ಹೊಸಪೇಟೆ ಬಳಿ ಲಾರಿಗೆ ಬೈಕ್ ಡಿಕ್ಕಿ, ಜಿಂದಾಲ್ ನೌಕರ ಸಾವು
ಬಳ್ಳಾರಿ, ನವೆಂಬರ್ 4: ಕೆಲಸಕ್ಕಾಗಿ ಎಂದಿನಂತೆ ಹೊಸಪೇಟೆಯಿಂದ ತೋರಣಗಲ್ ನ ಜಿಂದಾಲ್ ಕಾರ್ಖಾನೆಗೆ ಹೊರಟಿದ್ದ ನೌಕರನೊಬ್ಬ ಲಾರಿಯಡಿ ಸಿಲುಕಿ ಸಾವನ್ನಪ್ಪಿರುವ ಘಟನೆ ಬಳ್ಳಾರಿ ಜಿಲ್ಲೆಯ ಹೊಸಪೇಟೆ ತಾಲೂಕಿನ ಪಾಪಿನಾಯಕನಹಳ್ಳಿಯ ರಾಷ್ಟ್ರೀಯ ಹೆದ್ದಾರಿ 63 ರಲ್ಲಿ ಸಂಭವಿಸಿದೆ.
ಅಪಘಾತದಲ್ಲಿ ಆಂಜನೇಯ (34) ಮೃತ ದುರ್ದೈವಿಯಾಗಿದ್ದು, ತೋರಣಗಲ್ ನ ಜಿಂದಾಲ್ ಕಾರ್ಖಾನೆಗೆ ಬರಲು ಆತ ತನ್ನ ಬೈಕ್ ನಲ್ಲಿ ಬರುವಾಗ ರಸ್ತೆಯಲ್ಲಿನ ಗುಂಡಿ ತಪ್ಪಿಸಲು ಹೋಗಿ ಬೈಕ್ ಸ್ಕಿಡ್ ಆಗಿದ್ದರಿಂದ ಪಕ್ಕದಲ್ಲಿ ಚಲಿಸುತ್ತಿದ್ದ ಲಾರಿಯಡಿ ಸಿಲುಕಿದೆ.
ಬೈಕ್ ಹಾಗೂ ನೌಕರ ಲಾರಿಯಡಿ ಸಿಲುಕಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲಿ ಸಾವಿಗೀಡಾಗಿದ್ದಾನೆ. ಜಿಂದಾಲ್ ಕಾರ್ಖಾನೆಗೆ ಕೋವಿಡ್ ಬಂದ ನಂತರ ಬಸ್ ಗಳ ಸಂಚಾರ ಬಂದ್ ಮಾಡಿರುವುದರಿಂದ ಕಾರ್ಖಾನೆ ನೌಕರರು ತಮ್ಮ ಬೈಕ್ ಗಳಲ್ಲಿ ಓಡಾಡಬೇಕಾಗಿದೆ.
ಹದಗೆಟ್ಟ ರಸ್ತೆಯಲ್ಲಿ ಬೈಕ್ ಸವಾರರು ತಮ್ಮ ಪ್ರಾಣ ಕೈಯಲ್ಲಿ ಹಿಡಿದು ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಕಾರಣ ಇಂದು ರಸ್ತೆಯ ಗುಂಡಿ ತಪ್ಪಿಸಲು ಹೋಗಿ ಜಿಂದಾಲ್ ನೌಕರ ಪ್ರಾಣ ಕಳೆದುಕೊಂಡಿದ್ದಾನೆ. ಈ ಸಂಬಂಧ ಗಾದಿಗನೂರು ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.