ಬಿಜೆಪಿಯಲ್ಲಿ ಭಿನ್ನಮತ ಸಹಜ: ಸಚಿವ ಕೆ.ಎಸ್. ಈಶ್ವರಪ್ಪ ಸ್ಪೋಟಕ ಹೇಳಿಕೆ
ಬಳ್ಳಾರಿ, ಜೂ. 04: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಒಂದು ರೀತಿಯಲ್ಲಿ ಬೇವು-ಬೆಲ್ಲದ ಸಮಯ. ಒಂದು ಕಡೆ ಕೆಪಿಸಿಸಿ ಅಧ್ಯಕ್ಷರಾಗಿರುವ ಖುಷಿ, ಮತ್ತೊಂದೆಡೆ ಪದಗ್ರಹಣ ವಿಳಂಬವಾಗುತ್ತಿರುವುದಕ್ಕೆ ಬೇಸರ. ಕೊರೊನಾ ವೈರಸ್ ಲಾಕ್ಡೌನ್ ಹಿನ್ನೆಲೆಯಲ್ಲಿ ಡಿಕೆಶಿ ಪದಗ್ರಹಣ ಕಾರ್ಯಕ್ರಮ ವಿಳಂಬವಾಗುತ್ತಲೆ ಇದೆ. ಕಾಂಗ್ರೆಸ್ ಟ್ರಬಲ್ ಶೂಟರ್ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣಕ್ಕೆ ಇದೀಗ ಟ್ರಬಲ್ ಎದುರುರಾಗಿದೆ.
ಇದೇ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಪದಗ್ರಹಣ ಸಮಾರಂಭಕ್ಕೆ ರಾಜ್ಯ ಬಿಜೆಪಿ ಸರ್ಕಾರ ತಡೆಹಾಕಿದೆ ಎಂಬ ರಾಜಕೀಯ ಆರೋಪಗಳು ಕೇಳಿ ಬಂದಿವೆ. ಆದರೆ ಆ ಆರೋಪಕ್ಕೆ ಸರ್ಕಾರ ಉತ್ತರ ಕೊಟ್ಟಿದೆ.
ಪದಗ್ರಹಣದಲ್ಲಿ ರಾಜಕೀಯ?
ಕೆಪಿಸಿಸಿ ಅಧ್ಯಕ್ಷರಾಗಿ ಡಿ.ಕೆ. ಶಿವಕುಮಾರ್ ಪದಗ್ರಹಣ ಕಾರ್ಯಕ್ರಮಕ್ಕೆ ಸರ್ಕಾರ ರಾಜಕೀಯ ಮಾಡಿದೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್. ಈಶ್ವರಪ್ಪ ಸ್ಪಷ್ಟನೆ. ಕೊಟ್ಟಿದ್ದಾರೆ. ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಕಾರ್ಯಕ್ರಮದಲ್ಲಿ ನಾವು ರಾಜಕೀಯ ಮಾಡಿಲ್ಲ. ಕೊರೊನಾ ವೈರಸ್ ಹರಡುವ ಸಾಧ್ಯತೆ ಇದ್ದಿದ್ದರಿಂದ ಕಾರ್ಯಕ್ರಮ ಬೇಡ ಎಂದಿದ್ದೇವು. ಅದು ರಾಜಕೀಯ ಅಲ್ಲ ಎಂದು ಬಳ್ಳಾರಿಯಲ್ಲಿ ಈಶ್ವರಪ್ಪ ಹೇಳಿಕೆ ಕೊಟ್ಟಿದ್ದಾರೆ
ಡಿ.ಕೆ ಶಿವಕುಮಾರ್ ಪದಗ್ರಹಣ ರದ್ದು, ಇದರ ಹಿಂದೆ ರಾಜಕೀಯ ಹುನ್ನಾರ?
ಬೇಕಾದ್ದನ್ನು ಮಾಡುತ್ತೇವೆ
ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಅವರು ಹೋದ ಕಡೆಯಲ್ಲಿ ಬಿಜೆಪಿ ಸರ್ಕಾರ ಪಕ್ಷ ಸಂಘಟನೆ ಮಾಡಿಕೊಳ್ಳಲು ಗ್ರಾಮ ಪಂಚಾಯಿತಿಗಳಿಗೆ ನಾಮನಿರ್ದೇಶನ ಮಾಡಲು ಹೊರಟಿದೆ ಎಂದು ಹೇಳುತ್ತಿದ್ದಾರೆ. ನಾಮನಿರ್ದೇಶನದ ಮೂಲಕ ಪಕ್ಷಕ್ಕೆ ತಳಪಾಯ ಹಾಕಿಕೊಳ್ಳುತ್ತಿದ್ದಾರೆ ಎನ್ನುತ್ತಾರೆ. ನಾವು ಚುನಾವಣೆ ಗೆಲ್ಲಲು ಏನು ಬೇಕೊ ಅದನ್ನು ಸಂವಿಧಾನ ಬದ್ಧವಾಗಿ ಮಾಡಿಕೊಳ್ಳುತ್ತೇವೆ. ಪಕ್ಷಕ್ಕೆ ಅಡಿಪಾಯ ಇಲ್ಲದಿದ್ದರೆ ಚುನಾವಣೆ ಗೆಲ್ಲಲು ಆಗುತ್ತದೆಯಾ? ಡಿ.ಕೆ. ಶಿವಕುಮಾರ್ ಅವರನ್ನು ಕೇಳಿ ಎಲ್ಲವನ್ನು ಮಾಡಬೇಕಾ? ಕೇಳೋದಕ್ಕೆ ಅವರು ಯಾರು? ಎಂದು ಈಶ್ವರಪ್ಪ ಪ್ರಶ್ನೆ ಮಾಡಿದ್ದಾರೆ.
ಕಾಂಗ್ರೆಸ್ನಲ್ಲಿ ನಾಯಕರಿಲ್ಲ!
ಮಾಜಿ ಸಿಎಂ ಸಿದ್ದರಾಮಯ್ಯ, ಅವರ ಜತೆಗಿದ್ದ ಕಾಂಗ್ರೆಸ್ ಶಾಸಕರನ್ನು ಉಳಿಸಿಕೊಳ್ಳಲಿಲ್ಲ. ಹೀಗಾಗಿ ಸಿಎಂ ಸ್ಥಾನ ಕಳೆದುಕೊಂಡರು. ಹಾಗೆ ಅಧಿಕಾರ ಕಳೆದುಕೊಂಡಿರುವ ಸಿದ್ದರಾಮಯ್ಯ ಅವರೊಂದಿಗೆ ಬಿಜೆಪಿ ಶಾಸಕರು ಹೋಗುತ್ತಾರೆ ಎಂಬುದು ಹಗಲುಗನಸು. ಸಿದ್ದರಾಮಯ್ಯ ಅವರು ಹಗಲುಗನಸು ಕಾಣುತ್ತಿದ್ದಾರೆ. ನಮ್ಮ ಸರಕಾರ ಉತ್ತಮವಾಗಿ ನಡೆಯುತ್ತಿದೆ. ಇನ್ನುಮುಂದೆ ಈ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷದವರು ಮತ್ತೆ ಮುಖ್ಯಮಂತ್ರಿ ಆಗುವುದಿಲ್ಲ ಎಂದು ಈಶ್ವರಪ್ಪ ಹೇಳಿದ್ದಾರೆ.
ಭಿನ್ನಮತ ಸಹಜ
ನಮ್ಮ ಪಕ್ಷ ಬಿಜೆಪಿ ಒಂದು ಕುಟುಂಬ ಇದ್ದಂತೆ. ಇಲ್ಲಿ ಭಿನ್ನಮತ ಇರುವುದು ಸಹಜ, ಆದರೆ ನಾವು ಪರಿಹರಿಸಿಕೊಳ್ಳುತ್ತೇವೆ. ಇನ್ನುಮುಂದೆ ರಾಜ್ಯ ಮತ್ತು ದೇಶದಲ್ಲಿ ಬಿಜೆಪಿ ಬಿಟ್ಟು ಬೇರೆ ಪಕ್ಷ ಅಧಿಕಾರಕ್ಕೆ ಬರುವುದೇ ಇಲ್ಲ. ಮಾಜಿ ಸಿಎಂ ಸಿದ್ದರಾಮಯ್ಯ ಒಂದು ಕಡೆ ಹೋಗುತ್ತಾರೆ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮತ್ತೊಂದು ಕಡೆಗೆ ಹೋಗುತ್ತಾರೆ. ಹೀಗಾಗಿ ಹೊಂದಾಣಿಕೆ ಇಲ್ಲ. ಕಾಂಗ್ರೆಸ್ ಪಕ್ಷದಲ್ಲಿ ಪರ್ಯಾಯ ನಾಯಕರು ಇಲ್ಲ ಎಂದು ಇಶ್ವರಪ್ಪ ಹೇಳಿದ್ದಾರೆ.
ಇದರೊಂದಿಗೆ ಜೆಡಿಎಸ್ ಜೊತೆಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ ಎಂಬ ಮಾತು ಹೇಳುವ ಮೂಲಕ ಸಚಿವ ಕೆ.ಎಸ್. ಈಶ್ವರಪ್ಪ ಹೊಸ ಬಾಂಬ್ ಸಿಡಿಸಿದ್ದಾರೆ.