, ರಾಯಚೂರು, ಗದಗ ಮುಂತಾದ ಕ್ಷೇತ್ರಗಳಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಬಿಜೆಪಿಗೆ ಸಾಧ್ಯವಾಗಲಿದೆ ಎಂಬ ಲೆಕ್ಕಾಚಾರ ಚಾಲ್ತಿಯಲ್ಲಿದೆ. ಅಲ್ಲದೆ, ಈ ಭಾಗದಲ್ಲಿ ಈಗಾಗಲೇ ಸೋಲು ಗೆಲುವು ಜನರ ಆಶೋತ್ತರ ಬಗ್ಗೆ ಬಿಜೆಪಿ ನಾಯಕರಿಗಿಂತ ಶ್ರೀರಾಮುಲು ಹೆಚ್ಚಿನ ತಿಳುವಳಿಕೆ ಹೊಂದಿದ್ದಾರೆ.