ಲಂಚ ಪ್ರಕರಣ: ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ತುಷಾರಮಣಿ ಅಮಾನತು
ಬಳ್ಳಾರಿ, ಅಕ್ಟೋಬರ್ 16: ಐದು ಲಕ್ಷ ರೂ ಲಂಚ ಪಡೆದ ಆರೋಪದಲ್ಲಿ ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತೆ ಎಂ.ವಿ. ತುಷಾರಮಣಿ ಅವರನ್ನು ಅಮಾನತುಗೊಳಿಸಲಾಗಿದೆ.
ಸಚಿವರ ಹೆಸರು ಹೇಳಿಕೊಂಡು ಲಂಚಕ್ಕಾಗಿ ಬೇಡಿಕೆ ಇಟ್ಟಿದ್ದ ತುಷಾರಮಣಿ ಅವರ ಆಡಿಯೋ ಮುದ್ರಿಕೆ ಬಹಿರಂಗವಾಗಿತ್ತು. ಇದು ತೀವ್ರ ಸಂಚಲನ ಸೃಷ್ಟಿಸಿತ್ತು. ಈ ಘಟನೆ ಬಗ್ಗೆ ಬಳ್ಳಾರಿ ಜಿಲ್ಲಾಧಿಕಾರಿ ನೀಡಿದ್ದ ವರದಿ ಆಧಾರದಲ್ಲಿ ತುಷಾರಮಣಿ ಅವರನ್ನು ತಕ್ಷಣದಿಂದ ಜಾರಿಗೆ ಬರುವಂತೆ ಅಮಾನತುಗೊಳಿಸಿ ರಾಜ್ಯ ಸರ್ಕಾರ ಆದೇಶಿಸಿದೆ.
ಬಳ್ಳಾರಿ ಮಹಾನಗರ ಪಾಲಿಕೆ ಆಯುಕ್ತೆ ವಿರುದ್ಧ ಹಣ ಸುಲಿಗೆ ಆರೋಪ
ಕರ್ನಾಟಕ ನಾಗರಿಕ ಸೇವಾ ನಿಯಮಗಳು 1957ರ ನಿಯಮ 10 (1) (ಎ) ಅನ್ವಯ ತುಷಾರಮಣಿ ವಿರುದ್ಧ ಇಲಾಖಾ ವಿಚಾರಣೆಯನ್ನು ಕಾಯ್ದಿರಿಸಲಾಗಿದೆ. ಮುಂದಿನ ಆದೇಶದವರೆಗೂ ಅವರನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಹಾಗೆಯೇ ಮುಂದಿನ ಆದೇಶದವರೆಗೂ ಬಳ್ಳಾರಿ ಮಹಾನಗರ ಪಾಲಿಕೆಯ ಆಯುಕ್ತರಾಗಿ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಈರಪ್ಪ ಬಿರಾದಾರ ಅವರನ್ನು ಪ್ರಭಾರಿಯನ್ನಾಗಿ ನೇಮಿಸಿ ಆದೇಶಿಸಲಾಗಿದೆ.
ಕೆಲವು ದಿನಗಳ ಹಿಂದೆ ತುಷಾರಮಣಿ ಅವರ ಆಪ್ತ ಸಹಾಯಕ 50 ಸಾವಿರ ರೂ ಲಂಚ ಪಡೆಯುವಾಗ ಎಸಿಬಿ ದಾಳಿ ನಡೆದಿತ್ತು. ಫಾರ್ಮ್ ನಂ 3ಅನ್ನು ನೀಡಲು ತುಷಾರಮಣಿ ಐದು ಲಕ್ಷ ರೂ ಹಣಕ್ಕೆ ಬೇಡಿಕೆ ಇರಿಸಿದ್ದರು. ಅದಕ್ಕೆ ಸಚಿವರ ಹೆಸರನ್ನು ಸಹ ಬಳಸಿಕೊಂಡಿದ್ದರು ಎಂದು ಸಾಮಾಜಿಕ ಕಾರ್ಯಕರ್ತ ರಾಜಶೇಖರ್ ಮುಲಾಲಿ ದಾಖಲೆಗಳನ್ನು ಬಿಡುಗಡೆ ಮಾಡಿದ್ದರು.