ಮೋದಿಯವರ ಕನಸು ನನಸಾಗಿಸಲು ಕರ್ನಾಟಕದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕಿದೆ: ಜೆ.ಪಿ.ನಡ್ಡಾ
ಬೆಂಗಳೂರು, ಏಪ್ರಿಲ್ 17: "ಕಾಂಗ್ರೆಸ್ ಇದ್ದಲ್ಲಿ ಭ್ರಷ್ಟಾಚಾರ, ಕಮಿಷನ್ ಇದೆ. ಪಿಎಫ್ಐ ಮೇಲಿನ ಪ್ರಕರಣಗಳನ್ನು ರದ್ದು ಮಾಡಿದ ಸಿದ್ದರಾಮಯ್ಯ ಒಳಗಿನಿಂದ ಆ ಸಂಘಟನೆ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆಯೇ," ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಜೆ.ಪಿ. ನಡ್ಡಾ ಪ್ರಶ್ನಿಸಿದರು.
ಹೊಸಪೇಟೆಯಲ್ಲಿ ಇಂದು ಏರ್ಪಡಿಸಿದ್ದ ವಿಶೇಷ ಸಾರ್ವಜನಿಕ ಸಭೆಯಲ್ಲಿ ಮಾತನಾಡಿ, "ಪಂಚರಾಜ್ಯ ಚುನಾವಣೆಯಲ್ಲಿ ನಾವು ನಾಲ್ಕು ರಾಜ್ಯಗಳಲ್ಲಿ ಮತ್ತೆ ಗೆದ್ದಿದ್ದೇವೆ. ಕಾಂಗ್ರೆಸ್ ಎಲ್ಲ ಕಡೆ ಹೀನಾಯ ಸೋಲು ಕಂಡಿದೆ. ಭಾರತವು ಪರಿವಾರವಾದ, ಜಾತಿವಾದದಲ್ಲಿ ಈಗ ನಂಬಿಕೆ ಇಟ್ಟಿಲ್ಲ ಎಂಬುದು ಸಾಬೀತಾಗಿದೆ," ಎಂದು ಹೇಳಿದರು.
ಹೊಸಪೇಟೆಯಲ್ಲಿ ಬಿಜೆಪಿ ಕಾರ್ಯಕಾರಿಣಿ: 150 ಸೀಟಿನ ಹುರುಪಿಗೆ ಪರ್ಸೆಂಟೇಜ್ ಹೊಡೆತ
"2023ರಲ್ಲಿ ಬಿಜೆಪಿ ಮತ್ತೆ ಇಲ್ಲಿ ಅಧಿಕಾರ ಪಡೆಯಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದ ನಡ್ಡಾ, "ಕಾಂಗ್ರೆಸ್ ಪಕ್ಷವು ಪ್ರಾದೇಶಿಕ ಪಕ್ಷವಾಗಿದೆ. ಜೆಡಿಎಸ್, ಶಿವಸೇನಾ, ಟಿಡಿಪಿ, ಪಿಡಿಪಿ ಸೇರಿದಂತೆ ಹತ್ತಾರು ಪಕ್ಷಗಳು ಪ್ರಾದೇಶಿಕ ಪಕ್ಷವಾಗಿ ದೇಶದ ವಿವಿಧೆಡೆ ಇವೆ. ಸಬ್ ಕಾ ಸಾಥ್ ಸಬ್ ಕಾ ವಿಶ್ವಾಸ್ ಎಂಬ ನರೇಂದ್ರ ಮೋದಿ ಕನಸು ನನಸಾಗಿಸಲು ಕರ್ನಾಟಕದಲ್ಲಿ ಬಿಜೆಪಿಯನ್ನು ಗೆಲ್ಲಿಸಬೇಕಿದೆ," ಎಂದು ತಿಳಿಸಿದರು.
ಯಡಿಯೂರಪ್ಪ, ಬೊಮ್ಮಾಯಿ ಸರಕಾರದ ಸಾಧನೆ ಜನರಿಗೆ ತಲುಪಿಸಿ: ಜೆಪಿ ನಡ್ಡಾ
"ಕೋವಿಡ್ ವೇಳೆ ಪ್ರಧಾನಿ ಗರೀಬ್ ಕಲ್ಯಾಣ್ ಅನ್ನ ಯೋಜನೆ ಮೂಲಕ 80 ಕೋಟಿಗೂ ಹೆಚ್ಚು ಜನರಿಗೆ ಪಡಿತರ ಕೊಡಲಾಗಿದೆ. ಹಸಿವಿನಿಂದ ಯಾರೂ ಸಾಯಬಾರದೆಂಬ ಉದ್ದೇಶ ಇದರಲ್ಲಿದೆ. ಬೊಮ್ಮಾಯಿಯವರು ಮಾಸಾಶನವನ್ನು ಹೆಚ್ಚಿಸಿದ್ದಾರೆ. ಇಲ್ಲಿನ ಸಂಬಾರ ಪದಾರ್ಥಗಳು ಮತ್ತು ಕಾಫಿ ರಫ್ತು ಹೆಚ್ಚಾಗಿದೆ," ಎಂದರು. "ಯಡಿಯೂರಪ್ಪ ಮತ್ತು ಬೊಮ್ಮಾಯಿ ಸರಕಾರಗಳ ಸಾಧನೆಯನ್ನು ಜನರಿಗೆ ತಲುಪಿಸಿ," ಎಂದರು.
"ನಾವು ಕುರ್ಚಿಗಳಿಗಾಗಿ ಬಂದಿಲ್ಲ. ಸಂಸದ, ಶಾಸಕ ಆಗಲು ಬಂದಿಲ್ಲ. ಸೇವೆ ಮೂಲಕ ಬದಲಾವಣೆ ತರಲು ನಾವು ಏಜೆಂಟರಾಗಲು ನಾವೆಲ್ಲರೂ ರಾಜಕೀಯಕ್ಕೆ ಬಂದಿದ್ದೇವೆ. ಉಜ್ವಲಾ ಯೋಜನೆ, 11 ಕೋಟಿಗೂ ಹೆಚ್ಚು ಶೌಚಾಲಯ ನಿರ್ಮಾಣ ಮೂಲಕ ಮಹಿಳಾ ಸಶಕ್ತೀಕರಣ ಸಾಧ್ಯವಾಗಿದೆ. ಆವಾಸ್ ಯೋಜನೆಯಡಿ ಎಲ್ಲರಿಗೂ ಮನೆ ನೀಡುವ ಕಾರ್ಯ ಮುಂದುವರಿದಿದೆ. ಆಯುಷ್ಮಾನ್ ಭಾರತ್, ಸೌಭಾಗ್ಯ ಯೋಜನೆ, 18 ಸಾವಿರ ಗ್ರಾಮಗಳ ವಿದ್ಯುದೀಕರಣ ಬಿಜೆಪಿ ನೇತೃತ್ವದ ಕೇಂದ್ರ ಸರಕಾರದಿಂದ ಸಾಧ್ಯವಾಗಿದೆ," ಎಂದು ವಿವರಿಸಿದರು.
ಕರ್ನಾಟಕ ಸ್ಟಾರ್ಟ್ ಅಪ್ಗಳ ಪ್ರಮುಖ ಪ್ರದೇಶ
"ಕರ್ನಾಟಕವು ಸ್ಟಾರ್ಟ್ ಅಪ್ಗಳ ಪ್ರಮುಖ ಪ್ರದೇಶವಾಗಿದೆ. ಜಿಎಸ್ಟಿ ಸಂಗ್ರಹವೂ ಗಮನಾರ್ಹವಾಗಿ ಬೆಳೆದಿದೆ. ತೆರಿಗೆ ಸಂಗ್ರಹವೂ ಶೇ 34ರಷ್ಟು ಹೆಚ್ಚಾಗಿದೆ. ಭಾರತದ ಬೆಳವಣಿಗೆ ದರವು ಶೇ 7.4ರಿಂದ ಶೇ 8ಕ್ಕೂ ಹೆಚ್ಚಾಗಲಿದೆ ಎಂದು ಸರ್ವೇಗಳು ತಿಳಿಸಿವೆ ಎಂದು ತಿಳಿಸಿದರು. ಶೇ 31ರಷ್ಟು ಉದ್ಯೋಗ ನೀಡಿಕೆ ಬೆಳವಣಿಗೆ ಇದೆ. ಎಲ್ಲ ಕ್ಷೇತ್ರಗಳಲ್ಲಿ ನಮ್ಮ ಬೆಳವಣಿಗೆ ಸಾಗಿದೆ," ಎಂದು ಮೆಚ್ಚುಗೆ ಸೂಚಿಸಿದರು.
ಶಿವಮೊಗ್ಗ ಗಲಭೆ, ರಾಷ್ಟ್ರಧ್ವಜ: ಈಶ್ವರಪ್ಪಗೆ ಬಿಜೆಪಿ ಹೈಕಮಾಂಡ್ ಛೀಮಾರಿ
"ಹಂಪಿಯು ವಿಜಯನಗರ ಸಾಮ್ರಾಜ್ಯದ ರಾಜಧಾನಿಯಾಗಿತ್ತು. ವಿಜಯನಗರವನ್ನು ಪ್ರತ್ಯೇಕ ಜಿಲ್ಲೆಯಾಗಿ ಮಾಡಿದ್ದಕ್ಕಾಗಿ ಜನತೆಗೆ ಅಭಿನಂದನೆ ಸಲ್ಲಿಸಿದರು. ಕರ್ನಾಟಕ "ಮಿಷನ್ 150" ಗಾಗಿ ಕಾರ್ಯಕರ್ತರು ಶ್ರಮಿಸಲಿದ್ದಾರೆ. ಉತ್ತಮ ಬೂತ್ ಮೂಲಕ ಗೆಲುವು ನಮ್ಮದಾಗಿಸಿಕೊಳ್ಳಬಹುದು. ಆದ್ದರಿಂದ ಬೂತ್, ಪೇಜ್ ಕಮಿಟಿಗೆ ಮಹತ್ವ ಕೊಡಬೇಕು. ಜನರಿಗೆ ಸೌಲಭ್ಯಗಳನ್ನು ತಲುಪಿಸಲು ಸೈನಿಕರಂತೆ ಶ್ರಮಿಸಬೇಕು," ಎಂದು ಮನವಿ ಮಾಡಿದರು.
"ಹಿಂದೂ ಧರ್ಮ ಮತ್ತು ಸಂಸ್ಕೃತಿಯ ರಕ್ಷಣೆಗಾಗಿ ಹೋರಾಡಿದ ಭೂಮಿ ಇದು. ಈ ಪವಿತ್ರ ಭೂಮಿಗೆ ನಮನಗಳು ಎಂದರು. ಕರ್ನಾಟಕವು ಐಟಿ. ಹಬ್ ಆಗಿ ಹೊರಹೊಮ್ಮಿದೆ. ಕರ್ನಾಟಕದ ಜನರು ಉದ್ಯಮಿಗಳು, ಶ್ರಮ ಪಡುವವರು. ಭಾರತೀಯ ಸಂಸ್ಕøತಿಯನ್ನು ಕಾಪಾಡಿಕೊಂಡು ಹೊಸ ಭವಿಷ್ಯದತ್ತ ಮುಖ ಮಾಡಿರುವ ಜನತೆ ಇಲ್ಲಿದ್ದಾರೆ," ಎಂದರು.
ಬಿಜೆಪಿ ವಿಜಯಪತಾಕೆ ಹಾರಿಸಲು ವಿಜಯನಗರದಿಂದಲೇ ಸಂಕಲ್ಪ
ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಮಾತನಾಡಿ, "ಪೂರ್ವದಲ್ಲಿ ಸೂರ್ಯ ಹುಟ್ಟುವುದು ಎಷ್ಟು ಸತ್ಯವೋ ಬಿಜೆಪಿ 2023ರಲ್ಲಿ ಮತ್ತೆ ಅಧಿಕಾರ ಪಡೆಯುವುದು ಅಷ್ಟೇ ಸತ್ಯ," ಎಂದು ನುಡಿದರು. "ರಾಷ್ಟ್ರ ಮಟ್ಟದಲ್ಲಿ ನರೇಂದ್ರ ಮೋದಿಜಿ ನಾಯಕತ್ವವಿದ್ದು, ಅವರು ವಿಶ್ವಮಟ್ಟದ ನಾಯಕರಾಗಿ ಹೊರಹೊಮ್ಮಿದ್ದಾರೆ. ಇಂಥ ನಾಯಕತ್ವ ಮತ್ತು ಅಭಿವೃದ್ಧಿ ಕಾರ್ಯಗಳಿಂದ ಬಿಜೆಪಿ ಗೆಲುವು ಖಚಿತ ಎಂದು ಅಭಿಪ್ರಾಯಪಟ್ಟರು. ಬಿಜೆಪಿ ವಿಜಯಪತಾಕೆ ಹಾರಿಸಲು ವಿಜಯನಗರದಿಂದಲೇ ಸಂಕಲ್ಪ ಮಾಡಿದ್ದೇವೆ," ಎಂದರು.
"2013ರಿಂದ ಬಂದ ಕಾಂಗ್ರೆಸ್ ಸರಕಾರದ ಕೆಟ್ಟ ಆಡಳಿತದಿಂದ ಹಿಂಸೆ, ಕೊಲೆ, ಸುಲಿಗೆ ಹೆಚ್ಚಾಗಿತ್ತು. ಹಿಂಸೆಯ ಹಿಂದಿದ್ದ ಪಿಎಫ್ಐ ಮೇಲಿನ 200ಕ್ಕೂ ಹೆಚ್ಚು ಕೇಸುಗಳನ್ನು ಸಿದ್ದರಾಮಯ್ಯ ಹಿಂಪಡೆದಿದ್ದರು. ಸಿದ್ದರಾಮಯ್ಯ ಮತಬ್ಯಾಂಕ್ ರಾಜಕೀಯ ಮಾಡಿದ್ದಾರೆ," ಎಂದು ಟೀಕಿಸಿದರು. "ಕಾಂಗ್ರೆಸ್ನವರಿಗೆ ಅಧಿಕಾರ, ಮತಬ್ಯಾಂಕ್ ಮುಖ್ಯ. ಆದರೆ, ದೇಶ ಮುಖ್ಯವಲ್ಲ. ಹುಬ್ಬಳ್ಳಿ ಪೊಲೀಸ್ ಸ್ಟೇಶನ್ ಮೇಲೆ ದಾಳಿ ಆದರೆ ನಿಮ್ಮ ಧ್ವನಿಯೇ ಇಲ್ಲ. ಹಿಜಾಬ್ ವಿಚಾರವನ್ನು ಮೊಳಕೆಯಲ್ಲೇ ಚಿವುಟಬಹುದಿತ್ತು. ಆ ವಿಚಾರಕ್ಕೆ ಸಂಬಂಧಿಸಿ ನಿಮ್ಮ ಪಕ್ಷದ ವಕೀಲರು ವಾದ ಮಾಡುತ್ತಾರೆ. ಕೋರ್ಟ್ ಆದೇಶ ಪಾಲಿಸಿ ಎಂದು ಮಾತನಾಡಿಲ್ಲ ಯಾಕೆ? ಯಾವ ಕಡೆ ಹೊರಟಿದ್ದೀರಿ ನೀವು," ಎಂದು ಪ್ರಶ್ನಿಸಿದರು.
Recommended Video
"ಪ್ರಜಾಪ್ರಭುತ್ವದ ಸಮರ ಇಲ್ಲಿಂದ ಆರಂಭವಾಗಿದೆ. ನವ ಕರ್ನಾಟಕಕ್ಕಾಗಿ ಕಾರ್ಯಕರ್ತರ ಶ್ರಮದಿಂದ ಗೆಲುವು ನಮ್ಮದಾಗಲಿದೆ," ಎಂದು ವಿಶ್ವಾಸ ವ್ಯಕ್ತಪಡಿಸಿದರು. ಬಿಜೆಪಿ ರಾಜ್ಯಾಧ್ಯಕ್ಷರು ಹಾಗೂ ಸಂಸದರಾದ ನಳಿನ್ಕುಮಾರ್ ಕಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಮತ್ತು ಕರ್ನಾಟಕದ ಉಸ್ತುವಾರಿಗಳಾದ ಅರುಣ್ ಸಿಂಗ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯದ ಪರಿಸರ, ಜೀವಿಶಾಸ್ತ್ರ ಹಾಗೂ ಪ್ರವಾಸೋದ್ಯಮ ಇಲಾಖೆ ಸಚಿವರಾದ ಆನಂದ್ ಸಿಂಗ್, ಕೇಂದ್ರ ಮತ್ತು ರಾಜ್ಯದ ಸಚಿವರು, ಪಕ್ಷದ ಪದಾಧಿಕಾರಿಗಳು, ಆಹ್ವಾನಿತರು ಭಾಗವಹಿಸಿದ್ದರು.