ಕಲಬುರಗಿಗೆ ಬಸ್ ಸೇವೆ ಸ್ಥಗಿತ: ಬಳ್ಳಾರಿ ಜಿಲ್ಲಾಧಿಕಾರಿ
ಬಳ್ಳಾರಿ, ಮಾರ್ಚ್ 19: ಕೊರೊನಾ ವೈರಸ್ನಿಂದ ಓರ್ವ ಮೃತಪಟ್ಟಿರುವ ಹಾಗೂ ಎರಡು ಸೋಂಕಿತ ಪ್ರಕರಣಗಳು ಕಂಡುಬಂದಿರುವ ಕಲಬುರಗಿಗೆ ಬಳ್ಳಾರಿಯಿಂದ ಬಸ್ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲು ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯಲ್ಲಿ ನಿರ್ಧರಿಸಲಾಗಿದೆ.
ಇಂದು ಸಂಜೆ ಈ ಆದೇಶ ಹೊರಡಿಸಲಾಗುವುದು, ಈ ಆದೇಶವು ನಾಳೆಯಿಂದಲೇ ಜಾರಿಗೆ ಬರಲಿದೆ ಎಂದು ಜಿಲ್ಲಾಧಿಕಾರಿ ಎಸ್.ಎಸ್ ನಕುಲ್ ಅವರು ತಿಳಿಸಿದ್ದಾರೆ.
ಕೊರೊನಾ ವೈರಸ್ ಹಿನ್ನೆಲೆ ನಗರದ ಜಿಲ್ಲಾಧಿಕಾರಿ ಕಚೇರಿಯ ಕೆಸ್ವಾನ್ ಸಭಾಂಗಣದಲ್ಲಿ ಗುರುವಾರ ನಡೆದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಇದಕ್ಕೆ ಸಂಬಂಧಿಸಿದಂತೆ ಈಗಾಗಲೇ ಈಶಾನ್ಯ ಕರ್ನಾಟಕ ಸಾರಿಗೆ ಸಂಸ್ಥೆ ವಿಭಾಗೀಯ ನಿಯಂತ್ರಕರಿಗೆ ಸೂಚಿಸಲಾಗಿದೆ ಎಂದು ಹೇಳಿದ ಅವರು, ವಿಮ್ಸ್ ನಲ್ಲಿ ಕೊರೊನಾ ವೈರಸ್ ರೋಗಿ ಮತ್ತು ಅನುಸರಿಸಬೇಕಾದ ಕ್ರಮಗಳ ಕುರಿತು ಅಣುಕು ಪರೀಕ್ಷೆಗೆ ಸಿದ್ಧತೆ ಮಾಡಿಕೊಳ್ಳುವಂತೆ ವಿಮ್ಸ್ ನಿರ್ದೇಶಕರಿಗೆ ಸೂಚಿಸಿದರು.
ಕೊರೊನಾ ತಪಾಸಣೆ ನಿಟ್ಟಿನಲ್ಲಿ ಹಂಪಿಯಲ್ಲಿ ಹೊಸದಾಗಿ ಚೆಕ್ ಪೋಸ್ಟ್ ಆರಂಭಿಸಲು ನಿರ್ಧರಿಸಲಾಗಿದ್ದು, ಸ್ಥಳ ಗುರುತಿಸಿ ತಿಳಿಸುವಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ ಅವರಿಗೆ ತಿಳಿಸಿದ ಡಿಸಿ ನಕುಲ್, ಜಿಲ್ಲಾಧಿಕಾರಿ ಕಚೇರಿಯಲ್ಲಿ ಸ್ಥಾಪಿಸಲಾಗಿರುವ ಸಹಾಯವಾಣಿ ಕೇಂದ್ರದಲ್ಲಿ 24*7 ಆರೋಗ್ಯ ಇಲಾಖೆ ಸಿಬ್ಬಂದಿ ಕಾರ್ಯನಿರ್ವಹಿಸಲು ಸೂಚನೆ ನೀಡಿದರು.
ಕೊರೊನಾ ಬಾಧಿತ ಹೊರದೇಶದಿಂದ ಬಂದವರಿಗೆ ನೀಡುವುದಕ್ಕಾಗಿ ಒಂದು ಪಾಂಪ್ಲೆಟ್ ಸಿದ್ದಪಡಿಸಿ, ಅದರಲ್ಲಿ ಒಂದು ಕಡೆ ಸ್ವಯಂ ಘೋಷಣೆ, ಸಂಪರ್ಕಿಸಬೇಕಾದ ಸಹಾಯವಾಣಿ ಕೇಂದ್ರ ಮತ್ತು ನಂಬರ್ಗಳು ಮತ್ತು ಕೊರೊನಾ ವೈರಸ್ ಲಕ್ಷಣಗಳು ಹಾಗೂ ಇನ್ನೀತರ ಅಂಶಗಳನ್ನು ಅದರಲ್ಲಿ ಸೇರಿಸಿ ವಿನ್ಯಾಸಗೊಳಿಸಿ ಮುದ್ರಿಸಿ ಎಂದರು.
ಬಳ್ಳಾರಿ ಜಿಲ್ಲಾಡಳಿತದ ballari.nic.in ನಲ್ಲಿ ಕೊರೊನಾ ಜಾಗೃತಿಗೆ ಸಂಬಂಧಿಸಿದಂತೆ ವೆಬ್ಪೇಜ್ ಸೃಷ್ಟಿಸಲಾಗುತ್ತಿದ್ದು, ಆ ವೆಬ್ಪೇಜ್ನಲ್ಲಿ ಕೊರೊನಾ ಜಾಗೃತಿಗೆ ಸಂಬಂಧಿಸಿದ ಐಇಸಿ ವಸ್ತುಗಳನ್ನು ಮತ್ತು ಸರಕಾರಿ ಆದೇಶಗಳಿರಲಿವೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಿ.ಕೆ.ಬಾಬಾ, ಜಿ.ಪಂ ಸಿಇಒ ಕೆ.ನಿತೀಶ್ ಮಾತನಾಡಿದರು. ಸಹಾಯಕ ಆಯುಕ್ತ ರಮೇಶ ಕೋನರೆಡ್ಡಿ, ತಹಸೀಲ್ದಾರ್ ವಿಶ್ವಜೀತ್ ಮೆಹತಾ, ಡಿಎಚ್ಒ ಡಾ.ಜನಾರ್ಧನ್, ಜಿಲ್ಲಾ ಶಸ್ತ್ರಚಿಕಿತ್ಸಕ ಬಸರೆಡ್ಡಿ, ಐಎಂಎ ಅಧ್ಯಕ್ಷ ಅರುಣ, ಡಾ.ಬಿ.ಕೆ.ಸುಂದರ್ ಮತ್ತಿತರರು ಇದ್ದರು.