ಜನಾರ್ದನ ರೆಡ್ಡಿಯಿಂದ ಬಿಜೆಪಿ ಅಂತರ, ಇದು ನನ್ನ ಗೆಲುವು ಎಂದ ಟಪಾಲ್
ಬಳ್ಳಾರಿ, ಏಪ್ರಿಲ್ 1: ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಶನಿವಾರ ಮಾತನಾಡುತ್ತಾ, 'ಜನಾರ್ದನರೆಡ್ಡಿ ಜೊತೆ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ' ಎಂದು ಹೇಳಿದ್ದರು. ಬಿಜೆಪಿ ಅಧ್ಯಕ್ಷರ ಈ ನಿಲವಿಗೆ ನನ್ನ ಹೋರಾಟವೇ ಕಾರಣ ಎಂದಿರುವ ಬಳ್ಳಾರಿಯ ಟಪಾಲ್ ಗಣೇಶ್, 'ಇನ್ನೇನಿದ್ದರೂ ಬಳ್ಳಾರಿ ಸಿಟಿ ಟಿಕೆಟ್ ನ ಹೋರಾಟ' ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಅಮಿತ್ ಶಾ ಅವರು ಮೈಸೂರಿನಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ, ಪತ್ರಕರ್ತರ ಮಧ್ಯೆಯಿಂದ ತೂರಿಬಂದ ಪ್ರಶ್ನೆಗೆ ಉತ್ತರಿಸಿ, 'ಜನಾರ್ದನ ರೆಡ್ಡಿ ಜೊತೆಗೆ ಬಿಜೆಪಿಗೆ ಯಾವುದೇ ಸಂಬಂಧವಿಲ್ಲ' ಎಂದು ಸ್ಪಷ್ಟಪಡಿಸಿದ್ದರು.
ಬಳ್ಳಾರಿ ಉಪ ಮೇಯರ್ ಪದ್ಮಾವತಿ ಕೊಲೆ ಹಿಂದೆ ಯಾರ ಕೈ?: ಟಪಾಲ್ ಪ್ರಶ್ನೆ
ಈ ಸುದ್ದಿ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತಯೇ ಪ್ರತಿಕ್ರಿಯೆ ನೀಡಿದ ಟಪಾಲ್ ಗಣೇಶ್, 'ಅಮಿತ್ ಶಾ ಅವರು ಗಣಿ ಹಗರಣದ ಆರೋಪಿ ಜಿ. ಜನಾರ್ದನ ರೆಡ್ಡಿ ಕುರಿತು ನೀಡಿರುವ ಹೇಳಿಕೆ, ರೆಡ್ಡಿಗೆ ಬಿಜೆಪಿ ನೀಡುತ್ತಿರುವ ಗೌರವ, ಒದಗಿಸಿರುವ ಸ್ಥಾನ- ಮಾನಗಳನ್ನು ಸ್ಪಷ್ಟಪಡಿಸಿದೆ. ಇದು ನನ್ನ ಸುದೀರ್ಘ ಹೋರಾಟದ ಗೆಲುವು' ಎಂದಿದ್ದಾರೆ.
ಅಷ್ಟೇ ಅಲ್ಲ, ಬಳ್ಳಾರಿ ನಗರ ಮತ್ತು ಜಿಲ್ಲೆಯಾದ್ಯಂತ ಅಲ್ಲಲ್ಲಿ ರಾರಾಜಿಸುತ್ತಿರುವ ಬಿಜೆಪಿಯ ಬ್ಯಾನರ್, ಪೋಸ್ಟರ್ ಗಳಲ್ಲಿ ಗಣಿ ಕಳಂಕಿತ ಜನಾರ್ದನ ರೆಡ್ಡಿಯ ಫೋಟೋಗಳು ಪ್ರಕಟವಾಗಬಾರದು. ಪ್ರಧಾನಿ ಮೋದಿ, ಅಮಿತ್ ಶಾ, ಬಿಎಸ್ ವೈ, ಜಗದೀಶ ಶೆಟ್ಟರ್ ಸೇರಿ ಅನೇಕ ಮುಖಂಡರ ಜೊತೆ ಇವರ ಮುಖ ಕಾಣಿಸಿಕೊಳ್ಳಬಾರದು ಎಂದು ಆಗ್ರಹಿಸಿದ್ದಾರೆ.
ವಿಧಾನಸಭೆ ಚುನಾವಣೆ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಅಮಿತ್ ಶಾ ಹೇಳಿಕೆ ಆಧರಿಸಿ, ಬಳ್ಳಾರಿ ನಗರ ವಿಧಾನಸಭಾ ಕ್ಷೇತ್ರದ ಟಿಕೆಟ್ ಜಿ. ಸೋಮಶೇಖರ ರೆಡ್ಡಿ ಅವರಿಗೆ ಸಿಗುವುದು ಡೌಟ್. ಜಿ. ಸೋಮಶೇಖರ ರೆಡ್ಡಿ ಬೇಲ್ ಡೀಲ್ ನ ಪ್ರಮುಖ ಆರೋಪಿ. ಇಂಥವರಿಗೆ ಬಿಜೆಪಿ ಟಿಕೆಟ್ ನೀಡಿದಲ್ಲಿ ಹೇಗೆ? ನಾನಿನ್ನು ಬಳ್ಳಾರಿ ವಿಧಾನಸಭಾ ಟಿಕೆಟ್ ಅನ್ನು ಬೇಲ್ ಡೀಲ್ ಆರೋಪಿಗೆ ನೀಡದಂತೆ ಹೋರಾಟ ಮುಂದುವರೆಸುವೆ ಎಂದಿದ್ದಾರೆ.