ಅಸಮಾಧಾನಗೊಂಡಿದ್ದ ಸಚಿವ ಆನಂದ್ ಸಿಂಗ್ ಥಂಡಾ; ಶಾಸಕರ ಕಾರ್ಯಾಲಯ ಪುನರಾರಂಭ
ವಿಜಯನಗರ, ಆಗಸ್ಟ್ 14: ಪ್ರವಾಸೋದ್ಯಮ ಸಚಿವ ಆನಂದ್ ಸಿಂಗ್ ಖಾತೆ ಹಂಚಿಕೆ ವಿಚಾರಕ್ಕೆ ಸಿಎಂ ಬಸವರಾಜ ಬೊಮ್ಮಾಯಿ ಮೇಲೆ ಮುನಿಸಿಕೊಂಡು ಹೊಸಪೇಟೆ ನಗರದ ಶಾಸಕರ ಕಚೇರಿಯ ನಾಮಫಲಕ ತೆರವುಗೊಳಿಸಿದ್ದರು. ಅದರೆ ಶುಕ್ರವಾರದಿಂದ ಮತ್ತೆ ಕಾರ್ಯರಂಭ ಮಾಡಿದ್ದಾರೆ.
ಸಚಿವ ಆನಂದ್ ಸಿಂಗ್ ವಿಜಯನಗರ ಜಿಲ್ಲೆಯ ಹೊಸಪೇಟೆ ನಗರದಲ್ಲಿ ಶುಕ್ರವಾರ ಶ್ರೀವೇಣುಗೋಪಾಲ ದೇವಸ್ಥಾನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, "ನನ್ನ ಮನವಿ ಏನಿದೆಯೋ ಅದನ್ನು ಸಿಎಂ ಬಸವರಾಜ ಬೊಮ್ಮಾಯಿಗೆ ನೇರವಾಗಿಯೇ ಹೇಳಿದ್ದೇನೆ. ಮಾಜಿ ಸಿಎಂ ಯಡಿಯೂರಪ್ಪ ನಮ್ಮ ಹಿರಿಯ ನಾಯಕರು. ಅವರ ಆಶೀರ್ವಾದ ಪಡೆಯಲು ಭೇಟಿಯಾಗಿದ್ದೇನೆ," ಎಂದು ಹೇಳಿದರು.
"ಯಡಿಯೂರಪ್ಪನವರು ಸಹ ದುಡುಕಿನ ನಿರ್ಧಾರ ತೆಗೆದುಕೊಳ್ಳಬೇಡವೆಂದು ಹೇಳಿದ್ದಾರೆ. ಅದರಂತೆ ನಾನು ಸ್ವಲ್ಪ ದಿನ ಕಾಯುತ್ತೇನೆ. ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಋಣ ತೀರಿಸಲು ಸಾಧ್ಯವಿಲ್ಲ. ನೂತನ ವಿಜಯನಗರ ಜಿಲ್ಲೆಯನ್ನು ಘೋಷಿಸುವ ಮೂಲಕ ದೊಡ್ಡ ಕೊಡುಗೆಯನ್ನೇ ನೀಡಿದ್ದಾರೆ. ನಾನು ಕೇಳಿದ್ದಕ್ಕಿಂತ ಹೆಚ್ಚಿನ ಮಟ್ಟದಲ್ಲೇ ನೀಡಿದ್ದಾರೆ," ಎಂದರು.
"ಖಾತೆ ಬದಲಾವಣೆ ವಿಚಾರವಾಗಿ ದೆಹಲಿಗೆ ತೆರಳುತ್ತಿದ್ದೇನೆ ಎಂಬುದು ಸುಳ್ಳು, ನಾನು ದೆಹಲಿಗೆ ಹೋಗುವುದಿಲ್ಲ ಎಂದು ಸ್ಪಷ್ಟಪಡಿಸಿದ ಸಚಿವ ಆನಂದ್ ಸಿಂಗ್, ರಾಜಕೀಯವಾಗಿ ಸದ್ಯಕ್ಕೆ ನಾನು ಏನು ಮಾತನಾಡುವುದಿಲ್ಲ. ನೂತನ ವಿಜಯನಗರ ಜಿಲ್ಲೆಯಲ್ಲಿ ಸ್ವಾತಂತ್ರ್ಯ ದಿನದಂದು ಧ್ವಜಾರೋಹಣವನ್ನು ನೆರವೇರಿಸುವ ಜವಾಬ್ದಾರಿಯನ್ನು ನನಗೆ ನೀಡಿದ್ದಾರೆ. ಅದರಂತೆ ಆ.15 ರಂದು ಧ್ವಜಾರೋಹಣ ನೆರವೇರಿಸುವೆ," ಎಂದು ತಿಳಿಸಿದರು.
ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಂಪುಟದಲ್ಲಿ ಮೊದಲು ಶಾಸಕ ಆನಂದ್ ಸಿಂಗ್ಗೆ ಪ್ರವಾಸೋದ್ಯಮ ಖಾತೆ ನೀಡಲಾಗಿತ್ತು. ಆದರೆ ಈ ಖಾತೆ ಕುರಿತು ಆನಂದ್ ಸಿಂಗ್ ಅಸಮಾಧಾನ ವ್ಯಕ್ತಪಡಿಸಿದ್ದರು. ಇಂಧನ ಅಥವಾ ಬೃಹತ್ ಖಾತೆಯ ಮೇಲೆ ಕಣ್ಣಿಟ್ಟಿದ್ದ ಅವರಿಗೆ ಈ ಖಾತೆ ನೀಡಿದ ಕುರಿತು ಮಾಧ್ಯಮದ ಮೂಲಕವೂ ಅಸಮಾಧಾನ ಹೊರಹಾಕಿದ್ದರು. ನಿರೀಕ್ಷಿಸಿದ ಖಾತೆ ನೀಡಿಲ್ಲ ಎಂದು ಹೇಳಿಕೊಂಡಿದ್ದರು.
ಈ ಖಾತೆ ವಹಿಸುವ ಬದಲು ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟು ಶಾಸಕನಾಗಿ ಮುಂದುವರೆಯುವುದೇ ಉತ್ತಮ ಎಂದಿದ್ದರು.
ಸಚಿವ ಆನಂದ್ ಸಿಂಗ್ ಖಾತೆ ಹಂಚಿಕೆ ವಿಚಾರವಾಗಿ ಅಸಮಧಾನಗೊಂಡಿದ್ದು, ಆ.10 ರಂದು ಸಂಜೆ ಹೊಸಪೇಟೆ ನಗರದ ರಾಣಿಪೇಟೆಯಲ್ಲಿರುವ ಶಾಸಕರ ಕಾರ್ಯಾಲಯದ ನಾಮಫಲಕವನ್ನು ತೆರವುಗೊಳಿಸಿದ್ದರು. ನಂತರ ನಗರದ ಶ್ರೀವೇಣುಗೋಪಾಲ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಮಾತನಾಡಿದ್ದ ಅವರು, ನನ್ನ ರಾಜಕೀಯ ಜೀವನ ಇಲ್ಲಿಂದಲೇ ಆರಂಭವಾಗಿದ್ದು, ಇಲ್ಲಿಂದಲ್ಲೇ ಅಂತ್ಯವಾಗುವುದು ಎಂದು ಹೇಳಿ ರಾಜೀನಾಮೆ ನೀಡುವ ಮುನ್ಸೂಚನೆ ನೀಡಿದ್ದರು.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಆನಂದ ಸಿಂಗ್ರನ್ನು ಬೆಂಗಳೂರಿಗೆ ಬಂದು ಭೇಟಿಯಾಗಲು ಸೂಚಿಸಿದ್ದರು. ಅದರಂತೆ ಆ.11 ರಂದು ಮಧ್ಯಾಹ್ನ ಸುರಪುರ ಬಿಜೆಪಿ ಶಾಸಕ ರಾಜುಗೌಡದೊಂದಿಗೆ ಸಚಿವ ಆನಂದ ಸಿಂಗ್ ಬೆಂಗಳೂರಿಗೆ ತೆರಳಿದ್ದರು. ಮೊದಲು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪರನ್ನು ಭೇಟಿ ಮಾಡಿ, ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯೊಂದಿಗೆ ಸಹ ಮಾತುಕತೆ ನಡೆಸಿದ್ದರು.
ಈ ವೇಳೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಚಿವ ಆರ್. ಅಶೋಕ, ಶಾಸಕ ರಾಜುಗೌಡರವರು ಸಚಿವ ಆನಂದ್ ಸಿಂಗ್ರನ್ನು ಸಮಾಧಾನ ಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಒಗ್ಗಟ್ಟಾಗಿ ಹೋಗಲಿದ್ದೇವೆ. ನಮ್ಮಲ್ಲಿ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ ಎಂದು ಖುದ್ದು ಸಿಎಮ ಬೊಮ್ಮಾಯಿ ಮಾಧ್ಯಮಗಳಿಗೆ ಹೇಳಿದ್ದರು.
ನನ್ನ ಮನವಿ ಏನಿದೆಯೋ ಅದನ್ನು ಸಿಎಂ ಬಸವರಾಜ ಬೊಮ್ಮಾಯಿಗೆ ನೇರವಾಗಿಯೇ ಹೇಳಿದ್ದೇನೆ ಎಂದು ಸಚಿವ ಆನಂದ್ ಸಿಂಗ್ ಹೊಸಪೇಟೆಯಲ್ಲಿ ಹೇಳಿದರು. #Hospet #Anandsingh @BSBommai pic.twitter.com/uNq0hoPwtF
— oneindiakannada (@OneindiaKannada) August 14, 2021
ಇದರಿಂದ ಆನಂದ ಸಿಂಗ್ ಅಸಮಾಧಾನವನ್ನು ತಣಿಸಲು ಬಿಜೆಪಿ ನಾಯಕರು ಯಶಸ್ವಿಯಾಗಿದ್ದು, ಸಚಿವ ಖಾತೆ ಬದಲಾವಣೆ ವಿಚಾರವನ್ನು ಮುಂದಿನ ದಿನಗಳಲ್ಲಿ ಬಗೆಹರಿಸುವುದಾಗಿ ಭರವಸೆ ನೀಡಿದ್ದಾರೆ ಎನ್ನಲಾಗಿದೆ. ಆದ್ದರಿಂದ ಶುಕ್ರವಾರದಿಂದಲೇ ಜನರ ಅಹವಾಲು ಸ್ಬೀಕರಿಸಲು ಶಾಸಕರ ಕಾರ್ಯಾಲಯವನ್ನು ಆರಂಭಿಸಲಾಗಿದೆ.