ರಾಜಕೀಯ ಉದ್ದೇಶದಿಂದ ಬಳ್ಳಾರಿ ಜಿಲ್ಲೆ ವಿಭಜನೆಯಾಗಿಲ್ಲ: ಆಕ್ಷೇಪಣೆ ಸಲ್ಲಿಸಲು ಮುಕ್ತ ಅವಕಾಶ
ಬಳ್ಳಾರಿ, ನವೆಂಬರ್ 29: ಬಳ್ಳಾರಿ ಜಿಲ್ಲಾ ವಿಭಜನೆ ವಿಚಾರಕ್ಕೆ ಆಕ್ಷೇಪಣೆ ಇದ್ದರೆ ಸಲ್ಲಿಸಬಹುದು. ಸಚಿವ ಸಂಪುಟದಲ್ಲಿ ತೀರ್ಮಾನ ತೆಗೆದುಕೊಂಡು ಒಂದು ತಿಂಗಳವರೆಗೂ ಆಕ್ಷೇಪಣೆ ಸಲ್ಲಿಸಲು ಎಲ್ಲರಿಗೂ ಮುಕ್ತ ಅವಕಾಶ ಇದೆ ಎಂದು ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಆನಂದ್ ಸಿಂಗ್ ಹೇಳಿದ್ದಾರೆ.
ಬಳ್ಳಾರಿಯ ಬಿಜೆಪಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ವಿಭಜನೆ ಮಾಡಿದ್ದೇವೆ. ಸೋಮಶೇಖರ ರೆಡ್ಡಿ ಅವರು ಭಾವನಾತ್ಮಕವಾಗಿ ಮಾತನಾಡುತ್ತಾರೆ ಎಂದಿದ್ದಾರೆ.
ವಿಜಯನಗರ ಜಿಲ್ಲೆ ಘೋಷಣೆ; ಪರಿಣಾಮದ ಬಗ್ಗೆ ಸೋಮಶೇಖರ ರೆಡ್ಡಿ ಎಚ್ಚರಿಕೆ
ರಾಜಕೀಯ ಉದ್ದೇಶದಿಂದ ಜಿಲ್ಲೆ ವಿಭಜನೆಯಾಗಿಲ್ಲ. ಜನಾಭಿಪ್ರಾಯದಿಂದ ವಿಭಜನೆ ಮಾಡಿದ್ದೇವೆ. ಪಶ್ಚಿಮ ತಾಲೂಕಿನ ಜನರ ಸಮಸ್ಯೆ ಕೇಳಿ ಅವರ ತೊಂದರೆ ಎಷ್ಟಿದೆ ಗೊತ್ತಾ? ಬಳ್ಳಾರಿ ಮೇಲೆ ಪ್ರೀತಿ ಇರೋದಕ್ಕೆ ನಾವು ಜಿಲ್ಲೆ ವಿಭಜನೆ ಮಾಡಿದ್ದೇವೆ. ಯಾರೂ ಅತಂಕ ಪಡುವ ಅಗತ್ಯ ಇಲ್ಲ ಎಂದರು.
ಇದೇ ವೇಳೆ ಗ್ರಾಮಸ್ವರಾಜ್ ಕಾರ್ಯಕ್ರಮ ಉದ್ಘಾಟಿಸಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಮಾತನಾಡಿ, ಹಳ್ಳಿಯಿಂದ ದಿಲ್ಲಿವರೆಗೂ ಪಕ್ಷದ ಕಾರ್ಯಕರ್ತರು ಇದ್ದಾರೆ. ಪಕ್ಷ ಸಂಘಟನೆಗೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಬಿಜೆಪಿಯ ಕೇಂದ್ರ ಹಾಗೂ ರಾಜ್ಯದ ಜನಪರ ಕಾರ್ಯಕ್ರಮದ ವಿವರಣೆ ನೀಡಿದ ಸವದಿ, ಗ್ರಾಮ ಪಂಚಾಯತಿ ಚುನಾವಣೆಯನ್ನು ಬಿಜೆಪಿ ಗಂಭೀರವಾಗಿ ಪರಿಗಣಿಸಿದೆ. ಬಳ್ಳಾರಿಯಲ್ಲಿರುವ 237 ಗ್ರಾಮ ಪಂಚಾಯತಿಯಲ್ಲಿ ಬಿಜೆಪಿ ಬಾವುಟ ಹಾರಿಸಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪಕ್ಷದಲ್ಲಿ ಯಾವುದೇ ಭಿನ್ನಾಭಿಪ್ರಾಯ ಭಿನ್ನಮತವಿಲ್ಲ, ರೆಕ್ಕೆಪುಕ್ಕ ಕಟ್ಟಿ ಗಾಳಿ ಸುದ್ದಿ ಹಬ್ಬಿಸಲಾಗಿದೆ. ಯಡಿಯೂರಪ್ಪ ಅವರು ಮುಂದಿನ ಎರಡು ವರ್ಷ ಮುಖ್ಯಮಂತ್ರಿಯಾಗಿರುತ್ತಾರೆ. ಭಿನ್ನಮತದ ಬಗ್ಗೆ ಯಾವುದೇ ದಾಖಲೆ ಇಲ್ಲ, ಇದ್ದರೆ ಕೊಡಿ ಉತ್ತರ ಕೊಡ್ತೇನೆ ಎಂದು ತಿಳಿಸಿದರು.
ಸಚಿವ ಸಂಪುಟ ವಿಸ್ತರಣೆ ವಿಚಾರವಾಗಿ ಮಾತನಾಡಿದ ಡಿಸಿಎಂ ಸವದಿ, ರಾಜಕೀಯ ಲೆಕ್ಕಾಚಾರ ಬೇರೆಯಾಗಿದ್ದು, ಯಾರಿನ್ನು ಮಂತ್ರಿ ಮಾಡಬೇಕು ಎಂದು ಸಿಎಂ ನಿರ್ಧಾರ ಮಾಡುತ್ತಾರೆ. ವಿಶ್ವನಾಥ್ ಸೇರಿದಂತೆ ಹದಿನೇಳು ಜನರು ಬಂದಿದ್ದಕ್ಜೆ ನಮ್ಮ ಸರ್ಕಾರ ಬಂದಿದೆ. ರಾಷ್ಟ್ರೀಯ ಪಕ್ಷವಗಿದ್ದರಿಂದ ಎಲ್ಲದಕ್ಕೂ ಸಮಯವಿದೆ ಎಂದರು.
ಮೂಲ ಮತ್ತು ವಲಸೆ ಎನ್ನುವುದಿಲ್ಲ, ವಿಸ್ತರಣೆ ಅಥವಾ ಪುನರ್ ರಚನೆ ಬಗ್ಗೆ ಸಿಎಂ ಹಾಗೂ ಹೈಕಮಾಂಡ್ ತೀರ್ಮಾನ ಮಾಡುತ್ತಾರೆ. ಎಚ್.ವಿಶ್ವನಾಥ್ ಅವರ ಹೇಳಿಕೆ ವೈಯಕ್ತಿಕ. ಅದು ಪಕ್ಷದ ವ್ಯಾಪ್ತಿಯಲ್ಲಿ ಬರೋದಿಲ್ಲ ಎಂದು ಸ್ಪಷ್ಟಪಡಿಸಿದರು.
ನಾವೇನು ಪಾಕಿಸ್ತಾನ-ಇಂಡಿಯಾದವರಾ, ಒಂದೇಡೆ ಸೇರಿದರೆ ತಪ್ಪಾ? ಊಟ ಮಾಡಿದರೆ ತಪ್ಪೇನು ಎಂದು ಡಿಸಿಎಂ ಲಕ್ಷ್ಮಣ ಸವದಿ ಪ್ರಶ್ನಿಸಿದರು. ಸಿಎಂ ರಾಜಕೀಯ ಕಾರ್ಯದರ್ಶಿ ಸಂತೋಷ ಅವರ ವೈಯಕ್ತಿಕ ವಿಚಾರದ ಬಗ್ಗೆ ಯಾರು ಚರ್ಚೆ ಮಾಡಬಾರದು. ಇದು ಡಿಕೆ ಶಿವಕುಮಾರ್ ಅವರಿಗೂ ಶೋಭೆ ತರುವಂತದ್ದಲ್ಲ ಎಂದು ತಿಳಿಸಿದರು.
ಬೆಳಗಾವಿ ವಿಭಜನೆಗೆ ತಾಂತ್ರಿಕ ತೊಂದರೆ ಇದ್ದು, ಮಹಾರಾಷ್ಟ್ರ ಗಡಿ ತಂಟೆ ಇರುವುದರಿಂದ ಹೀಗಾಗಿ ವಿಭಜನೆ ಮಾಡುವುದಕ್ಕೆ ಆಗಲ್ಲ ಎಂದರು.