ನಾವು ಬಿಜೆಪಿಯ ಶಾಸಕರೇ?: ಬಿಎಸ್ವೈ ವಿರುದ್ಧ ಕರುಣಾಕರ ರೆಡ್ಡಿ ಅಸಮಾಧಾನ
ಬಳ್ಳಾರಿ, ಸೆಪ್ಟೆಂಬರ್ 29: ಬಳ್ಳಾರಿ ಜಿಲ್ಲೆಯಿಂದ ವಿಜಯನಗರವನ್ನು ಪ್ರತ್ಯೇಕಿಸಿ ಹೊಸ ಜಿಲ್ಲೆ ರಚನೆ ಮಾಡುವ ಪ್ರಸ್ತಾಪಕ್ಕೆ ಆಡಳಿತಪಕ್ಷ ಬಿಜೆಪಿಯ ಶಾಸಕರಿಂದಲೇ ತೀವ್ರ ವಿರೋಧ ವ್ಯಕ್ತವಾಗಿದೆ.
ಹೊಸ ಜಿಲ್ಲೆ ರಚನೆ ಆಗಬೇಕು ಎಂಬ ಬೇಡಿಕೆಯನ್ನು ಒಪ್ಪಿಕೊಂಡು ಕೂಡಲೇ ಅದರ ಬಗ್ಗೆ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಘೋಷಣೆ ಮಾಡಿರುವುದು ಬಳ್ಳಾರಿ ಜಿಲ್ಲೆಯ ನಾಯಕರನ್ನು ಕೆರಳಿಸಿದೆ. ವಿಜಯನಗರ ಜಿಲ್ಲೆ ರಚನೆಗೆ ಆರೋಗ್ಯ ಸಚಿವ ಬಿ. ಶ್ರೀರಾಮುಲು ಮತ್ತು ಶಾಸಕ ಜಿ. ಸೋಮಶೇಖರ ರೆಡ್ಡಿ ವಿರೋಧ ವ್ಯಕ್ತಪಡಿಸಿದ್ದರು. ಈಗ ಹರಪನಹಳ್ಳಿ ಶಾಸಕ ಕರುಣಾಕರ ರೆಡ್ಡಿ ಕೂಡ ಬಿಎಸ್ ಯಡಿಯೂರಪ್ಪ ನಡೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಭಾನುವಾರ ಸುದ್ದಿಗೋಷ್ಠಿ ನಡೆಸಿದ ಕರುಣಾಕರ ರೆಡ್ಡಿ, ಜಿಲ್ಲೆ ರಚನೆ ವಿಚಾರದಲ್ಲಿ ತಮ್ಮ ಅಭಿಪ್ರಾಯವನ್ನು ಕೇಳದ ಯಡಿಯೂರಪ್ಪ ಅವರದು ಏಪಕ್ಷೀಯ ನಡೆ ಎಂದು ಆರೋಪಿಸಿದರು.
ಕಾಂಗ್ರೆಸ್ ಶಾಸಕ ಆನಂದ್ ಸಿಂಗ್ ಅವರ ಹೆಸರನ್ನು ಪ್ರಸ್ತಾಪಿಸದೆಯೇ ಪರೋಕ್ಷ ವಾಗ್ದಾಳಿ ನಡೆಸಿದರು. 'ಕೆಲವರ ಒತ್ತಡಗಳಿಗೆ ಮಣಿದು ಅವರ ಸ್ವಹಿತಾಸಕ್ತಿಗಾಗಿ ಮುಖ್ಯಮಂತ್ರಿ ಯಡಿಯೂರಪ್ಪ ಅವರು ಹೊಸ ಜಿಲ್ಲೆ ರಚಿಸಲು ಮುಂದಾಗಿರುವುದು ಸರಿಯಲ್ಲ' ಎಂದು ಕರುಣಾಕರ ರೆಡ್ಡಿ ಅಸಮಾಧಾನ ವ್ಯಕ್ತಪಡಿಸಿದರು.
ನಾವು ಬಿಜೆಪಿಯ ಶಾಸಕರೇ?
'ಯಡಿಯೂರಪ್ಪ ಅವರು ಸೆ. 19ರಂದು ವಿಜಯನಗರ ಜಿಲ್ಲೆ ಮಾಡಬೇಕು ಎಂದು ಸಂಪುಟ ಕಾರ್ಯದರ್ಶಿಗೆ ಪತ್ರ ಬರೆದು ಸಚಿವ ಸಂಪುಟ ಸಭೆಯಲ್ಲಿ ಚರ್ಚೆಗೆ ತರುವಂತೆ ಆದೇಶಿಸಿದ್ದಾರೆ. ನಾವು ನಾಲ್ಕ ಜನ ಬಿಜೆಪಿ ಶಾಸಕರಿದ್ದೇವೆ. ಅವರು ನಿರ್ಧಾರ ಪ್ರಕಟಿಸಿದಾಗ ನಾವು ಬಿಜೆಪಿಯಿಂದ ಗೆದ್ದಿದ್ದೇವೆಯೇ ಎಂಬ ಪ್ರಶ್ನೆ ಕೇಳಿಕೊಳ್ಳುವಂತಾಗಿದೆ. ಅವರು ನಮ್ಮ ಅಭಿಪ್ರಾಯ ಪಡೆಯಬೇಕಿತ್ತು. ಯಡಿಯೂರಪ್ಪ ಅವರ ಮೇಲೆ ನಮಗೆ ಅಪಾರ ಗೌರವವಿದೆ. ಆದರೆ ಅವರು ಆತುರದ ನಿರ್ಧಾರ ಮಾಡುತ್ತಿದ್ದಾರೆ' ಎಂದು ರೆಡ್ಡಿ ಹೇಳಿದರು.
ಅನರ್ಹ ಶಾಸಕ ಆನಂದ್ ಸಿಂಗ್ ಗೆ ಬಿಜೆಪಿ ಟಿಕೆಟ್: ಬಿಜೆಪಿಗರಿಂದಲೇ ಆಕ್ಷೇಪ
ಈಗಲಾದರೂ ಪರಿಗಣಿಸಿ
'ಹಗರಿಬೊಮ್ಮನಹಳ್ಳಿ, ಕೊಟ್ಟೂರು, ಹಡಗಲಿ, ಹರಪನಹಳ್ಳಿ ಹೀಗೆ ಎಲ್ಲ ಕಡೆಯೂ ಪ್ರತ್ಯೇಕ ಜಿಲ್ಲೆ ಆಗಬೇಕೆಂಬ ಹೋರಾಟ ನಡೆಯುತ್ತಿದೆ. ಇದರಿಂದ ಬಳ್ಳಾರಿ ಜಿಲ್ಲೆಯಲ್ಲಿ ಗೊಂದಲದ ವಾತಾವರಣ ಉಂಟಾಗುತ್ತಿದೆ. ಯಡಿಯೂರಪ್ಪ ಮುಖ್ಯಮಂತ್ರಿಯಾಗಲು ನಾವು ಬೆಂಬಲ ಕೊಟ್ಟಿದ್ದೇವೆ. ಈಗಲಾದರೂ ಅವರು ನಮ್ಮ ಅಭಿಪ್ರಾಯಗಳನ್ನು ಪರಿಗಣಿಸಲಿ' ಎಂದರು.
ಪ್ರತ್ಯೇಕಿಸುವುದಾದರೆ ಹರಪನಹಳ್ಳಿ ಮಾಡಿ
'ಬೆಳಗಾವಿ ಮತ್ತು ಶಿರಸಿಯಲ್ಲಿ ಕೂಡ ಜಿಲ್ಲೆ ವಿಭಜನೆಗೆ ಹೋರಾಟ ನಡೆಯುತ್ತಿದೆ. ದಯವಿಟ್ಟು ಜಿಲ್ಲೆಯನ್ನು ಒಡೆಯಬೇಡಿ. ಅಖಂಡ ಬಳ್ಳಾರಿಯೇ ಇರಲಿ. ನಾವು ಒಗ್ಗಟ್ಟಾಗಿ ಇರಲು ಬಿಡಿ. ಒಂದು ವೇಳೆ ಜಿಲ್ಲೆ ಮಾಡಲೇಬೇಕು ಎಂದಾದರೆ ಬಳ್ಳಾರಿ ಜಿಲ್ಲೆಯ ಎಲ್ಲ ಪಶ್ಚಿಮ ತಾಲ್ಲೂಕುಗಳಿಗೆ ಸಮೀಪವಿರುವ ಹರಪನಹಳ್ಳಿಯನ್ನು ಜಿಲ್ಲಾಕೇಂದ್ರವಾಗಿ ಆಯ್ಕೆ ಮಾಡಿ' ಎಂದು ಒತ್ತಾಯಿಸಿದರು.
ಹೊಸ ಜಿಲ್ಲೆ ರಚನೆಗೆ ಯಡಿಯೂರಪ್ಪ ಆಸಕ್ತಿ, ಅಧಿಕೃತ ಆದೇಶ ಬಾಕಿ
ಬಳ್ಳಾರಿ ಬಂದ್ಗೆ ಬೆಂಬಲ
'ಆನಂದ್ ಸಿಂಗ್ ಮನವಿ ಪತ್ರ ಸಲ್ಲಿಸಿದ ಮರುದಿನವೇ ಹೊಸ ಜಿಲ್ಲೆ ರಚನೆ ಕುರಿತು ಪ್ರತಿಕ್ರಿಯಿಸಿದ್ದೀರಿ. ಆಗಲೇ ನಮ್ಮನ್ನು ಕರೆದು ಮಾತನಾಡಬೇಕಿತ್ತು. ಮುಂದಿನ ದಿನಗಳಲ್ಲಾದರೂ ಮುಖ್ಯಮಂತ್ರಿಗಳು ನಮ್ಮನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಾತನಾಡಿ ಹೆಜ್ಜೆ ಇಡಲಿದ್ದಾರೆ ಎಂಬ ಭರವಸೆ ಇದೆ. ಜಿಲ್ಲೆ ವಿಭಜನೆಯನ್ನು ವಿರೋಧಿಸಿ ಅ. 1ರಂದು ವಿವಿಧ ಸಂಘಟನೆಗಳು ಕರೆ ನೀಡಿರುವ ಬಂದ್ಗೆ ನನ್ನ ಬೆಂಬಲ ಇದೆ' ಎಂದು ತಿಳಿಸಿದರು.