ಬಳ್ಳಾರಿ ಡಿಸಿ ಮುತುವರ್ಜಿ; 4 ವರ್ಷದ ಬಳಿಕ ಮನೆ ಸೇರಿದ ವ್ಯಕ್ತಿ
ಬಳ್ಳಾರಿ, ಆಗಸ್ಟ್ 12 : ಮಾನಸಿಕ ಅಸ್ವಸ್ಥನಾಗಿ ಬಳ್ಳಾರಿ ಬಿಟ್ಟು ಹೋಗಿದ್ದ ವ್ಯಕ್ತಿಯೊಬ್ಬ ಆರೋಗ್ಯಯುತವಾಗಿ 4 ವರ್ಷದ ಬಳಿಕ ಮನೆ ಸೇರಿದ್ದಾರೆ. ಬಳ್ಳಾರಿ ಜಿಲ್ಲಾಧಿಕಾರಿ ಎಸ್. ಎಸ್. ನಕುಲ್ ಅವರ ಮುತುವರ್ಜಿ ಇದಕ್ಕೆ ಕಾರಣ.
ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ನಾಗಲಾಪುರ ಗ್ರಾಮದ ವ್ಯಕ್ತಿಯೊಬ್ಬರು ಮಾನಸಿಕ ಅಸ್ವಸ್ಥತೆಯಿಂದ ಬಳಲುತ್ತಿದ್ದರು. 4 ವರ್ಷಗಳ ಹಿಂದೆ ಲಾರಿ ಹತ್ತಿ ಪಶ್ಚಿಮ ಬಂಗಾಳದ ತಲುಪಿದ್ದರು.
ಯುವತಿಯನ್ನು ಆಸ್ಪತ್ರೆಗೆ ಸೇರಿಸಿ ಮಾನವೀಯತೆ ಮೆರೆದ ಸಚಿವ ಸಿ.ಟಿ ರವಿ
ಅಲ್ಲಿ ಬೀದಿ ಬೀದಿ ಅಲೆದಾಡುತ್ತಿದ್ದ ವ್ಯಕ್ತಿ ಇಂದು ಆರೋಗ್ಯಯುತವಾಗಿ ಮನೆಗೆ ವಾಪಸ್ ಆಗಿದ್ದಾರೆ. ವ್ಯಕ್ತಿಯನ್ನು ವಾಪಸ್ ಕರೆತರಲು ಬಳ್ಳಾರಿ ಜಿಲ್ಲಾಧಿಕಾರಿ ಎಸ್.ಎಸ್.ನಕುಲ್ ಅವರ ಮುತುವರ್ಜಿ ಮತ್ತು ಮಾನವೀಯತೆ ಕಾರಣವಾಗಿದೆ.
ಉಡುಪಿ ಪುಟಾಣಿಯ ಈ ಮಾನವೀಯ ಕಳಕಳಿಗಿರಲಿ ಮೆಚ್ಚುಗೆ
ಪಶ್ಚಿಮ ಬಂಗಾಳದ ಮಾಲ್ಡಾ ತಲುಪಿದ್ದ ವ್ಯಕ್ತಿ ಅಲ್ಲಿ ಬೀದಿಯಲ್ಲಿ ಅಲೆದಾಡಿದ್ದ. ಕೈ-ಕಾಲುಗಳಿಗೆಲ್ಲ ಗಾಯ ಮಾಡಿಕೊಂಡಿದ್ದ. ಒಂದು ಹೊತ್ತಿನ ಊಟಕ್ಕೂ ಪರಿತಪಿಸುತ್ತಿದ್ದ. ಎಲ್ಲಿ ಇದ್ದೇನೆ? ಎಂಬ ಅರಿವೇ ಇಲ್ಲದೆ ಅಲೆದಾಡಿದ್ದ.
ವಿಶೇಷ ಫೋಟೋ ಜೊತೆ ಮಾನವೀಯತೆ ಕರೆ ಕೊಟ್ಟ ಬಿಎಸ್ವೈ
ವೆಂಕಟೇಶ ಎಂಬ ವ್ಯಕ್ತಿ ಹುಚ್ಚನಂತೆ ಅಲೆದಾಡುತ್ತಿದ್ದುದನ್ನು ಗಮನಿಸಿದ್ದ ಸ್ವಯಂ ಸೇವಾ ಸಂಸ್ಥೆಯೊಂದು ಅವರನ್ನು ಕರೆದುಕೊಂಡು ಹೋಗಿ ಸೂಕ್ತ ಚಿಕಿತ್ಸೆ ನೀಡಿ ಆರೈಕೆ ಮಾಡಿತ್ತು. ಇದನ್ನು ಅಲ್ಲಿನ ಸ್ಥಳೀಯ ಮಾಲ್ಡಾ ಜಿಲ್ಲಾಧಿಕಾರಿಗಳಿಗೆ ಎನ್ಜಿಒ ಪ್ರಮುಖರು ತಿಳಿಸಿದ್ದರು.
ಮಾಲ್ಡಾ ಜಿಲ್ಲಾಧಿಕಾರಿಗಳ ಮೂಲಕ ಬಳ್ಳಾರಿ ಜಿಲ್ಲಾಧಿಕಾರಿಗಳಿಗೆ ವಿಷಯ ತಿಳಿಯಿತು. ಕಾರ್ಯಪ್ರವೃತ್ತರಾದ ಎಸ್.ಎಸ್.ನಕುಲ್ ಅವರು ಮಾಲ್ಡಾ ಡಿಸಿ ಅವರ ಮೂಲಕ ಎನ್ಜಿಒ ಸಂಪರ್ಕಿಸಿ ವೆಂಕಟೇಶನಿಗೆ ಸೂಕ್ತ ಚಿಕಿತ್ಸೆ ಸಿಗುವಂತೆ ನೋಡಿಕೊಂಡರು ಮತ್ತು ಅದಕ್ಕೆ ಬೇಕಾಗುವ ಖರ್ಚು ಭರಿಸಿದರು.
ವೆಂಕಟೇಶನ ಆರೋಗ್ಯ ನಿಧಾನವಾಗಿ ಸುಧಾರಿಸಿತು. ಆರೋಗ್ಯ ಸುಧಾರಿಸಿದ ನಂತರ ಮಾಲ್ಡಾ ಜಿಲ್ಲಾಡಳಿತ ಹಾಗೂ ಎನ್ಜಿಒ ಸಹಕಾರದೊಂದಿಗೆ ಮಾಲ್ಡಾದಿಂದ ಕೋಲ್ಕತ್ತಾ ವಿಮಾನ ನಿಲ್ದಾಣಕ್ಕೆ ಕರೆತರಲಾಯಿತು. ಕೋಲ್ಕತ್ತಾದಿಂದ ಬಳ್ಳಾರಿ ಜಿಲ್ಲಾಡಳಿತದ ವೆಚ್ಚದಡಿ ಬೆಂಗಳೂರಿನ ವಿಮಾನ ನಿಲ್ದಾಣಕ್ಕೆ ಗುರುವಾರ ವೆಂಕಟೇಶ್ ಬಂದಿದ್ದಾರೆ.
ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ವೆಂಕಟೇಶನ ಸಹೋದರಿಬ್ಬರು ವೆಂಕಟೇಶನನ್ನು ಆತ್ಮೀಯವಾಗಿ ಬರಮಾಡಿಕೊಂಡರು. ಸಹೋದರರಿಬ್ಬರ ಮಿಲನ ಮತ್ತು ಸಂತೋಷ, ಆನಂದಭಾಷ್ಪಕ್ಕೆ ವಿಮಾನನಿಲ್ದಾಣ ಸಾಕ್ಷಿಯಾಯಿತು.
ಜಿಲ್ಲಾಧಿಕಾರಿಗಳು ವಿಶೇಷ ಕಾರಿನ ವ್ಯವಸ್ಥೆ ಮಾಡಿ ಕಂದಾಯ ಇಲಾಖೆಯ ಅಧಿಕಾರಿಗಳು ಮತ್ತು ಸಹೋದರರ ಮೂಲಕ ವೆಂಕಟೇಶನನ್ನು ಸಂಡೂರು ತಾಲೂಕಿನ ನಾಗಲಾಪುರಕ್ಕೆ ಕರೆತಂದಿದ್ದಾರೆ. ಜಿಲ್ಲಾಡಳಿತದ ಕಾರ್ಯಕ್ಕೆ ವೆಂಕಟೇಶನ ಕುಟುಂಬ ಹಾಗೂ ಇಡೀ ಜಿಲ್ಲೆಯ ಜನರು ಮೆಚ್ಚುಗೆ ಸೂಚಿಸಿದ್ದಾರೆ.