ಬಳ್ಳಾರಿ: ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ಕಾಂಗ್ರೆಸ್ ತಂತ್ರವೇನು?
ಬಳ್ಳಾರಿ, ಡಿಸೆಂಬರ್ 20: ಬಳ್ಳಾರಿ ಜಿಲ್ಲಾ ಕಾಂಗ್ರೆಸ್ ನಲ್ಲಿ ಭವಿಷ್ಯದ ವಿಧಾನಸಭಾ ಚುನಾವಣೆಯ ಲೆಕ್ಕಾಚಾರಗಳು ಕಳೆದ ಒಂದು ತಿಂಗಳಿನಿಂದ ಪ್ರಾರಂಭವಾಗಿದ್ದು, ಸ್ಪರ್ಧಾಕಾಂಕ್ಷಿಗಳ ಕುರಿತು ಸಾಕಷ್ಟು ಚರ್ಚೆಗಳು ನಡೆದಿವೆ.
ಕಾಂಗ್ರೆಸ್ ಪಕ್ಷ ಬಳ್ಳಾರಿ ಮತ್ತು ವಿಜಯನಗರ ಸಾಮಾನ್ಯ ಕ್ಷೇತ್ರ ಮತ್ತು ಕೂಡ್ಲಿಗಿ ಮೀಸಲು ಕ್ಷೇತ್ರಕ್ಕೆ ಹೊಸ ಅಥವಾ ಯುವ ಮುಖಗಳನ್ನು ಪರಿಚಯಿಸಿ, ಯುವ ಮತದಾರರನ್ನು ಸೆಳೆಯಲು ನಿರ್ಧರಿಸಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಕಳೆದ ತಿಂಗಳು ಹೊಸಪೇಟೆಗೆ ಭೇಟಿ ನೀಡಿ, ಮಸ್ಕಿ ಉಪ ಚುನಾವಣಾ ಸಿದ್ಧತೆಗೆ ತೆರಳುವ ಪೂರ್ವದಲ್ಲಿ ಜಿಲ್ಲಾ ಕಾಂಗ್ರೆಸ್ ಮುಖಂಡರು ಮತ್ತು ಸ್ಪರ್ಧಾಕಾಂಕ್ಷಿಗಳ ಜೊತೆ ಖಾಸಗಿಯಾಗಿ ಚರ್ಚೆ ನಡೆಸಿ, ಹಲವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಸಿದ್ಧತೆ ನಡೆಸಲು ಮುನ್ಸೂಚನೆ ನೀಡಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ಮೂಲಗಳು ಖಚಿತಪಡಿಸಿವೆ.
"ಬಿ' ಫಾರಂ ನೀಡದೇ ಇದ್ದಲ್ಲಿ ಮುಂದೇನು?
ಸಿರುಗುಪ್ಪ ಎಸ್.ಟಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಮಾಜಿ ಶಾಸಕ ಬಿ.ಎಂ ನಾಗರಾಜ್ ಅವರು ಹೆಚ್ಚಿನ ಆಸಕ್ತಿ ತೋರಿದ್ದಾರೆ. ಈ ಬಾರಿ ಪಕ್ಷ "ಬಿ' ಫಾರಂ ನೀಡದೇ ಇದ್ದಲ್ಲಿ ಮುಂದೇನು? ಎನ್ನುವ ಕುರಿತು ಆಪ್ತರೊಂದಿಗೆ ನಿರಂತರ ಚರ್ಚೆ ನಡೆಸುತ್ತಿದ್ದಾರೆ.
ಆದರೆ, ಕಳೆದ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಲು ನಿರಾಸಕ್ತಿ ತೋರಿದ್ದೇ ಅವರಿಗೆ ಮುಳುವಾಗುವ ಸಾಧ್ಯತೆಗಳು ಹೆಚ್ಚಿವೆ. ಅಲ್ಲದೇ, ಕಳೆದ ಚುನಾವಣೆಯಲ್ಲಿ ಸೋಲನುಭವಿಸಿದ ಶಾಸಕ ಬಿ.ನಾಗೇಂದ್ರ ಅವರ ಸಂಬಂಧಿ ಬಿ.ಮುರಳಿ ಕೃಷ್ಣ ಅವರು ಟಿಕೆಟ್ಗಾಗಿ ತೀವ್ರ ಸ್ಪರ್ಧೆ ನೀಡಲಿದ್ದಾರೆ.
ಕಾರ್ಯಕರ್ತರ ಜೊತೆ ನಿರಂತರ ಸಂಪರ್ಕ
ಕುರುಗೋಡು ಎಸ್ಟಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ಜೆ.ಎನ್ ಗಣೇಶ್ ಮತ್ತು ಮಾಜಿ ಶಾಸಕ ಟಿ.ಎಚ್ ಸುರೇಶಬಾಬು ಅವರ ಸ್ಪರ್ಧೆ ಸ್ಪರ್ಧೆ ಏರ್ಪಡಲಿದೆ. ಜೆ.ಎನ್. ಗಣೇಶ್ ಅವರಿಗೆ ಕ್ಷೇತ್ರದಲ್ಲಿ ನಿರಂತರ ಸಂಚಾರ ನಡೆಸುತ್ತ ಮತದಾರರು, ಮುಖಂಡರು ಮತ್ತು ಪಕ್ಷದ ಕಾರ್ಯಕರ್ತರ ಜೊತೆ ನಿರಂತರ ಸಂಪರ್ಕ ಹೊಂದಿರಲು ಡಿ.ಕೆ. ಶಿವಕುಮಾರ್ ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ಹೇಳಲಾಗಿದೆ. ಬಳ್ಳಾರಿ ಸಾಮಾನ್ಯ ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕರಾದ ಅನಿಲ್ ಎಚ್. ಲಾಡ್, ಎನ್. ಸೂರ್ಯನಾರಾಯಣರೆಡ್ಡಿ, ಬುಡಾ ಮಾಜಿ ಅಧ್ಯಕ್ಷ ಜೆ.ಎಸ್ ಆಂಜನೇಯಲು, ಮಾಜಿ ಸಚಿವ ಎಂ.ದಿವಾಕರಬಾಬು ಅವರ ಪುತ್ರ ಎಂ.ಹನುಮಕಿಶೋರ್, ಅಲ್ಲಂ ಪ್ರಶಾಂತ್, ರಾಜ್ಯಸಭಾ ಸದಸ್ಯ ಡಾ. ಸಯ್ಯದ್ ನಾಸಿರ್, ಬುಡಾ ಮಾಜಿ ಅಧ್ಯಕ್ಷ ಹುಮಾಯೂನ್ ಖಾನ್ ಸೇರಿದಂತೆ ಅನೇಕರು ಸ್ಪರ್ಧಿಸಲು ಆಸಕ್ತಿ ಹೊಂದಿದ್ದಾರೆ.
ಹೊಸಮುಖ ಉದಯಿಸುವ ಸಾಧ್ಯತೆ
ಆದರೆ, ಅನಿಲ್ ಎಚ್. ಲಾಡ್ಗೆ ಟಿಕೆಟ್ ಸಿಗುವ ಸಾಧ್ಯತೆಗಳು ತೀರ ತೀರ ಕಡಿಮೆ ಇದೆ. ಎನ್. ಸೂರ್ಯನಾರಾಯಣರೆಡ್ಡಿ ಅವರು ಪುತ್ರ ಎನ್. ಭರತರೆಡ್ಡಿ ಅವರಿಗೆ ವಿಜಯನಗರ ಸಾಮಾನ್ಯ ವಿಧಾನಸಭಾ ಕ್ಷೇತ್ರಕ್ಕೆ ಟಿಕೆಟ್ ಕೇಳುತ್ತಿರುವ ಹಿನ್ನಲೆಯಲ್ಲಿ ಬಳ್ಳಾರಿಯಲ್ಲಿ ಸ್ಪರ್ಧಿಸುವ ಅವಕಾಶಗಳು ತೀರ ತೀರ ಕಡಿಮೆ. ಆದರೆ, ಪಕ್ಷವು "ಬಲಿಜ' ಜನಾಂಗಕ್ಕೆ ಟಿಕೆಟ್ ನೀಡಿ ರಾಜಕೀಯ ಪ್ರಾತಿನಿಧ್ಯ ಕಲ್ಪಿಸಲು ನಿರ್ಧರಿಸಿರುವ ಹಿನ್ನಲೆಯಲ್ಲಿ ಈ ಕ್ಷೇತ್ರದಲ್ಲಿ ಬಲಿಜ ಜನಾಂಗದ "ಹೊಸಮುಖ' ಉದಯಿಸುವ ಸಾಧ್ಯತೆಗಳು ಇವೆ ಎಂದೇ ಪಕ್ಷದ ಅನೇಕರು ಅಭಿಪ್ರಾಯ ವ್ಯಕ್ತಪಡಿಸುತ್ತಿದ್ದಾರೆ.
ಜಿಲ್ಲಾ ಕಾಂಗ್ರೆಸ್ ನಲ್ಲಿ ಹೊಸಮುಖ
"ಬಲಿಜ' ಜನಾಂಗಕ್ಕೆ ಟಿಕೆಟ್ ನೀಡುವ ಕುರಿತು ಡಿ.ಕೆ. ಶಿವಕುಮಾರ್ ಅವರು ಶಾಸಕ ಬಿ. ನಾಗೇಂದ್ರ, ಮಾಜಿ ಶಾಸಕ ಸಂತೊಷ್ ಎಚ್. ಲಾಡ್ ಸೇರಿದಂತೆ ಅನೇಕರ ಜೊತೆ ಪ್ರಾಥಮಿಕವಾಗಿ ವಿಷಯ ಪ್ರಸ್ತಾಪಿಸಿ, ಚರ್ಚೆ ನಡೆಸಿದ್ದಾರೆ. ಈ ನಿಟ್ಟಿನಲ್ಲಿ ಜಿಲ್ಲಾ ಕಾಂಗ್ರೆಸ್ ನಲ್ಲಿ "ಉದಯಿಸುತ್ತಿರುವ ಹೊಸಮುಖ'ದ ನಾಯಕತ್ವದ ನಿರೀಕ್ಷೆಗಳು, ಚರ್ಚೆಗಳು, ಕುತೂಹಲಗಳು ವ್ಯಾಪಕವಾಗಿ ಚರ್ಚೆಗೊಳ್ಳುತ್ತಿವೆ.
ಚಟುವಟಿಕೆಗಳು ಪುನರಾರಂಭ
ಬಳ್ಳಾರಿ ಗ್ರಾಮೀಣ ಎಸ್ಟಿ ಮೀಸಲು ಕ್ಷೇತ್ರದಲ್ಲಿ ಬಿ.ನಾಗೇಂದ್ರ ಮತ್ತು ಸಂಡೂರ ಎಸ್ಟಿ ಮೀಸಲು ಕ್ಷೇತ್ರದಲ್ಲಿ ತುಕಾರಾಂ ಅವರಿಗೆ ಬಿಜೆಪಿ ಅಭ್ಯರ್ಥಿಗಳು ತೀವ್ರ ಸ್ಪರ್ಧೆ ನೀಡಲಿದ್ದಾರೆ. ಈ ಇಬ್ಬರೂ ಮುಖಂಡರು ಜನಸಂಪರ್ಕ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ನಿರಂತರ ಪ್ರಯತ್ನಗಳು ನಡೆದಿವೆ. ವಿಜಯನಗರ ಸಾಮಾನ್ಯ ವಿಧಾನಸಭಾ ಕ್ಷೇತ್ರದಲ್ಲಿ ಎನ್. ಭರತ್ ಅವರ ಸ್ಪರ್ಧೆಗೆ ಡಿ.ಕೆ ಶಿವಕುಮಾರ್ ಹಸಿರು ನಿಶಾನೆ ತೋರಿದ್ದು, ಹೊಸ ಜಿಲ್ಲೆಯ ಅಧಿಕೃತ ಘೋಷಣೆಯ ನಂತರ ಪಕ್ಷದ ಸಂಘಟನೆ ಚಟುವಟಿಕೆಗಳು ಪುನರಾರಂಭಗೊಳ್ಳಲಿವೆ ಎಂದು ಪಕ್ಷದ ಮೂಲಗಳು ತಿಳಿಸಿವೆ.
ಆಂತರಿಕ ವರದಿಗಳ ಆಧರಿಸಿ ಟಿಕೆಟ್
ಹೂವಿನಹಡಗಲಿ ಎಸ್ಸಿ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಪಿ.ಟಿ.ಪರಮೇಶ್ವರನಾಯಕ್, ಹರಪನಹಳ್ಳಿ ಸಾಮಾನ್ಯ ವಿಧಾನಸಭಾ ಕ್ಷೇತ್ರದಲ್ಲಿ ಎಂ.ಪಿ ಪ್ರಕಾಶ್ ಅವರ ಪುತ್ರಿ, ಹಗರಿಬೊಮ್ಮನಹಳ್ಳಿ ಎಸ್ಟಿ ಮೀಸಲು ಕ್ಷೇತ್ರದಲ್ಲಿ ಭೀಮಾನಾಯಕ್ ಅವರ ಸ್ಪರ್ಧೆ ಬಹುತೇಕ ಖಚಿತ. ಆದರೆ, ಪಕ್ಷದ ಆಂತರಿಕ ವರದಿಗಳ ಆಧರಿಸಿ, ಹಾಲಿ ಶಾಸಕರಿಗೆ ಕೆಲ "ಜನಸಂಪರ್ಕ' ನಿರ್ವಹಣೆಯಲ್ಲಿ ಕೆಲ ಮಾರ್ಪಾಡುಗಳನ್ನು ಮಾಡಿಕೊಳ್ಳಲು ಸೂಚನೆ ನೀಡಿ, ಪಕ್ಷದ ಸಂಘಟನೆಗೆ ಒತ್ತು ನೀಡಲಾಗುತ್ತಿದೆ.