ಸಂಡೂರಿನ ನೂರಾರು ಎಕರೆ ಅರಣ್ಯ ಭೂಮಿಯಲ್ಲಿ ರೈತರ ಉಳುಮೆ: ಸಂಸದರಿಂದ ಅಭಯ
ಬಳ್ಳಾರಿ, ಸೆಪ್ಟೆಂಬರ್ 10: ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಎಂ.ಲಕ್ಲಹಳ್ಳಿ ಸುತ್ತಲೂ ಇರುವ ನೂರಾರು ಎಕರೆ ಅರಣ್ಯ ಭೂಮಿಯಲ್ಲಿ ರೈತರು ಉಳುಮೆ ಮಾಡುತ್ತಿರುವುದನ್ನು ಮನಗಂಡ ಅರಣ್ಯ ಇಲಾಖೆಯ ಅಧಿಕಾರಿಗಳು, ಉಳುಮೆ ಮಾಡುವುದನ್ನು ತಡೆದು ಆ ಭೂಮಿಯಲ್ಲಿ ಗಿಡ ನೆಡುವ ಕಾರ್ಯಕ್ಕೆ ಮುಂದಾಗಿದ್ದಾರೆ.
ಇದರಿಂದ ನೂರಾರು ರೈತ ಕುಟುಂಬಗಳು ಬೀದಿ ಪಾಲಾಗುವುದನ್ನು ಸೂಕ್ಷ್ಮವಾಗಿ ಅರಿತುಕೊಂಡ ಬಳ್ಳಾರಿಯ ಸಂಸದ ವೈ.ದೇವೇಂದ್ರಪ್ಪ, ಕೂಡಲೇ ಎಂ.ಲಕ್ಲಹಳ್ಳಿ ಗ್ರಾಮಕ್ಕೆ ಭೇಟಿ ಕೊಟ್ಟು, ರೈತರನ್ನು ಒಕ್ಕಲೆಬ್ಬಿಸುವುದು ಬೇಡ ಎಂದು ಅರಣ್ಯ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.
ಸತತ 60 ವರ್ಷಗಳಿಂದಲೂ ಈ ಭೂಮಿಯಲ್ಲಿ ರೈತರು ಉಳುಮೆ ಮಾಡುತ್ತಾ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಈಗ ದಿಢೀರನೆ ಉಳುಮೆ ಮಾಡೋದನ್ನು ಬಿಡಿಸಿ ಗಿಡ-ಮರಗಳನ್ನು ನೆಡಲು ಮುಂದಾಗಿರುವುದು ತರವಲ್ಲ ಎಂದು ಸಂಸದರು ಹೇಳಿದರು.
ಈ ಸಂಬಂಧ ಅರಣ್ಯ ಸಚಿವ ಆನಂದಸಿಂಗ್ ಅವರೊಂದಿಗೆ ಚರ್ಚಿಸಿ, ಅರಣ್ಯ ಇಲಾಖೆಯ ಸುಪರ್ದಿಗೆ ಒಳಪಡುವ ಈ ಭೂಮಿಯನ್ನ ರೈತರ ಉಳುಮೆಗೆ ಅವಕಾಶ ನೀಡುವಂತೆ ಕೋರುವೆ. ಅಂದಾಜು 150 ಎಕರೆಯ ಭೂಮಿಯಲ್ಲಿ ನಾನಾ ಬೆಳೆಗಳನ್ನು ರೈತರು ಬೆಳೆಯುತ್ತಿದ್ದಾರೆ ಎಂದರು.
ಹೀಗಾಗಿ, ಅರಣ್ಯ ಅಧಿಕಾರಿಗಳು ರೈತರೊಂದಿಗೆ ಗೌರವಯುತವಾಗಿ ನಡೆದುಕೊಳ್ಳಬೇಕು. ನಾನು ಸಚಿವರೊಂದಿಗೆ ಚರ್ಚಿಸಿ ಉಳುಮೆ ಮಾಡಲು ಅವಕಾಶ ಕಲ್ಪಿಸಿಕೊಡುವುದಾಗಿ ಅಲ್ಲಿ ನೆರೆದಿದ್ದ ರೈತರಿಗೆ ಸಂಸದ ವೈ.ದೇವೇಂದ್ರಪ್ಪ ಭರವಸೆ ನೀಡಿದರು.