Assembly election 2023: ಇನ್ನೊಂದು ವಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿ ಬಿಡುಗಡೆ: ಎಚ್.ಡಿ.ಕೆ
ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. ಹಾಗಾದರೆ ಎರಡನೇ ಪಟ್ಟಿ ಬಿಡುಗಡೆಯ ದಿನವನ್ನು ತಿಳಿಯಿರಿ.
ಬಳ್ಳಾರಿ, ಜನವರಿ, 31: ರಾಜ್ಯದಲ್ಲಿ ವಿಧಾನಸಭೆ ಚುನಾವಣೆ ಕಣ ಕಾವೇರಿದ್ದು, ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಮೂರು ಪಕ್ಷಗಳಲ್ಲಿ ಟಿಕೆಟ್ಗಾಗಿ ಭಾರಿ ಪೈಪೋಟಿ ನಡೆಸುತ್ತಲೇ ಇದ್ದಾರೆ. ಹಾಗೆಯೇ ಇನ್ನೊಂದು ವಾರದಲ್ಲಿ ಜೆಡಿಎಸ್ ಅಭ್ಯರ್ಥಿಗಳ ಎರಡನೇ ಪಟ್ಟಿಯನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಬಳ್ಳಾರಿಯಲ್ಲಿ ತಿಳಿಸಿದರು.
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಕುರೇಕುಪ್ಪ ಗ್ರಾಮದಲ್ಲಿ ಪಂಚರತ್ನ ಯೋಜನೆಯ ಯಾತ್ರೆಯಲ್ಲಿ ವೇಳೆ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಜೆಡಿಎಸ್ ಈಗಾಗಲೇ ರಾಜ್ಯದ 76 ಕ್ಷೇತ್ರಗಳ ಮೊದಲ ಪಟ್ಟಿಯನ್ನು ಪ್ರಕಟಿಸಿತ್ತು. ಈಗ ಎರಡನೇ ಪಟ್ಟಿ ಸಿದ್ಧವಾಗುತ್ತಿದೆ ಎಂದರು. ಹಾಸನದ ಏಳು ಸ್ಥಾನದಲ್ಲಿ ಯಾವುದೇ ಸಮಸ್ಯೆ ಇಲ್ಲ. ಫೆಬ್ರವರಿ 3ರಂದು ಎಲ್ಲಾ ಪ್ರಕ್ರಿಯೆಗಳು ನಡೆಯುತ್ತವೆ ಎಂದರು.
Janardhana Reddy : ಸಹೋದರನ ವಿರುದ್ಧ ಅಭ್ಯರ್ಥಿ ಘೋಷಿಸಿದ ರೆಡ್ಡಿ!
ಬಿಜೆಪಿ, ಕಾಂಗ್ರೆಸ್ ವಿರುದ್ಧ HDK ಆಕ್ರೋಶ
ಬಳ್ಳಾರಿಯಲ್ಲಿ ಅಷ್ಟೇ ಅಲ್ಲ, ರಾಜ್ಯದ ಇತರೇ ಜಿಲ್ಲೆಗಳಲ್ಲೂ ನಮ್ಮ ಪಕ್ಷದ ನಾಯಕರನ್ನು ಬಿಜೆಪಿ ಮತ್ತು ಕಾಂಗ್ರೆಸ್ನವರು ಹೈಜಾಕ್ ಮಾಡುತ್ತಿದ್ದಾರೆ. ಗಣಿಗಾರಿಕೆ ಹಗರಣ ಹೊರಬರಲು ನಾವೇ ಕಾರಣ. ಈ ಬಗ್ಗೆ ಲೋಕಾಯುಕ್ತರಿಗೆ ದಾಖಲೆಗಳನ್ನು ನೀಡಿ ತನಿಖೆಗೆ ಅದೇಶ ಮಾಡಿದ್ದೇನೆ. ನನ್ನ ಬಗ್ಗೆ 150 ಕೋಟಿ ಲಂಚದ ಆರೋಪದ ಸಿಡಿ ಗತಿ ಏನಾಯ್ತು ಎಂಬ ಬಗ್ಗೆ ಯಾರಿಗೂ ತಿಳಿಯುತ್ತಿಲ್ಲ. ರಾಜ್ಯದ ಉಪಮುಖ್ಯಮಂತ್ರಿಯಾಗಿ ನಂತರ ಮುಖ್ಯಮಂತ್ರಿಯಾಗಿ, 13 ಬಜೆಟ್ ನೀಡಿದವರಿಗೆ ಕ್ಷೇತ್ರ ಸಿಗದೆ ಒದ್ದಾಡುತ್ತಿದ್ದಾರೆ. ಸಿದ್ದರಾಮಯ್ಯ ಏಕೆ ವರುಣದಲ್ಲಿ ನಿಲ್ಲುತ್ತಿಲ್ಲ? ಅವರ ಮಗನಿಗಾಗಿ ಬೇರೆ ಕ್ಷೇತ್ರ ನೋಡುತ್ತಿದ್ದಾರೆ. ಹೀಗೆ ಕ್ಷೇತ್ರಕ್ಕೆ ಹುಡುಕಾಟ ಮಾಡುವವರಿಗೆ ನಮ್ಮ ಪಕ್ಷದ ಬಗ್ಗೆ ಮಾತನಾಡುವ ನೈತಿಕತೆ ಇಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ವಾಗ್ದಾಳಿ ನಡೆಸಿದರು.
ಕಾಂಗ್ರೆಸ್, BJP ಮುಖಂಡರಿಗೆ ಮಕ್ಕಳದ್ದೇ ಚಿಂತೆ
ಖರ್ಗೆ ಅವರು ಮಗನಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತಿದ್ದಾರೆ. ಯಡಿಯೂರಪ್ಪ ಅವರಿಗೆ ಅವರ ಮಗನ ರಾಜಕೀಯ ಚಿಂತೆ ಇದೆ. ಕಾಂಗ್ರೆಸ್ ಮತ್ತು ಬಿಜೆಪಿ ಮುಖಂಡರಿಗೆ ಮಕ್ಕಳದ್ದೇ ಚಿಂತೆಯಾಗಿದೆ. ಆದರೆ ನನ್ನ ಚಿಂತೆ ಆರು ಕೋಟಿ ಜನರ ಬಗ್ಗೆ ಎಂದು ಎಚ್.ಡಿ. ಕುಮಾರಸ್ವಾಮಿ ತಿಳಿಸಿದರು.
ಸಂತ್ರಸ್ತ ರೈತರನ್ನು ಭೇಟಿ ಮಾಡಿದ ಮಾಜಿ ಸಿಎಂ
ರಾಜ್ಯದಲ್ಲಿ ಜೆಡಿಎಸ್ ಅಧಿಕಾರಕ್ಕೆ ಬಂದರೆ ರೈತರ ಹಿತ ಕಾಯುವ ಹಾಗೂ ರೈತ ಪರ ಯೋಜನೆಗಳನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಕೆಲಸವಾಗಲಿದೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಹೇಳಿದರು. ಪಂಚರತ್ನ ಯಾತ್ರೆ ಹಿನ್ನೆಲೆಯಲ್ಲಿ ಸೋಮವಾರ ರಾತ್ರಿ ಕುಡಿತಿನಿ ಗ್ರಾಮಕ್ಕೆ ಆಗಮಿಸಿದ ಕುಮಾರಸ್ವಾಮಿ, ಧರಣಿ ನಿರತ ಭೂ ಸಂತ್ರಸ್ತ ರೈತರನ್ನು ಭೇಟಿ ಮಾಡಿ ಅವರ ಬೇಡಿಕೆ ಹಾಗೂ ಸಂಕಷ್ಟಗಳನ್ನು ಆಲಿಸಿದ್ದಾರೆ.
ನಮಗೆ ರೈತಾಪಿ ಜನರ ಬಗ್ಗೆ ಕಾಳಜಿಯಿದೆ
ಈ ವೇಳೆ ರೈತರನುದ್ದೇಶಿಸಿ ಮಾತನಾಡಿದ ಕುಮಾರಸ್ವಾಮಿ, ನಮ್ಮದು ರೈತ ಪರ ಸರ್ಕಾರ. ನಮಗೆ ರೈತಾಪಿ ಜನಗಳ ಪರ ಕಾಳಜಿಯಿದೆ. ಆದರೆ, ರಾಜ್ಯ ಸರ್ಕಾರ ರೈತ ವಿರೋಧಿಯಾಗಿ ವರ್ತಿಸುತ್ತಿದೆ. ಕೈಗಾರಿಕೆ ಉದ್ದೇಶಕ್ಕಾಗಿ ನಿಮ್ಮ ಭೂಮಿ ವಶಪಡಿಸಿಕೊಳ್ಳಲಾಗಿದೆ. ಆದರೆ ಕೈಗಾರಿಕೆ ಸ್ಥಾಪನೆ ಮಾಡಲಿಲ್ಲ. ಕುಟುಂಬಗಳಿಗೆ ಉದ್ಯೋಗ ನೀಡಲಿಲ್ಲ. ರೈತರಿಂದ ಕಡಿಮೆ ದರಕ್ಕೆ ಭೂಮಿ ಖರೀದಿಸಿ ಹೆಚ್ಚಿನ ದರಕ್ಕೆ ಮಾರಿಕೊಳ್ಳುವ ಹುನ್ನಾರ ನಡೆದಿದೆ ಎಂದು ಆರೋಪಿಸಿದರು. ಮಾತು ಮುಂದುವರಿಸಿದ ಅವರು, ರೈತರ ಭೂಮಿ ಕೆಲವರ ಪಾಲಾಗುವ ಸಾಧ್ಯತೆ ಇದೆ. ರೈತರನ್ನು ನಂಬಿಸಿ ಮೋಸ ಎಸಲಾಗುತ್ತಿದೆ. ರಾಜ್ಯ ಸರ್ಕಾರ ರೈತರ ಪರವಾದ ಯಾವುದೇ ಕಾಳಜಿಯಿಂದ ಕಾರ್ಯನಿರ್ವಹಿಸುತ್ತಿಲ್ಲ. ಮುಂದಿನ ಚುನಾವಣೆಯಲ್ಲಿ ನಮ್ಮ ಸರ್ಕಾರ ಅಧಿಕಾರಕ್ಕೆ ಬರುವ ವಿಶ್ವಾಸ ಇದೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಒಂದೇ ತಿಂಗಳಲ್ಲಿ ಭೂಸಂತ್ರಸ್ತರ ಸಮಸ್ಯೆ ಬಗೆಹರಿಸುತ್ತೇನೆ ಎಂದು ಭರವಸೆ ನೀಡಿದರು.
ಹೋಟೆಲ್ನಲ್ಲಿ ಮಂಡಕ್ಕಿ ಸವಿದ ಎಚ್.ಡಿ.ಕೆ
ಮಹಿಳೆಯ ಕಷ್ಟಕಂಡು ಮರುಗಿದ ಕುಮಾರಸ್ವಾಮಿ ಬೆಂಗಳೂರಿಗೆ ಪತಿಯನ್ನು ಕರೆದುಕೊಂಡು ಬಂದರೆ ಚಿಕಿತ್ಸೆ ಕೊಡಿಸುವೆ ಎಂದು ಭರವಸೆ ನೀಡಿದ್ದಾರೆ. ಇದೇ ವೇಳೆ ಮಹಿಳೆಗೆ ಬೆಂಗಳೂರಿಗೆ ಬರುವಂತೆ ಹಣದ ನೆರವನ್ನು ಕೂಡಾ ನೀಡಿದ್ದಾರೆ. ಕುಷ್ಟಗಿಯಲ್ಲಿ ಪಂಚರತ್ನ ಯಾತ್ರೆ ಮುಗಿಸಿ ಸಂಡೂರಿಗೆ ತೆರಳುವ ಮಾರ್ಗದ ನಡುವೆ ಕಂಪ್ಲಿ ತಾಲೂಕಿನ ದೇವಲಾಪುರ ಎಂಬ ಹಳ್ಳಿಯ ರಸ್ತೆ ಬದಿಯ ಸಣ್ಣ ಹೋಟೆಲ್ನಲ್ಲಿ ಮಂಡಕ್ಕಿ, ಚಹಾ ಸವಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಹೋಟೆಲ್ ಮಾಲೀಕ ನಾಗಪ್ಪ ಅವರ ಜೊತೆ ಕುಶಲೋಪರಿ ವಿಚಾರಿಸಿದರು.