ಹಂಪಿ: ಜಾನಪದ ಸಿರಿಯನ್ನು ಅನಾವರಣಗೊಳಿಸಿದ ಶೋಭಾಯಾತ್ರೆ
ಬಳ್ಳಾರಿ.ನವೆಂಬರ್, 3: ಹಂಪಿ ಉತ್ಸವ ಉದ್ಘಾಟನೆಗೂ ಮುನ್ನ ವಿರೂಪಾಕ್ಷೇಶ್ವರ ದೇವಸ್ಥಾನದಿಂದ ಆರಂಭವಾಗಿ ಪ್ರಧಾನ ವೇದಿಕೆವರೆಗೆ ಸಾಗಿದ ಶೋಭಾಯಾತ್ರೆಯ ಮೆರವಣೆಗೆ ನಾಡಿನ ಜಾನಪದ ಸಿರಿಯನ್ನು ಅನಾವರಣಗೊಳಿಸಿತು.
ಸಂಜೆ ದಿನಕರ ತಾಯಿಯ ಮಡಿಲನ್ನು ಸೇರುವ ತವಕದಲ್ಲಿದ್ದಾಗ, ಇತ್ತ ಹಂಪಿಯ ವಿರೂಪಾಕ್ಷೇಶ್ವರ ದೇವಸ್ಥಾನದ ಬಳಿಯ ಬೀದಿಯ ಉದ್ದಕ್ಕೂ ಶೋಭಾಯಾತ್ರೆಯ ಸಂಭ್ರಮ ಮುಗಿಲುಮುಟ್ಟಿತ್ತು.
ಸಾಂಪ್ರಾದಾಯಿಕ ನಾದಸ್ವರದೊಂದಿಗೆ ಸುಮಂಗಳಿಯರು ಮಂಗಳಾರತಿ ಬೆಳಗುವುದರ ಮೂಲಕ ಹಂಪಿ ಉತ್ಸವಕ್ಕೆ ಸ್ವಾಗತಿಸಿದರು. ನಾಡಿನ ವಿವಿಧ ಭಾಗಗಳಿಂದ ಬಂದಿದ್ದ 25ಕ್ಕೂ ಹೆಚ್ಚು ಕಲಾ ತಂಡಗಳು ವಿವಿಧ ಪ್ರಕಾರಗಳನ್ನು ಪ್ರದರ್ಶಿಸುತ್ತಾ ಮುಖ್ಯ ವೇದಿಕೆಯ ಬಳಿ ಸಾಗಿದವು.
ಶೋಭಾಯಾತ್ರೆಯ ಮೆರವಣೆಗೆಗೆ ಹಸಿರು ಮತ್ತು ಹಳದಿ ಸೀರೆಯನ್ನುಟ್ಟುಕೊಂಡು 1001 ಮಹಿಳೆಯರು ಪೂರ್ಣಕುಂಭ ಹೊತ್ತು ಮೆರವಣೆಗೆಯಲ್ಲಿ ಸಾಗುತ್ತಿದ್ದ ದೃಶ್ಯ ರಮಣೀಯವಾಗಿತ್ತು. ಶೋಭಾಯಾತ್ರೆಯ ಮುಂಭಾಗದಲ್ಲಿ ಕಹಳೆ ವಾದನವು ಉತ್ಸವದ ಆರಂಭಕ್ಕೆ ಶುಭ ಕೋರಿದಂತಿತ್ತು.
ಯಾತ್ರೆಯಲ್ಲಿ ಸಾಗಿಬಂದ ವೀರಗಾಸೆ, ಡೊಳ್ಳು ಕುಣಿತ, ಹಲಗೆ ವಾದನ, ಕಹಳೆ ವಾದನ, ನಂದಿಧ್ವಜ ಪ್ರದರ್ಶನ ವಿಜಯನಗರ ಸಾಮ್ರಾಜ್ಯದಲ್ಲಿ ಶ್ರೀ ಕೃಷ್ಣದೇವರಾಯನ ಒಡ್ಡೋಲಗವೇ ಸಾಗುತ್ತಿರುವಂತೆ ನೋಡುಗರನ್ನು ವರ್ತಮಾನದಿಂದ ಇತಿಹಾಸಕ್ಕೆ ಎಳೆದೊಯ್ಯುವಂತೆ ಭಾಸವಾಯಿತು.
ಜಾನಪದ ಐಸಿರಿಯನ್ನು ಜನಸಾಮಾನ್ಯರು ತಮ್ಮ ಕಣ್ಣಲ್ಲಿ ತುಂಬಿಕೊಳ್ಳಲು ರಸ್ತೆಯ ಇಕ್ಕೆಲಗಳಲ್ಲಿ ನೆರೆದಿರುವ ದೃಶ್ಯವನ್ನು ನೋಡಲು ಎರಡು ಕಣ್ಣು ಸಾಲದಾಗಿತ್ತು.
ಮೇಳಿಸಿದ ಕಲಾ ಪ್ರಕಾರಗಳು
ಕೊಟ್ಟೂರದ ರೇವಣಸಿದ್ದ ಮತ್ತು ಸಂಗಡಿಗರ ನಂದಿಧ್ವಜ, ಬಳ್ಳಾರಿಯ ಎಂ.ಗುರುಸ್ವಾಮಿ ಮತ್ತು ಸಂಗಡಿಗರ ನಾದಸ್ವರ, ತಾರನಗರದ ಚಂದ್ರಯ್ಯಸ್ವಾಮಿ ಮತ್ತು ಸಂಗಡಿಗರ ವೀರಗಾಸೆ ಮರಿಯಮ್ಮನಳ್ಳಿಯ ಎಲ್.ರಾಮಾಂಜಿನಿ ಮತ್ತು ಸಂಗಡಿಗರ ಹಲಗೆ ವಾದನ ಮತ್ತು ವಸಂತಕುಮಾರ ತಂಡದ ಕಹಳೆ ವಾದನ ಅದ್ಭುತವಾಗಿತ್ತು.
ಕಣ್ಮನ ಸೆಳೆದ ಕಲಾ ತಂಡಗಳು
ಬಸವರಾಜ ಗೌರಾಪುರ ತಂಡದ ಮಹಿಳಾ ವೀರಗಾಸೆ,ತಾಷರಂಡೋಲು, ಮರಗಾಲು ಕುಣಿತ, ಡೊಳ್ಳು ಕುಣಿತ, ಗೊರವರ ಕುಣಿತ, ಪೂಜಾ ಕುಣಿತ, ಕರಡಿ ಮಜಲು, ಪುರವಂತಿಕೆ, ಚಿಟ್ಟಿಮೇಳ, ಕಂಗೀಲು ನೃತ್ಯ, ದಟ್ಟಿಕುಣಿತ, ಜಗ್ಗಲಗಿ, ಹಗಲುವೇಷ, ಗಾರುಡಿಗೊಂಬೆ, ವೀಕ್ಷಕರ ಕಣ್ಮನ ಸೆಳೆಯಿತು ಮತ್ತು ಈ ತಂಡಗಳು ತಮ್ಮ ಪ್ರತಿಭೆಯನ್ನು ಅನಾವರಣಗೊಳಿಸಿದವು.
ಶೋಭಾಯಾತ್ರೆಯನ್ನು ಮೊಬೈಲ್ ಕ್ಲಿಕ್ಕಿಸಿಕೊಂಡ ಯುವ ಸಮುದಾಯ
ಮೆರವಣೆಗೆಲ್ಲಿ ಕೋಲಾಟ,ಕರಡಿ ಮಜಲು, ಸೋಮನ ಕುಣಿತ, ಗಾರುಡಿಗೊಂಬೆ ತಂಡಗಳ ಕಲಾವಿದರು ಸಹ ಅದ್ಭುತ ಪ್ರದರ್ಶನ ನೀಡಿದರು. ಮೆರವಣಿಗೆಯನ್ನು ಸ್ಮರಣೀಯವಾಗಿಸಿಕೊಳ್ಳಲು, ಕೆಲವರು ತಮ್ಮ ಮೊಬೈಲ್ಗಳಿಂದ ವೀಡಿಯೋ ಮತ್ತು ಭಾವಚಿತ್ರಗಳನ್ನು ಕ್ಲಿಕ್ಕಿಸಿಕೊಳ್ಳುತ್ತಿದ್ದರೆ, ಹಲವರು ಮೆರವಣೆಗೆಯಲ್ಲಿ ತಾವೂ ಸಾಗುತ್ತ ವಿಡಿಯೋ ದೃಶ್ಯ ಚಿತ್ರೀಕರಿಸಿಕೊಳ್ಳುತ್ತಿದ್ದು ಕಂಡುಬಂದಿತು. ಅನೇಕರು ತಂಡಗಳೊಂದಿಗೆ ಸೆಲ್ಪಿ ಕ್ಲಿಕ್ಕಿಸಿ ಖುಷಿಪಟ್ಟರು.
ಗಮನ ಸೆಳೆದ ಶ್ರೀಧರ ಸಾಗರ್ ಸ್ಯಾಕ್ಸೋಫೋನ್ ಸಂಗೀತ
ಬಳ್ಳಾರಿ ಜಿಲ್ಲೆಯ ವಿಶ್ವವಿಖ್ಯಾತ ಹಂಪಿಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ಹಂಪಿ ಉತ್ಸವ-2016ರ ಅಂಗವಾಗಿ ಎದುರು ಬಸವಣ್ಣ ವೇದಿಕೆಯಲ್ಲಿ ಬೆಂಗಳೂರಿನ ಶ್ರೀಧರ ಸಾಗರ ಸ್ಯಾಕ್ಸೋಫೋನಿನಲ್ಲಿ ಸಂಗೀತದ ಮಜಲುಗಳು ಒಡಮೂಡಿದವು.
ಸ್ಯಾಕ್ಸೋಫೋನ್ ನಲ್ಲಿ ಮೂಡಿಬಂದ ಸುಶ್ರಾವ್ಯ ಗೀತೆಗಳು
ಹಂಪಿ ಉತ್ಸವದಲ್ಲಿ ಶ್ರೀಧರ ಸಾಗರ್ ಅವರ ಸ್ಯಾಕ್ಸೋಫೋನ್ ನಿಂದ "ಜೋಗದ ಸಿರಿ ಬೆಳಕಿನಲ್ಲಿ.....", "ಸಿರಿವಂತನಾದರೂ ಕನ್ನಡ ನಾಡಲ್ಲಿ.....", "ಕೋಡಗನ ಕೋಳಿ ನುಂಗಿತ್ತ ತಂಗಿ ಕೋಡಗನ....", "ಜೇನಿನ ಹೊಳೆಯೋ ಹಾಲಿನ ಹೊಳೆಯೋ....", "ಭಾಗ್ಯದ ಲಕ್ಷ್ಮೀ ಬಾರಮ್ಮ ನಮ್ಮಮ್ಮ ಮನೆಗೆ..." ಮುಂತಾದ ಕನ್ನಡದ ಪ್ರಖ್ಯಾತ ಕವಿಗಳ ಹಾಗೂ ಚಲನಚಿತ್ರದ ಹಾಡುಗಳನ್ನು ಅತ್ಯಂತ ಸುಶ್ರಾವ್ಯವಾಗಿ ಕೇಳುಗರ ಹೃದಯ ಸೂರೆಗೊಂಡವು
ಗಣ್ಯರ ಉಪಸ್ಥಿತಿ
ಶೋಭಾಯಾತ್ರೆಯಲ್ಲಿ ಸಹಾಯಕ ಆಯುಕ್ತ ಅವಿನಾಶ ಮೆನನ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಉಪನಿರ್ದೇಶಕ ಬಿ.ಎಸ್.ಕಲಾದಗಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಬಿ.ನಾಗರಾಜ ಸೇರಿದಂತೆ ಅನೇಕ ಗಣ್ಯಾತಿಗಣ್ಯರು ಶೋಭಾಯಾತ್ರೆಯ ಸಂದರ್ಭದಲ್ಲಿ ಇದ್ದರು.