ಸಿದ್ದರಾಮಯ್ಯಗೆ ಮಾನ ಮರ್ಯಾದೆ ಇಲ್ಲ: ಜನಾರ್ದನ ರೆಡ್ಡಿ ಗುಡುಗು
Recommended Video
ಬಳ್ಳಾರಿ, ಅಕ್ಟೋಬರ್ 29: ಇತ್ತೀಚೆಗೆ ತಮ್ಮ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಜನಾರ್ದನ ರೆಡ್ಡಿ ಪ್ರತಿ ವಾಗ್ದಾಳಿ ನಡೆಸಿದ್ದಾರೆ.
ಬಳ್ಳಾರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಜನಾರ್ದನ ರೆಡ್ಡಿ, ಗಣಿ ಅಕ್ರಮಕ್ಕೆ ಸಂಬಂಧಿಸಿದಂತೆ ಸಿದ್ದರಾಮಯ್ಯ ಮತ್ತು ರಾಹುಲ್ ಗಾಂಧಿ ನೀಡಿರುವ ವಿರೋಧಾಭಾಸದ ಹೇಳಿಕೆಗಳನ್ನು ಪ್ರಸ್ತಾಪಿಸಿದರು.
ರೆಡ್ಡಿ ಸಹೋದರರು ನನ್ನ ಮೇಲೆ ಗೂಂಡಾಗಳನ್ನು ಬಿಟ್ಟಿದ್ದರು: ಸಿದ್ದರಾಮಯ್ಯ
ಅಕ್ರಮ ಗಣಿಗಾರಿಕೆಯ ಆರೋಪಿಗಳ ಜತೆಯಲ್ಲಿಯೇ ಸಿದ್ದರಾಮಯ್ಯ ಓಡಾಡಿಕೊಂಡು ತಮ್ಮ ವಿರುದ್ಧ ಆರೋಪ ಮಾಡುತ್ತಿದ್ದಾರೆ ಎಂದು ದೂರಿದ ಅವರು, ಡಿಕೆ ಶಿವಕುಮಾರ್ ಅವರ ಮನೆಯಲ್ಲಿ ಅಕ್ರಮ ಹಣ ಪತ್ತೆಯಾಗಿದ್ದರೂ ಕಾಂಗ್ರೆಸ್ಸಿಗರು ಮೌನ ವಹಿಸಿದ್ದಾರೆ ಎಂದು ಚಾಟಿ ಬೀಸಿದರು.
ತಮ್ಮ ಮನೆ ಮತ್ತು ಸಂಬಂಧಿಕರ ಮನೆಗಳ ಮೇಲೆ ಸತತ ದಾಳಿ ನಡೆಸಿದರೂ ಅಕ್ರಮ ಹಣ ಎಲ್ಲಿಯೂ ಪತ್ತೆಯಾಗಲಿಲ್ಲ. ಆದರೆ, ಡಿಕೆ ಶಿವಕುಮಾರ್ ಅವರ ದೆಹಲಿಯಲ್ಲಿರುವ ಮನೆಯಲ್ಲಿ ಕೋಟ್ಯಂತರ ರೂಪಾಯಿ ಪತ್ತೆಯಾಗಿದೆ ಎಂದು ಆರೋಪಿಸಿದರು.
ನನ್ನ ಹೆಸರಿನಲ್ಲಿ ಅಕ್ರಮ
ನನ್ನ ಹೆಸರಿನಲ್ಲಿ ಆನಂದ್ ಸಿಂಗ್ ಮತ್ತು ನಾಗೇಂದ್ರ ಅಕ್ರಮ ಗಣಿಗಾರಿಕೆ ನಡೆಸಿದ್ದರು. ಈ ಪ್ರಕರಣದಲ್ಲಿ ಅವರೇ ಪ್ರಮುಖ ಆರೋಪಿಗಳು. ನಿಮ್ಮ ಎಡ-ಬಲಲ್ಲಿ ಆನಂದ್ ಸಿಂಗ್ ಮತ್ತು ನಾಗೇಂದ್ರ ಅವರನ್ನು ಕೂರಿಸಿಕೊಂಡು ನನ್ನ ವಿರುದ್ಧ ಅಕ್ರಮ ಗಣಿಗಾರಿಕೆ ಆರೋಪ ಮಾಡಿದ್ದೀರಿ. ಸಿದ್ದರಾಮಯ್ಯ ಅವರೇ ನಿಮಗೆ ಮಾನ ಮರ್ಯಾದೆ ಇದೆಯೇ? ಎಂದು ಕರ್ನಾಟಕ ರಾಜ್ಯದ ಜನರ ಪರವಾಗಿ ಕೇಳಬೇಕಾಗಿದೆ ಎಂದು ರೆಡ್ಡಿ ಹೇಳಿದರು.
ಶಾಸಕ ಆನಂದ್ ಸಿಂಗ್, ಬಿ.ನಾಗೇಂದ್ರ ವಿರುದ್ಧ ಜಾಮೀನು ರಹಿತ ವಾರೆಂಟ್
ನಿಜವಾದ ಮೊತ್ತ ಎಷ್ಟು?
ನಾನು ಗಣಿಗಾರಿಕೆಯಲ್ಲಿ ಒಂದು ಲಕ್ಷ ಕೋಟಿ ರೂ ಹಣ ಲೂಟಿ ಮಾಡಿದ್ದೇನೆ ಎಂದು ಸಿದ್ದರಾಮಯ್ಯ ಆರೋಪಿಸಿದ್ದಾರೆ. ಇದಕ್ಕೂ ಮುನ್ನ ಚನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಫೇಸ್ಬುಕ್ನಲ್ಲಿ 25 ಸಾವಿರ ಕೋಟಿ ಹಣ ಲೂಟಿ ಮಾಡಿದ್ದಾರೆ ಎಂದು ಬರೆದುಕೊಂಡಿದ್ದರು. ರಾಹುಲ್ ಗಾಂಧಿ ಅವರು ತಮ್ಮ ಟ್ವಿಟ್ಟರ್ ಅಕೌಂಟ್ನಲ್ಲಿ ಈ ಮೊತ್ತವನ್ನು 35 ಸಾವಿರ ಕೋಟಿ ಹಣ ಎಂದು ಉಲ್ಲೇಖಿಸಿದ್ದಾರೆ ಎಂದರು.
ಸಿದ್ದರಾಮಯ್ಯರ ಹೀನಾಯ ಸ್ಥಿತಿ ಯಾವ ರಾಜಕಾರಣಿಗೂ ಬೇಡ: ಈಶ್ವರಪ್ಪ
ಒಂದು ಕೋಟಿ ರಿಕವರಿ ಮಾಡಿಕೊಳ್ಳಲಿ
'ಅವರು ಮನಬಂದಂತೆ ಬರೆದುಕೊಳ್ಳುತ್ತಿದ್ದಾರೆ. ಇದರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕೋಣ ಎಂದುಕೊಂಡಿದ್ದೆ. ಆದರೆ, ಮಾನವೇ ಇಲ್ಲದವರ ವಿರುದ್ಧ ಮಾನನಷ್ಟ ಮೊಕದ್ದಮೆ ಹಾಕುವುದರಿಂದ ಪ್ರಯೋಜನ ಇಲ್ಲ. ಅವರು ನನ್ನಿಂದ ಒಂದು ಕೋಟಿ ರೂ ರಿಕವರಿ ಮಾಡಿಕೊಳ್ಳಲೂ ಆಗದೆ ಇದ್ದರೆ ಜನರು ನಿಮ್ಮನ್ನು ಆಯೋಗ್ಯರು ಎನ್ನಬೇಕಾಗುತ್ತದೆ. ಇಲ್ಲದಿದ್ದರೆ ನೀವು ಮಾಡಿದ ಆಪಾದನೆಗಳು ಸುಳ್ಳು ಎಂದು ನೀವೇ ಸ್ಪಷ್ಟೀಕರಣ ನೀಡಿ ಎಂದು ಸವಾಲು ಹಾಕಿದರು.
ನನ್ನ ಅಮೂಲ್ಯ ಸಮಯ ನಾಶ
ಐದು ವರ್ಷ ಮುಖ್ಯಮಂತ್ರಿಯಾಗಿದ್ದಾಗ ಬಳ್ಳಾರಿ ಜಿಲ್ಲೆಯನ್ನೇ ನಾಶ ಮಾಡಿದ್ದೀರಿ. ನನ್ನನ್ನು ಜೈಲಿನಲ್ಲಿ ಬಂಧಿಸಿಟ್ಟು ಜೀವನದ ಅಮೂಲ್ಯ ನಾಲ್ಕು ವರ್ಷಗಳನ್ನು ಹಾಳು ಮಾಡಿದ್ದೀರಿ. ಈಗಲೂ ಸಾರ್ವಜನಿಕರಿಗೆ ಅದೇ ಸುಳ್ಳುಗಳನ್ನು ಹೇಳುತ್ತಿದ್ದೀರಿ. ಆರೋಪಿಗಳನ್ನೇ ಜತೆಯಲ್ಲಿರಿಸಿಕೊಂಡು ತಿರುಗಾಡುತ್ತಿದ್ದೀರಿ ಎಂದು ಸಿದ್ದರಾಮಯ್ಯ ಅವರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಉಪ ಚುನಾವಣೆ : ಸಿದ್ದರಾಮಯ್ಯ, ಶ್ರೀರಾಮುಲು ನಡುವೆ ಟ್ವಿಟರ್ ವಾರ್!
ಏಕವಚನದಲ್ಲಿ ವಾಗ್ದಾಳಿ
ಡಿಕೆ ಶಿವಕುಮಾರ್ ದೆಹಲಿ ಮನೆಯಲ್ಲಿ ಕೋಟ್ಯಂತರ ರೂಪಾಯಿ ಅಕ್ರಮ ಹಣ ಸಿಕ್ಕಿದೆ. ಜನಾರ್ದನ ರೆಡ್ಡಿ ಮನೆಯಲ್ಲಿ ಹಣ ಸಿಗಲಿಲ್ಲ. ಬಂಧನ ಮಾಡಿ 65 ಭಾಗಗಳಲ್ಲಿ ಬೇಕಾದ ಎಲ್ಲ ಆಪ್ತರ ಮನೆ ಮೇಲೆ ದಾಳಿ ಮಾಡಿದ್ದಿರಲ್ಲ, ಅಲ್ಲೆಲ್ಲೂ ಹಣ ಸಿಗಲಿಲ್ಲ. ನಾಲ್ಕು ವರ್ಷ ಬಂಧನದಲ್ಲಿಟ್ಟು ವಿಚಾರಣೆ ಮಾಡಿದ್ದೀರಲ್ಲ. ಆಗಲೂ ಹಣ ಸಿಗಲಿಲ್ಲ. ಐದು ವರ್ಷ ಮುಖ್ಯಮಂತ್ರಿಯಾಗಿ ಇದ್ದೆಯಲ್ಲ, ಆಗ ನಿನಗೆ ನನ್ನಿಂದ ಒಂದು ರೂಪಾಯಿ ಕೂಡ ಸಿಗಲಿಲ್ಲ.
ಆದರೆ, ಡಿ.ಕೆ. ಶಿವಕುಮಾರ್ ಮನೆಯಲ್ಲಿ ಸಿಕ್ಕ ಹಣದ ಬಗ್ಗೆ ಮಾಧ್ಯಮಗಳಲ್ಲಿ ಪ್ರಸಾರ ಆಯ್ತಲ್ಲ, ಕಾಂಗ್ರೆಸ್ಸಿಗರು ನೀವು ತಲೆ ತಗ್ಗಿಸಬೇಕು ಎಂದರು.