ಆನಂದ್ ಸಿಂಗ್ ರಾಜೀನಾಮೆ ನೀಡಿದ್ದು ಮೋದಿ, ಶಾ ಭಯದಿಂದಾಗಿ: ಕುಮಾರಸ್ವಾಮಿ
ಬಳ್ಳಾರಿ, ನವೆಂಬರ್ 25: ಅನರ್ಹ ಶಾಸಕ ಆನಂದ್ ಸಿಂಗ್ ರಾಜೀನಾಮೆ ನೀಡಲು ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಕಾರಣ ಎಂದು ಹೆಚ್.ಡಿ.ಕುಮಾರಸ್ವಾಮಿ ಹೇಳಿದ್ದಾರೆ.
ಬಳ್ಳಾರಿಯ ನಾಯಕನಹಳ್ಳಿಯಲ್ಲಿ ಜೆಡಿಎಸ್ ಅಭ್ಯರ್ಥಿ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಹೆಚ್ಡಿಕೆ, "ಆನಂದ್ ಸಿಂಗ್ ಬಳ್ಳಾರಿಯ ಮಣ್ಣು ಮಾರಿ ಸಿಕ್ಕಿಬಿದ್ದಿದ್ದರು, ಆಗ ಮೋದಿ, ಅಮಿತ್ ಶಾ ಒತ್ತಡ ಹೇರಿ ರಾಜೀನಾಮೆ ಕೊಡು ಇಲ್ಲಾ ಅಂದ್ರೆ ಬಿಡಲ್ಲ ಎಂದಿದ್ದಾರೆ. ಆಗ ಆನಂದ್ ಸಿಂಗ್ ರಾಜೀನಾಮೆ ನೀಡಿ ಸರ್ಕಾರ ಬೀಳಿಸಿದರು, ಮೋದಿಯಿಂದ ದೇಶ ಹಾಳಾಗುತ್ತಿದೆ" ಎಂದರು.
ಯಡಿಯೂರಪ್ಪ ಇದ್ದಲ್ಲಿಗೆ ಚಪ್ಪಲಿ ತಂದುಕೊಟ್ಟ ಆನಂದ್ಸಿಂಗ್
ಸ್ವಾತಂತ್ರ್ಯ ಬಂದು ಸುಮಾರು 70 ವರ್ಷಗಳು ಕಳೆದಿವೆ, ನಾವು ರಾಜಕಾರಣಿಗಳು ನಿಮಗೆ ಪ್ರತಿ ಚುನಾವಣಾ ಸಂದರ್ಭದಲ್ಲಿ ಆಶ್ವಾಸನೆ ನೀಡುತ್ತಾ ಬರುತ್ತೇವೆ. ಆದರೂ ಜನರ ಬದುಕು ಹಸನಾಗಿಲ್ಲ. ಇವತ್ತಿನ ರಾಜಕಾರಣದಲ್ಲಿ ನೈತಿಕತೆ ಉಳಿದಿಲ್ಲ, ರಾಜ್ಯದ ಮತದಾರರು ಎಚ್ಚೆತ್ತುಕೊಳ್ಳಬೇಕೆಂದರು.
ಗಣಿಧೂಳಿನಿಂದ ಇಲ್ಲಿ ಅನೇಕ ಜನರು ಬೆಳೆದಿದ್ದಾರೆ. ಜನಾರ್ಧನ ರೆಡ್ಡಿ, ಶ್ರೀರಾಮುಲುಗಿಂತ ನಾನೇನು ಕಮ್ಮಿ ಎಂಬಂತೆ ಆನಂದ್ ಸಿಂಗ್ ದೊಡ್ಡ ಬಂಗಲೆ ಕಟ್ಟಿಸಿದ್ದಾರೆ.
ಅವರಿಗೆ ದುಡ್ಡು ಎಲ್ಲಿಂದ ಬಂತು ಎಂದು ಪ್ರಶ್ನಿಸಿದರು. ರೈತರ ಮತ ಬೇಕು ಆದರೆ ರೈತರ ಸಮಸ್ಯೆಗಳು ರಾಜಕಾರಣಿಗಳಿಗೆ ಬೇಡವಾಗಿದೆ ಎಂದರು.
ಈಗ ನನ್ನ ಸರ್ಕಾರ ಬೀಳಿಸಿರುವ ಆನಂದ್ ಸಿಂಗ್ ಮೊದಲು ಬಿಜೆಪಿಯಿಂದಾನೇ ರಾಜಾಕಾರಣಕ್ಕೆ ಬಂದಿದ್ದು, 2018 ರಲ್ಲಿ ಕಾಂಗ್ರೆಸ್ ಗೆ ಬಂದು ಸ್ಪರ್ಧೆ ಮಾಡಿದರು. ಗೆದ್ದ ಮೊದಲ ದಿನದಿಂದಲೇ ಕಾಂಗ್ರೆಸ್ ಪಕ್ಷಕ್ಕೆ ಟೋಪಿ ಹಾಕಲು ನೋಡಿದರು. ಈಗ ವಿಜಯನಗರ ಅಭಿವೃದ್ದಿಯ ನೆಪ ಹೇಳುತ್ತಿದ್ದಾರೆ, ಹಾಗಾದರೆ ಬಿಜೆಪಿ ಬಿಟ್ಟು ಬರುವಾಗ ಅಭಿವೃದ್ದಿ ಕಾಣಲಿಲ್ಲವೇ ಎಂದು ಪ್ರಶ್ನೆ ಮಾಡಿದರು.
ಬಳ್ಳಾರಿ ವಿಭಜಿಸಿ ವಿಜಯನಗರ ಜಿಲ್ಲೆಗೆ ಡೇಟ್ ಫಿಕ್ಸ್: ಆನಂದ್ ಸಿಂಗ್
ಅನರ್ಹ ಶಾಸಕರಿಗಾಗಿ ಮುಖ್ಯಮಂತ್ರಿ ಪ್ರಾಣ ಕೊಡುವುದಾಗಿ ಹೇಳುತ್ತಾರೆ, ರಾಜ್ಯದ ಜನರಿಗಾಗಿ ಪ್ರಾಣ ಕೊಡುವುದಾಗಿ ಯಡಿಯೂರಪ್ಪ ಹೇಳಲಿಲ್ಲವಲ್ಲ ಎಂದು ಟೀಕಿಸಿದರು. ಎಲ್ಲ ಅನರ್ಹ ಶಾಸಕರನ್ನು ಸೋಲಿಸುವದೇ ನನ್ನ ಗುರಿ, ರಾಜ್ಯದ ಮತದಾರರು ಅವರನ್ನು ಸೋಲಿಸಲು ಪಣ ತೊಡಿ ಎಂದು ಕರೆ ನೀಡಿದರು.
ವಿಜಯನಗರ ವಿಧಾನಸಭಾ ಕ್ಷೇತ್ರಕ್ಕೆ ಡಿಸೆಂಬರ್ 05 ರಂದು ಉಪ ಚುನಾವಣೆ ನಡೆಯಲಿದ್ದು, ಡಿಸೆಂಬರ್ 09 ರಂದು ಫಲಿತಾಂಶ ಪ್ರಕಟಗೊಳ್ಳಲಿದೆ. ಇಲ್ಲಿ ಬಿಜೆಪಿಯಿಂದ ಆನಂದ್ ಸಿಂಗ್, ಕಾಂಗ್ರೆಸ್ ನಿಂದ ವಿ.ವೈ.ಘೋರ್ಪಡೆ ಮತ್ತು ಜೆಡಿಎಸ್ ನಿಂದ ಎನ್.ಎಂ.ನಬಿ ಚುನಾವಣಾ ಆಖಾಡದಲ್ಲಿದ್ದಾರೆ.