ರಾಜೀನಾಮೆ ಗುಟ್ಟು ಬಿಟ್ಟುಕೊಡದ ಆನಂದ್ ಸಿಂಗ್; ಬಿಎಸ್ವೈ ಜೊತೆ ಸಂಧಾನ?
ವಿಜಯನಗರ, ಆಗಸ್ಟ್ 11: "ನನ್ನ ರಾಜಕೀಯ ಜೀವನ ಇಲ್ಲಿಯೇ ಅಂತ್ಯವಾಗಬಹುದು ಅಥವಾ ನನ್ನ ಹೊಸ ಜೀವನ ಇಲ್ಲಿಂದಲೇ ಶುರುವಾಗಲೂಬಹುದು," ಎಂದು ಸಚಿವ ಆನಂದ್ ಸಿಂಗ್ ಹೇಳಿದರು.
ತಾವು ಬಯಸಿದ ಖಾತೆ ಸಿಕ್ಕಿಲ್ಲವೆಂದು ಸಚಿವ ಆನಂದ್ ಸಿಂಗ್ ಇದೀಗ ರಾಜೀನಾಮೆಗೆ ಮುಂದಾಗಿದ್ದಾರೆ ಎನ್ನುವ ಸುದ್ದಿಗಳು ಕಳೆದ ಎರಡು ದಿನಗಳಿಂದ ಹರಿದಾಡುತ್ತಿದೆ. ಸಿಎಂ ಬಸವರಾಜ ಬೊಮ್ಮಾಯಿ ವಿರುದ್ಧವೂ ಆಕ್ರೋಶ ಹೊರಹಾಕಿದ್ದಾರೆ ಎಂದು ಹೇಳಲಾಗಿದೆ.
ಬುಧವಾರ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ಮಾತನಾಡಿದ ಆನಂದ್ ಸಿಂಗ್, "ಸಿಎಂ ಬಸವರಾಜ ಬೊಮ್ಮಾಯಿ ಭೇಟಿ ಬಳಿಕವೇ ಮುಂದಿನ ನಿರ್ಧಾರ ತೆಗೆದುಕೊಳ್ಳುತ್ತೇನೆ. ನನ್ನದು 15 ವರ್ಷದಿಂದ ರಾಜಕಾರಣದಲ್ಲಿದ್ದೇನೆ, ನಾನು ಬ್ಲ್ಯಾಕ್ಮೇಲ್ ರಾಜಕಾರಣ ಮಾಡುವುದಿಲ್ಲ,"ಎಂದು ತಿಳಿಸಿದರು.
"ನನ್ನ ನಿರ್ಧಾರಕ್ಕೆ ಈಗಲೂ ಬದ್ಧವಾಗಿದ್ದೇನೆ, ನನ್ನ ರಾಜಕೀಯ ಎಲ್ಲವೂ ಕೃಷ್ಣ ಪರಮಾತ್ಮನ ಕೈಯಲ್ಲಿದೆ. ನಾನು ನಾಲ್ಕು ಬಾರಿ ಶಾಸಕನಾಗಿದ್ದೇನೆ, ಮೂರು ಬಾರಿ ಮಂತ್ರಿಯಾಗಿದ್ದೇನೆ. ನನಗೆ ಯಾವುದೇ ವೈಯಕ್ತಿಕ ಜೀವನಕ್ಕಾಗಿ ನಾನು ರಾಜಕೀಯಕ್ಕೆ ಬರಲಿಲ್ಲ. ಸೇವೆಗೆಂದು ರಾಜಕೀಯ ಪ್ರವೇಶ ಮಾಡಿದೆ."
"ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ನಾನು ಕೇಳಿದ್ದೆಲ್ಲವನ್ನೂ ಕೊಟ್ಟಿದ್ದಾರೆ. ವಿಜಯನಗರ ಜಿಲ್ಲೆ ಮಾಡಿಕೊಟ್ಟಿದ್ದು, ಏತ ನೀರಾವರಿ ಯೋಜನೆಯನ್ನೂ ಕೊಟ್ಟಿದ್ದರು. ಅವರ ಮಾತಿಗೆ ಗೌರವ ಕೊಟ್ಟಿದ್ದೇನೆ," ಎಂದು ಆನಂದ್ ಸಿಂಗ್ ಹೇಳಿದರು.
"ಮೊನ್ನೆ ಸಿಎಂ ಬಸವರಾಜ ಬೊಮ್ಮಾಯಿಯವರನ್ನು ಭೇಟಿಯಾಗಿ ನನ್ನ ಎಲ್ಲ ಭಾವನೆಗಳನ್ನು ಅವರ ಬಳಿ ನಾಲ್ಕು ಗೋಡೆಗಳ ಮಧ್ಯೆ ಹೇಳಿದ್ದೇನೆ. ಮತ್ತೊಮ್ಮೆ ಕೂಡ ಭೇಟಿಯಾಗುತ್ತೇನೆ," ಎಂದರು.
"ನನಗೆ ಬೆಳಿಗ್ಗೆಯಿಂದಲೂ ಹಲವು ಜನ ಕರೆ ಮಾಡಿದ್ದರು. ಆದರೆ ಸ್ವೀಕರಿಸಲು ಆಗಲಿಲ್ಲ. ಕರೆ ಸ್ವೀಕರಿಸದಿದ್ದಕ್ಕೆ ಎಲ್ಲರಲ್ಲೂ ಕ್ಷಮೆ ಕೇಳುತ್ತೇನೆ. ಮುಖ್ಯಮಂತ್ರಿಗಳು ಕರೆದಿದ್ದಾರೆ, ನಾಳೆ ಶುಕ್ರವಾರ ಅವರ ಭೇಟಿ ಮಾಡುತ್ತೇನೆ," ಎಂದು ಆನಂದ್ ಸಿಂಗ್ ತಿಳಿಸಿದರು.
"ನಾನು ರಾಜ್ಯದ ಅತಿ ದೊಡ್ಡ ರಾಜಕಾರಣಿಯಲ್ಲ, ನನ್ನ ಶ್ರದ್ಧೆಯಿಂದ, ಪ್ರಾಮಾಣಿಕತೆಯಿಂದ ನನ್ನ ಕ್ಷೇತ್ರದ ಜನರ ಆಶೀರ್ವಾದದಿಂದ ನಾನು ರಾಜಕೀಯದಲ್ಲಿ ಬೆಳೆದಿದ್ದೇನೆ. ನಾನು ಅವರಿಗೆ ನೋವಾಗುವಂತೆ ನಡೆದುಕೊಂಡರೆ ಕ್ಷಮೆಯಾಚಿಸುತ್ತೇನೆ."
"ನಾನು ನೇರವಾಗಿ ಕೇಳುತ್ತೇನೆ, ತಪ್ಪಿದ್ದರೆ ತಿದ್ದಿಕೊಳ್ಳುತ್ತೇನೆ. ಪಕ್ಷಕ್ಕೆ, ನಾಯಕರಿಗೆ ಮುಜುಗರವಾಗುವಂತೆ ನಡೆದುಕೊಂಡಿಲ್ಲ. ಪಕ್ಷ, ಕಾರ್ಯಕರ್ತರ ರಕ್ಷಣೆ ನನಗೆ ಮುಖ್ಯವಾಗಿರುತ್ತದೆ," ಎಂದು ಹೇಳಿದರು.
"ನನಗೆ ಕೆಲವು ನಾಯಕರು ರಕ್ಷಣೆ ನೀಡುತ್ತಾರೆ ಎಂಬ ಅತಿಯಾದ ಆತ್ಮವಿಶ್ವಾಸದಲ್ಲಿದ್ದೆ, ಆದರೆ ಯಾರೂ ನನಗೆ ರಕ್ಷಣೆಗೆ ನೀಡುವುದಿಲ್ಲ ಎನ್ನುವುದು ಗೊತ್ತಾಗಿದೆ. ನನಗೆ ವೇಣುಗೋಪಾಲ ಕೃಷ್ಣ ರಕ್ಷಣೆ ಕೊಡುತ್ತಾನೆ."
"ನಮ್ಮ ಹಿರಿಯ ನಾಯಕರು ಮಾಧ್ಯಮಗಳ ಮುಂದೆ ರಾಜಕೀಯ ಬೆಳವಣಿಗೆ ವಿಷಯದ ಕುರಿತು ಪ್ರತಿಕ್ರಿಯೆ ಕೊಡಬೇಡ ಎಂದಿದ್ದಾರೆ. ಹಾಗಾಗಿ ನಾನು ಕೊಡುವುದಿಲ್ಲ."
"ನಮ್ಮ ಪಕ್ಷದ ಮೇಲೆ, ನಾಯಕರ ಮೇಲೆ ನನಗೆ ಈಗಲೂ ವಿಶ್ವಾಸವಿದೆ. ಆದರೆ ಅವರಿಗೆ ನನ್ನ ಮೇಲೆ ವಿಶ್ವಾಸವಿದೆಯೋ, ಇಲ್ಲವೋ ಎನ್ನುವುದು ನನಗೆ ಅವಮಾನವಿದೆ. ನಾನು ಯಾರ ವಿರುದ್ಧವೂ ಟೀಕೆ ಮಾಡುವುದಿಲ್ಲ," ಎಂದರು.
"ಹೊಸಪೇಟೆಯ ವೇಣುಗೋಪಾಲಸ್ವಾಮಿ ದೇವಸ್ಥಾನದಿಂದಲೇ ಆರಂಭವಾಗಿತ್ತು, ಇಲ್ಲಿಂದಲೇ ಅಂತ್ಯವಾಗಬಹುದು," ಎಂದು ಹೇಳಿದ ಸಚಿವ ಆನಂದ್ ಸಿಂಗ್, ಬುಧವಾರ ಕೂಡ ಅದೇ ದೇವಸ್ಥಾನದಲ್ಲಿ ಪೂಜೆ ಮಾಡಿ ಬೆಂಗಳೂರಿಗೆ ಹೆಲಿಕಾಪ್ಟರ್ ಏರಿ ಹೊರಟರು. ಆದರೂ ರಾಜೀನಾಮೆ ಗುಟ್ಟು ಬಿಟ್ಟುಕೊಡಲಿಲ್ಲ.
ಸುರಪುರ ಬಿಜೆಪಿ ಶಾಸಕ ರಾಜೂಗೌಡ ಜೊತೆ ಶುಕ್ರವಾರ ಬೆಂಗಳೂರಿಗೆ ಹೋಗಿ ಬಿ.ಎಸ್. ಯಡಿಯೂರಪ್ಪ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರನ್ನು ಭೇಟಿ ಮಾಡಿ ತಮ್ಮ ರಾಜೀನಾಮೆ ಕುರಿತು ಚರ್ಚಿಸಲಿದ್ದಾರೆ ಎಂದು ಹೇಳಲಾಗುತ್ತಿದೆ.
Recommended Video
ಸಚಿವ ಖಾತೆ ಬದಲಾವಣೆ ಬೇಡಿಕೆ ಇಟ್ಟಿದ್ದು, ಇದನ್ನು ಮುಖ್ಯಮಂತ್ರಿಗಳು ಈಡೇರಿಸಲಿದ್ದಾರಾ ಕಾದು ನೋಡಬೇಕಿದೆ.