ಅನರ್ಹ ಶಾಸಕ ಆನಂದ್ ಸಿಂಗ್ ಗೆ ಬಿಜೆಪಿ ಟಿಕೆಟ್: ಬಿಜೆಪಿಗರಿಂದಲೇ ಆಕ್ಷೇಪ
ವಿಜಯನಗರ, ಸೆಪ್ಟೆಂಬರ್ 25: ಸುಪ್ರೀಂಕೋರ್ಟ್ ತೀರ್ಪು ಅನರ್ಹರ ಪರವಾಗಿ ಬಂದಲ್ಲಿ ಎಲ್ಲ ಅನರ್ಹರಿಗೂ ಬಿಜೆಪಿಯಿಂದ ಉಪಚುನಾವಣೆ ಟಿಕೆಟ್ ನೀಡಲಾಗುತ್ತದೆ ಎಂಬುದು ಬಹುತೇಕ ಖಾಯಂ ಆಗಿದೆ. ಅಂತೆಯೇ ಆನಂದ್ ಸಿಂಗ್ಗೂ ಸಹ.
ಆದರೆ ಅನರ್ಹ ಶಾಸಕ ಆನಂದ್ ಸಿಂಗ್ಗೆ ಟಿಕೆಟ್ ನೀಡಬಾರದು ಎಂದು ಬಿಜೆಪಿಗರೇ ಆಕ್ಷೇಪ ಎತ್ತಿದ್ದು, ವಿಜಯನಗರ ಕ್ಷೇತ್ರದ ಬಿಜೆಪಿ ಮುಖಂಡರು ಈ ಬಗ್ಗೆ ರಾಜ್ಯ ಬಿಜೆಪಿ ನಾಯಕರಿಗೆ ಮನವಿ ಮಾಡಿದ್ದಾರೆ.
'ವಿಜಯನಗರ ಹೋರಾಟ' ಪ್ರಾರಂಭಿಸಿದ ಅನರ್ಹ ಶಾಸಕ ಆನಂದ್ ಸಿಂಗ್
ನಿನ್ನೆ ವಿಜಯನಗರದಲ್ಲಿ ಜಂಟಿ ಸುದ್ದಿಗೋಷ್ಠಿ ನಡೆಸಿದ ಹೊಸಪೇಟೆ ತಾಲ್ಲೂಕಿನ ಬಿಜೆಪಿಯ ವಿವಿಧ ಮೋರ್ಚಾ ಅಧ್ಯಕ್ಷರು, ಪದಾಧಿಕಾರಿಗಳು ಆನಂದ್ ಸಿಂಗ್ಗೆ ಬಿಜೆಪಿ ಟಿಕೆಟ್ ನೀಡಬಾರದು ಎಂದು ಒತ್ತಾಯಿಸಿದರು.
ಆನಂದ್ ಸಿಂಗ್ ಎರಡು ಬಾರಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿದ್ದರು, ಒಂದು ಬಾರಿ ಸಚಿವರೂ ಆಗಿದ್ದರು. ಆದರೂ ಸಹ ಕಳೆದ ಚುನಾವಣೆ ಅವಧಿಯಲ್ಲಿ ಪಕ್ಷತ್ಯಜಿಸಿ ಕಾಂಗ್ರೆಸ್ನಿಂದ ಸ್ಪರ್ಧಿಸಿದ್ದರು. ಆದರೆ ಈಗ ಮತ್ತೆ ಬಿಜೆಪಿ ಟಿಕೆಟ್ನಿಂದ ಚುನಾವಣೆಗೆ ಸ್ಪರ್ಧಿಸಲು ಸಜ್ಜಾಗಿದ್ದಾರೆ. ಇದು ಸ್ಥಳೀಯ ಬಿಜೆಪಿಗರ ಆಕ್ರೋಶಕ್ಕೆ ಕಾರಣವಾಗಿದೆ.
'ಸಕಾರಣವಿಲ್ಲದೆ ಬಿಜೆಪಿ ತೊರೆದಿದ್ದ ಆನಂದ್ ಸಿಂಗ್'
ಯಾವುದೇ ಸಕಾರಣವಿಲ್ಲದೆ ಆನಂದ್ ಸಿಂಗ್ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಈಗ ಮತ್ತೆ ವೈಯಕ್ತಿಕ ಲಾಭಕ್ಕಾಗಿ ಬಿಜೆಪಿ ಸೇರುತ್ತಿದ್ದಾರೆ. ಇದಕ್ಕೆ ಅವಕಾಶ ಕೊಡಬಾರದು ಎಂದು ಬಿಜೆಪಿಗರು ಒತ್ತಾಯಿಸಿದರು. ನಿನ್ನೆ ಕರೆಯಲಾಗಿದ್ದ ಬಿಜೆಪಿ ಸಭೆಗೂ ಅಡ್ಡಿಪಡಿಸಿದ ಸ್ಥಳೀಯ ಬಿಜೆಪಿ ಮುಖಂಡರು, ಟಿಕೆಟ್ ವಿಷಯ ಇತ್ಯರ್ಥವಾಗುವವರೆಗೂ ಯಾವುದೇ ಸಭೆ ನಡೆಸಬಾರದು ಎಂದು ಪಟ್ಟು ಹಿಡಿದರು.
ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ಆನಂದ್ ಸಿಂಗ್
ಆನಂದ್ ಸಿಂಗ್ ಅವರು ಕಾಂಗ್ರೆಸ್ನಿಂದ ಶಾಸಕರಾಗಿ ಆಯ್ಕೆ ಆಗಿ ನಂತರ ರಾಜೀನಾಮೆ ನೀಡಿದ್ದರು. ಸಚಿವ ಸ್ಥಾನ ವಂಚಿತ ಅತೃಪ್ತರ ಗುಂಪಿನಲ್ಲಿದ್ದ ಅವರು ಸರ್ಕಾರದ ಕಾರ್ಯಕ್ಷಮತೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿ ರಾಜೀನಾಮೆ ನೀಡುತ್ತಿರುವುದಾಗಿ ಹೇಳಿದ್ದರು. ನಂತರ ಪಕ್ಷಾಂತರ ನಿಷೇಧ ಕಾಯ್ದೆ ಅಡಿಯಲ್ಲಿ ಇವರನ್ನು ಅನರ್ಹಗೊಳಿಸಲಾಯಿತು.
ಹೊಸ ಜಿಲ್ಲೆ ರಚನೆಗೆ ಯಡಿಯೂರಪ್ಪ ಆಸಕ್ತಿ, ಅಧಿಕೃತ ಆದೇಶ ಬಾಕಿ
ಉಪಚುನಾವಣೆಗೆ ಬಿಜೆಪಿಯಿಂದ ಟಿಕೆಟ್?
ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲು ಸಹಾಯ ಮಾಡಿರುವ ಆನಂದ್ ಸಿಂಗ್ಗೆ ಈಗ ಮತ್ತೆ ಬಿಜೆಪಿ ಟಿಕೆಟ್ ನೀಡುವ ಭರವಸೆ ದೊರೆತಿದ್ದು. ವಿಜಯನಗರ ಕ್ಷೇತ್ರದಿಂದಲೇ ಅವರು ಬಿಜೆಪಿ ಸ್ಪರ್ಧಿಸಲಿದ್ದಾರೆ. ಆದರೆ ಅವರ ಸ್ಪರ್ಧೆಯು ಸುಪ್ರೀಂಕೋರ್ಟ್ನ ತೀರ್ಪಿನ ಮೇಲೆ ಅವಲಂಬಿತವಾಗಿದೆ.
ಬಿಜೆಪಿ ಎದುರಾಳಿಯನ್ನು ಸೋಲಿಸಿದ್ದ ಆನಂದ್ ಸಿಂಗ್
ಆನಂದ್ ಸಿಂಗ್ ಅವರು ವಿಜಯನಗರ ಕ್ಷೇತ್ರದಿಂದ ಕಾಂಗ್ರೆಸ್ ಟಿಕೆಟ್ ಮೇಲೆ ಕಳೆದ ಚುನಾವಣೆಯಲ್ಲಿ ಸ್ಪರ್ಧಿಸಿ, ತಮ್ಮ ಸಮೀಪ ಪ್ರತಿಸ್ಪರ್ಧಿ ಬಿಜೆಪಿಯ ಎಚ್.ಆರ್.ಗವಿಯಪ್ಪ ಅವರನ್ನು 8288 ಮತಗಳ ಅಂತರದಿಂದ ಸೋಲಿಸಿದ್ದರು.