ಖಾತೆ ಹಂಚಿಕೆ ಅಸಮಾಧಾನ; ಕಾರ್ಯಾಲಯದ ಬೋರ್ಡ್ ತೆಗೆದುಹಾಕಿದ ಆನಂದ್ ಸಿಂಗ್
ವಿಜಯನಗರ, ಆಗಸ್ಟ್ 10: ಖಾತೆ ಹಂಚಿಕೆಯಿಂದ ಅಸಮಾಧಾನಗೊಂಡಿರುವ ವಿಜಯನಗರ ಕ್ಷೇತ್ರದ ಶಾಸಕ ಆನಂದ್ ಸಿಂಗ್ ಮಂಗಳವಾರ ತಮ್ಮ ಶಾಸಕರ ಕಾರ್ಯಾಲಯದ ಬೋರ್ಡ್ ತೆಗೆದು ಹಾಕಿದ್ದಾರೆ.
Recommended Video
ಈ ನಡೆ, ಆನಂದ್ ಸಿಂಗ್ ರಾಜೀನಾಮೆ ಕುರಿತು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ.
ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮೊದಲು ಶಾಸಕ ಆನಂದ್ ಸಿಂಗ್ಗೆ ಪ್ರವಾಸೋದ್ಯಮ ಖಾತೆ ನೀಡಲಾಗಿತ್ತು. ಆದರೆ ಈ ಖಾತೆ ಕುರಿತು ಆನಂದ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂಧನ ಅಥವಾ ಬೃಹತ್ ಖಾತೆಯ ಮೇಲೆ ಕಣ್ಣಿಟ್ಟಿದ್ದ ಅವರಿಗೆ ಈ ಖಾತೆ ನೀಡಿದ ಕುರಿತು ಮಾಧ್ಯಮದ ಮೂಲಕವೂ ಅಸಮಾಧಾನ ಹೊರಹಾಕಿದ್ದರು. ನಿರೀಕ್ಷಿಸಿದ ಖಾತೆ ನೀಡಿಲ್ಲ ಎಂದು ಹೇಳಿಕೊಂಡಿದ್ದರು.
ಖಾತೆ ಹಂಚಿಕೆ ಕುರಿತು ಕ್ಯಾತೆ; ಬೊಮ್ಮಾಯಿ ಭೇಟಿಯಾದ ಸಚಿವರು
"ಈ ಖಾತೆ ವಹಿಸುವ ಬದಲು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಶಾಸಕನಾಗಿ ಮುಂದುವರೆಯುವುದೇ ಉತ್ತಮ ಎಂದಿದ್ದರು.
"ಬಿಜೆಪಿ ಸರ್ಕಾರ ಬರಲು ಮೊದಲು ನಾನು ರಾಜೀನಾಮೆ ನೀಡಿದ್ದು, ಇದು ಎಲ್ಲರಿಗೂ ಗೊತ್ತಿರುವ ವಿಚಾರ. ಮೇ 1ರ ಮೊದಲೇ ನಾನು ರಾಜೀನಾಮೆ ನೀಡಿದ್ದೆ, ಹೀಗಂತ ನನ್ನಿಂದಲೇ ಸರ್ಕಾರ ಬಂದಿದೆ ಅನ್ನುವುದಲ್ಲ. ಆದರೆ ನನ್ನಂತೆ ಹಲವು ಜನರು ರಾಜೀನಾಮೆ ನೀಡಿದ ಬಳಿಕ ಸರ್ಕಾರ ರಚನೆಯಾಗಿದೆ. ಹೀಗಿರುವಾಗ ಕೇಳಿದ ಖಾತೆ ಕೊಡದೇ ಇದ್ದರೆ ಶಾಸಕನಾಗಿ ಉಳಿಯುವುದೇ ಒಳಿತು ಎನ್ನುವದು ನನ್ನ ನಿಲುವು,' ಎಂದು ಹೇಳಿಕೆ ನೀಡಿದ್ದರು.
ರಾಜೀನಾಮೆ ಕುರಿತು ನೇರ ಪ್ರಶ್ನೆಗೆ ಉತ್ತರಿಸಿದ್ದ ಆನಂದ್ ಸಿಂಗ್, "ಮಾಧ್ಯಮದವರ ಮುಂದೆ ಹೇಳುವ ಅವಶ್ಯಕತೆ ಇಲ್ಲ. ಎಲ್ಲವನ್ನೂ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿಯವರ ಮುಂದೆ ಮಾತನಾಡಿರುವೆ" ಎಂದು ಹೇಳಿದ್ದರು.
ಆದರೆ ಮಂಗಳವಾರ ಕಾರ್ಯಾಲಯದ ಬೋರ್ಡ್ ತೆಗೆದುಹಾಕಿರುವ ಅವರ ನಡೆ ಸಂಚಲನ ಮೂಡಿಸಿದೆ. ಇದರೊಂದಿಗೆ, ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಲು ಆನಂದ್ ಸಿಂಗ್ ಸಿದ್ಧರಾಗಿದ್ದಾರೆ ಎಂದು ಆನಂದ್ ಸಿಂಗ್ ಆಪ್ತ ಮೂಲಗಳು ತಿಳಿಸಿವೆ.
"ನನಗೆ ಯಾವ ಖಾತೆ ಕೊಟ್ಟರೂ ಸಮರ್ಥವಾಗಿ ನಿಭಾಯಿಸಿಕೊಂಡು ಹೋಗುತ್ತೇನೆ,'' ಎಂದು ನೂತನ ಸಚಿವ ಆನಂದ್ ಸಿಂಗ್ ಮೊದಲು ಹೇಳಿದ್ದರು. ಆನಂತರ ಹೊಸಪೇಟೆಯ ತಮ್ಮ ಕಚೇರಿಯಲ್ಲಿ ನೂತನ ಸಚಿವನಾಗಿ ಪ್ರಮಾಣವಚನ ಸ್ವೀಕರಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, "ನೂತನ ಸಿಎಂ ಆಗಿರುವ ಬಸವರಾಜ ಬೊಮ್ಮಾಯಿಯವರಿಗೆ ನಾನು ಇಂತಹದ್ದೇ ಸಚಿವ ಸ್ಥಾನ ಬೇಕು ಅಂತ ಬೇಡಿಕೆ ಇಟ್ಟಿದ್ದೇನೆ, ಅದನ್ನು ಮಾಧ್ಯಮದವರೊಂದಿಗೆ ಹೇಳುವ ಅವಶ್ಯಕತೆ ಇಲ್ಲ,'' ಎಂದಿದ್ದರು.
ಸಿಎಂ ಬಸವರಾಜ ಬೊಮ್ಮಾಯಿ ತಮ್ಮ ಸಂಪುಟದ 29 ಸಚಿವರಿಗೆ ಆಗಸ್ಟ್ 7ರ ಬೆಳಿಗ್ಗೆ ಖಾತೆ ಹಂಚಿಕೆ ಮಾಡಿದ್ದರು.
ಈ ಬಗ್ಗೆ ಮಾತನಾಡಿದ್ದ ಆನಂದ್ ಸಿಂಗ್, "ಯಡಿಯೂರಪ್ಪ ಸರ್ಕಾರದ ವೇಳೆಯೂ ಎರಡು ದಿನದಲ್ಲಿ ಮೂರು ಖಾತೆ ಬದಲಾಯಿಸಿದ್ದರು. ಇದು ಅವಮಾನ ಅಲ್ಲ, ಆದರೆ ನಿರಾಶೆ ಮಾಡಿರುವುದಕ್ಕೆ ಸಾಕಷ್ಟು ಬೇಸರವಾಗಿದೆ. ಈ ಬಾರಿಯೂ ನಾನು ಕೇಳಿರುವುದೇ ಒಂದು, ಮುಖ್ಯಮಂತ್ರಿ ಕೊಟ್ಟಿರುವುದೇ ಒಂದು. ಮತ್ತೊಮ್ಮೆ ಸಿಎಂ ಬಸವರಾಜ ಮೊಮ್ಮಾಯಿಗೆ ಮನವಿ ಮಾಡುವೆ ಕೊಡದಿದ್ದರೆ ನನ್ನ ದಾರಿ ನಾನು ನೋಡಿಕೊಳ್ಳುವೆ,'' ಎಂದು ವಿಜಯನಗರ ಬಿಜೆಪಿ ಶಾಸಕ ಆನಂದ್ ಸಿಂಗ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು.
"ಸದ್ಯಕ್ಕೆ ಕೊರೊನಾ ಮೂರನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆ ವಿಜಯನಗರ ಹಾಗೂ ಬಳ್ಳಾರಿ ಜಿಲ್ಲೆಯ ಸಂಪೂರ್ಣ ಸ್ಥಿತಿಗತಿ ವರದಿ ನೀಡುವಂತೆ ಮುಖ್ಯಮಂತ್ರಿಗಳು ಸೂಚನೆಯನ್ನು ನೀಡಿದ್ದಾರೆ, ನಾನು ಆ ಕೆಲಸದಲ್ಲಿ ಮಗ್ನನಾಗಿದ್ದೇನೆ. ಮುಂದೆ ತಿರ್ಮಾನ ಮಾಡುತ್ತೇನೆ'' ಎಂದು ಹೇಳಿದ್ದರು.