ಬಳ್ಳಾರಿ ವಿಭಜಿಸಿ ವಿಜಯನಗರ ಜಿಲ್ಲೆಗೆ ಡೇಟ್ ಫಿಕ್ಸ್: ಆನಂದ್ ಸಿಂಗ್
ಬಳ್ಳಾರಿ, ನವೆಂಬರ್ 24: ಅಖಂಡ ಬಳ್ಳಾರಿ ಜಿಲ್ಲೆಯನ್ನು ವಿಭಜಿಸಿ ಹೊಸದಾಗಿ ವಿಜಯನಗರ ಜಿಲ್ಲೆಯನ್ನು ರಚಿಸಲು ಈಗಾಗಲೇ ದಿನಾಂಕ ಘೋಷಣೆಯಾಗಿದೆ ಎಂದು ಹೊಸಪೇಟೆ ಬಿಜೆಪಿ ಅಭ್ಯರ್ಥಿ ಆನಂದ್ ಸಿಂಗ್ ಹೇಳಿದ್ದಾರೆ. ಉಪ ಚುನಾವಣಾ ಪ್ರಚಾರ ಸಂದರ್ಭದಲ್ಲಿ ಈ ಮಾತನ್ನು ತೇಲಿಬಿಟ್ಟಿದ್ದಾರೆ. ಈ ಮೂಲಕ ವಿಜಯನಗರ ಜಿಲ್ಲೆ ಸ್ಥಾಪನೆಯಾಗುವುದು ಪಕ್ಕಾ ಆದಂತಾಗಿದೆ.
ಉಪ ಚುನಾವಣೆ; ವಿಜಯನಗರಕ್ಕೆ ಸಿಎಂ ಕೊಟ್ರು ಭರ್ಜರಿ ಉಡುಗೊರೆ
ಜನೇವರಿ 11 ರಂದು ಪ್ರತ್ಯೇಕ ವಿಜಯನಗರ ಜಿಲ್ಲೆಯ ನಾಮಕರಣವಾಗಲಿದೆ, ಮುಖ್ಯಮಂತ್ರಿ ಯಡಿಯೂರಪ್ಪನವರೇ ವಿಜಯನಗರ ಜಿಲ್ಲೆಗೆ ಚಾಲನೆ ನೀಡಲಿದ್ದಾರೆ ಮುಂದಿನ ಬಾರಿ ನಡೆಯುವ 'ಹಂಪಿ ಉತ್ಸವ' ವನ್ನು ಇನ್ನು ಮುಂದೆ 'ವಿಜಯನಗರ ಉತ್ಸವ'ವನ್ನಾಗಿ ಬದಲಾಯಿಸಲಾಗುವುದು, ಹಳೆಯ ವಿಜಯನಗರ ಸಾಮ್ರಾಜ್ಯದ ಗತ ವೈಭವವನ್ನು ಮರುಕಳಿಸುವಂತೆ ಮಾಡಲಾಗುವುದು ಎಂದು ಆನಂದ್ ಸಿಂಗ್ ತಿಳಿಸಿದ್ದಾರೆ.
ನಾನು ಮೈತ್ರಿ ಸರ್ಕಾರದಲ್ಲಿ ರಾಜೀನಾಮೆ ಕೊಡಲು ಇದೂ ಒಂದು ಕಾರಣ. ಕೊನೆಗೂ ನನ್ನು ಆಸೆ ಈಡೇರಿದೆ. ವಿಜಯನಗರ ಜಿಲ್ಲೆಯಾಗಬೇಕು ಮತ್ತು ಅಭಿವೃದ್ಧಿಯಾಗಲು ರಾಜೀನಾಮೆ ಕೊಡಬೇಕಾಗಿ ಬಂತು. ಈ ಸಂದರ್ಭದಲ್ಲಿ ಯಡಿಯೂರಪ್ಪರಿಗೆ ಅನಂತ ಧನ್ಯವಾದಗಳನ್ನು ತಿಳಿಸುತ್ತೇನೆ, ಅವರ ನಾಯಕತ್ವದಲ್ಲಿ ಅಭಿವೃದ್ದಿ ಪರ್ವ ಶುರುವಾಗಲಿದೆ ಎಂದು ಹೇಳಿದರು.